ಪದವೀಧರರು ದೇಶ, ವಿಶ್ವಕ್ಕೆ ಮತ್ತಷ್ಟು ಕೊಡುಗೆ ನೀಡುವಂತಾಗಲಿ: ಡಾ.ಎಸ್.ಸೋಮನಾಥ್

| Published : Jul 30 2025, 12:45 AM IST

ಸಾರಾಂಶ

ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪದವೀಧರರ ಸಂಖ್ಯೆ ಹೆಚ್ಚುತ್ತಿದೆ. ನಿಮ್ಮ ವೃತ್ತಿ ಹಾಗೂ ಖಾಸಗಿ ಜೀವನದಲ್ಲಿ ವ್ಯಕ್ತಿತ್ವ, ಪ್ರಾಮಾಣಿಕತೆ ಮತ್ತು ಸಮಗ್ರತೆಗೆ ಮನ್ನಣೆ ನೀಡಬೇಕು. ಯಶಸ್ಸು ಸಿಕ್ಕಿದಾಗ ಅದಕ್ಕೆ ವಿನಮ್ರತೆ ಬೆರೆತರೆ ಅದು ಯಶಸ್ವಿ ಬದುಕಿಗೆ ಸಾರ್ಥಕತೆ ದೊರೆತಂತೆ ಎಂದು ಚಿನ್ನದ ಪದಕ ವಿಜೇತರು ಹಾಗೂ ಪದವೀಧರರಿಗೆ ಶುಭ ಕೋರಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಭಾರತ ವಿಶ್ವಕ್ಕೆ ಹಲವು ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ಹೊಸ ಯೋಜನೆ, ಯೋಚನೆಗಳ ಮೂಲಕ ಮತ್ತಷ್ಟು ಕೊಡುಗೆಗಳನ್ನು ನೀಡುವತ್ತ ಗಮನ ಹರಿಸಬೇಕು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ ) ಮಾಜಿ ಅಧ್ಯಕ್ಷ ಹಾಗೂ ಚಾಣಕ್ಯ ವಿವಿ ಕುಲಾಧಿಪತಿ ಡಾ.ಎಸ್.ಸೋಮನಾಥ್ ಅಭಿಪ್ರಾಯಪಟ್ಟರು.

ತಾಲೂಕಿನ ಬಿ.ಜಿ ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿ, ಇಲ್ಲಿಯವರೆಗೆ ನಿಮ್ಮ ಬದುಕಿನ ಧಿಕ್ಕೆ ಬೇರೆ ಇತ್ತು. ಪದವೀಧರರಾದ ನಿಮಗೆ ಇಂದಿನಿಂದ ಖಾಸಗಿ ಹಾಗೂ ವೃತ್ತಿಪರ ಬದುಕು ತೆರೆದುಕೊಳ್ಳುತ್ತಾ ಹೋಗುತ್ತದೆ. ಇಂದಿನಿಂದ ನಿಮ್ಮಲ್ಲಿನ ಜ್ಞಾನದ ಜೊತೆಗೆ ಕೌಶಲ್ಯವನ್ನು ಬಳಸಿಕೊಂಡು ಸಾಧನೆಯತ್ತ ಮುಖಮಾಡಬೇಕು ಎಂದು ಕಿವಿಮಾತು ಹೇಳಿದರು.

ಇಂದು ಭಾರತೀಯರು ಮಂಗಳಯಾನ ಮತ್ತು ಚಂದ್ರಯಾನ- 3 ಯಶಸ್ವಿಯಾಗುವ ಮೂಲಕ ಜಗತ್ತೇ ನಿಬ್ಬೆರಗಾಗುವಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಯ ಉತ್ತುಂಗದಲ್ಲಿದ್ದಾರೆ. ಇಂದು ಅನೇಕ ಸಮಸ್ಯೆಗಳನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ ಮೂಲಕ ಬಗೆಹರಿಸಲು ಸಾಧ್ಯವಾಗುತ್ತಿದೆ ಎಂದರು.

ಇಂದು ಬಾಹ್ಯಾಕಾಶ ಸೇರಿ ಆರೋಗ್ಯ, ಔಷಧ ಕ್ಷೇತ್ರದಲ್ಲೂ ಅನೇಕ ಬದಲಾವಣೆಗಳಾಗಿವೆ. ನಾವು ಗರ್ವ ಪಡುವಂತಹ ಸನ್ನಿವೇಶವನ್ನು ಇಂದು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ್ದೇವೆ. ಹಣಕಾಸು ನಿಯಂತ್ರಣಕ್ಕೆ ಬ್ಲಾಕ್ ಚೈನ್ ಸಿಸ್ಟಂ ತಯಾರಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪದವೀಧರರ ಸಂಖ್ಯೆ ಹೆಚ್ಚುತ್ತಿದೆ. ನಿಮ್ಮ ವೃತ್ತಿ ಹಾಗೂ ಖಾಸಗಿ ಜೀವನದಲ್ಲಿ ವ್ಯಕ್ತಿತ್ವ, ಪ್ರಾಮಾಣಿಕತೆ ಮತ್ತು ಸಮಗ್ರತೆಗೆ ಮನ್ನಣೆ ನೀಡಬೇಕು. ಯಶಸ್ಸು ಸಿಕ್ಕಿದಾಗ ಅದಕ್ಕೆ ವಿನಮ್ರತೆ ಬೆರೆತರೆ ಅದು ಯಶಸ್ವಿ ಬದುಕಿಗೆ ಸಾರ್ಥಕತೆ ದೊರೆತಂತೆ ಎಂದು ಚಿನ್ನದ ಪದಕ ವಿಜೇತರು ಹಾಗೂ ಪದವೀಧರರಿಗೆ ಶುಭ ಕೋರಿದರು.

ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಪದವೀಧರರು ದೇಶದ ಆಸ್ತಿ. ಎಲ್ಲಾ ವಿಶ್ವವಿದ್ಯಾಲಯದ ಘಟಿಕೋತ್ಸವ ಒಂದೆಡೆಯಾದರೆ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಘಟಿಕೋತ್ಸವದ ಬೆಲೆಯೇ ಬೇರೆ. ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ಕನಸನ್ನು ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ನನಸು ಮಾಡುತ್ತಿದ್ದಾರೆ ಎಂದರು.

ಆದಿಚುಂಚನಗಿರಿ ವಿದ್ಯಾಸಂಸ್ಥೆ ಮಹತ್ತರ ಸಾಧನೆ ಮಾಡಿದೆ. ಪದವೀಧರರು ದೇಶಕ್ಕೆ ಕೊಡುಗೆ ಕೊಡುವತ್ತ ಗಮನಹರಿಸಬೇಕು. ಪದವೀಧರರಾದ ನಿಮಗೆ ಇಂದಿನಿಂದ ಸವಾಲುಗಳು ಹೆಚ್ಚು. ಶಿಕ್ಷಣದ ಜೊತೆಗೆ ಜ್ಞಾನ ಕೂಡ ಅಗತ್ಯ ಎಂದು ತಿಳಿಸಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಚಿನ್ನದ ಪದಕ ವಿಜೇತರಿಗೆ, ರ್‍ಯಾಂಕ್ ಪಡೆದವರಿಗೆ ಹಾಗೂ ಪಿಎಚ್ ಡಿ ಪಡೆದ ಸಾಧಕರಿಗೆ ಶುಭಾಶಯ ಕೋರಿ ಆಶೀರ್ವದಿಸಿದರು.

ದತ್ತಿನಿಧಿ ಪುರಸ್ಕಾರ:

ಮೆಡಿಸಿನ್ ವಿಭಾಗದಲ್ಲಿ ರೇಖಾ ಎಸ್. ಅವರಿಗೆ ಕಣಗಲ್ ಎಲ್. ಸತ್ಯನಾರಾಯಣ ದತ್ತಿ ಪುರಸ್ಕಾರ. ನರ್ಸಿಂಗ್ ವಿಭಾಗದಲ್ಲಿ ಮಂಪಿ ಡೈಗೆ ಚಂದ್ರಶೇಖರ್ ಶೆಟ್ಟಿ ದತ್ತಿ ಪುರಸ್ಕಾರ, ಒಬಿಜಿ ವಿಭಾಗದಿಂದ ದೀಕ್ಷಿತ ಕೆ. ಅಯ್ಯರ್ ಗೆ ನಂಜಮ್ಮ ಲಕ್ಷ್ಮೇಗೌಡ ದತ್ತಿ ಪುರಸ್ಕಾರ, ಮೆಡಿಸಿನ್ ವಿಭಾಗದಿಂದ ದರ್ಶನ್ ಎಚ್. ಅವರಿಗೆ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಮತ್ತು ಸುಶೀಲ ಜಯರಾಮ್ ದತ್ತಿ ಪುರಸ್ಕಾರ, ಜಯಪ್ರಕಾಶ್ ನಾಯರ್ ಸಂಶೋಧನಾ ಶ್ರೇಷ್ಠ ಪ್ರಶಸ್ತಿಯನ್ನು ಪ್ರೊ.ಪ್ರಕಾಶ್ ಎನ್ ಗೌಂಡಣ್ಣ ನವರು ಮುಡಿಗೇರಿಸಿಕೊಂಡರು.

ಚಿನ್ನದ ಪದಕ ವಿಜೇತರು:

ಮೆಡಿಸಿನ್ ವಿಭಾಗ: ಡಾ.ದೀಕ್ಷಿತ ಕೆ. ಅಯ್ಯರ್, ಇಂಜಿನಿಯರಿಂಗ್ ವಿಭಾಗ: ಡಾ.ಬಿ.ವರ್ಷ, ಲಿಖಿತ್ ಆರ್., ಅರ್ಬಿಯ ಮುಸ್ಕಾನ್ ಬಿಂದು ವಿ.ಆರ್., ಪ್ರೀತಿ ಕೆ.ಡಿ., ರೇಖಾರಾಣಿ, ನಿತ್ಯಶ್ರೀ ಎಸ್. ಜೈನ್, ಮನೋಜ್ ಗೌಡ ಡಿ.ಕೆ., ಪುನೀತ್ ಕುಮಾರ್, ಉಲ್ಲಾಸ್ ಎಸ್., ಜೀವಿತ ಆರ್., ಜ್ಞಾನ ಡಿ.ಎನ್ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.

ಡಾ.ಅದಾರಿ ರಮೇಶ್, ಡಾ.ಶಿವಕುಮಾರ್ ಯಾದವ್, ಡಾ.ಮಹೇಶ್ ಡಿ.ಎಸ್., ಡಾ.ಅಂಜಲಿ ಬಿ.ವಿ., ಡಾ.ಕವಿತಾ ಬಿ.ಸಿ., ಡಾ.ಮಲ್ಲಮ್ಮ ಟಿ., ಡಾ.ಯೋಗಾನಂದ ಶ್ರೇಷ್ಠ, ಡಾ.ಮಹಾಲಿಂಗೇಗೌಡ ಎಚ್.ಆರ್., ಡಾ.ಮಹಮದ್ ಮಸ್ರಿ, ಡಾ.ಪ್ರಭಾವತಿ ಕೆ., ಡಾ.ರವಿ ಎಲ್.ಎಸ್., ಡಾ.ತ್ರಿಪಾತಿ ಅಮೃತಾನಂದ ಎಸ್., ಡಾ.ಪ್ರಕಾಶ್ ಕುಮಾರ್ ಬಿ., ಡಾ.ಸತೀಶ ಜಿ., ಡಾ.ಯಶವಂತ್ ಜಿ., ಡಾ.ರಘು ಕುಮಾರ್ ಬಿ.ಎಸ್., ಡಾ.ಶ್ವೇತ ಕೆ. ಆರ್., ಶೋಭನ ಎನ್. ಅವರಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಕಾಲೇಜು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎನ್.ಎಸ್.ರಾಮೇಗೌಡ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಎನ್.ಶ್ರೀಧರ, ಕುಲಸಚಿವ ಡಾ.ಸಿ.ಕೆ.ಸುಬ್ಬರಾಯ, ರಿಜಿಸ್ಟ್ರಾರ್ ಡಾ.ನಾಗರಾಜ್, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.