ರಾಮನಗರ: ಕೇಂದ್ರ ಸಚಿವ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಗ್ಗೆ ಹಗುರವಾಗಿ ಮಾತನಾಡಿ ಹೊಲಸು ರಾಜಕೀಯಕ್ಕೆ ನಾಂದಿ ಹಾಡಿದ್ದಾರೆ. ಅವರು ಒಳ್ಳೆಯ ಆಲೋಚನೆ ಮಾಡುವಂತೆ ಅಯ್ಯಪ್ಪಸ್ವಾಮಿ ಆಶೀರ್ವಾದ ಮಾಡಲೆಂದು ಪ್ರಾರ್ಥಿಸುತ್ತೇನೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ.ರಾಜು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯ್ಯಪ್ಪಸ್ವಾಮಿ ದೇವರ ದರ್ಶನಕ್ಕಾಗಿ ಕುಮಾರಸ್ವಾಮಿ ತೆರಳಿದ್ದಾರೆ. ಅಲ್ಲಿಂದ ಬಂದ ಮೇಲಾದರೂ ಕೀಳುಮಟ್ಟದ ಆಲೋಚನೆ ಬಿಟ್ಟು ಬದ್ಧತೆಯಿಂದ ಕೆಲಸ ಮಾಡಲಿ. ಅಸೂಯೆಯಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂಬುದು ಮನವರಿಕೆಯಾಗಲಿ. ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿದ್ದು, ಕರ್ನಾಟಕಕ್ಕೆ ಏನಾದರೂ ಯೋಜನೆಗಳನ್ನು ತರಲು ಸಾಧ್ಯವಾದರೆ ತರಲಿ. ಇಲ್ಲ ರಾಜಕೀಯವಾಗಿ ಜನ್ಮ ನೀಡಿ ಕೇಂದ್ರ ಸಚಿವರಾಗಲು ಕಾರಣವಾದ ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾದರೂ ಏನಾದರೂ ಕೊಡುಗೆ ನೀಡಲಿ. ಪ್ರಚಾರಕ್ಕಾಗಿ ಟೀಕೆ ಟಿಪ್ಪಣಿ ಮಾಡಿದರೆ ಏನು ಪ್ರಯೋಜನವಿಲ್ಲ ಎಂದು ಹೇಳಿದರು.ಗಾಜಿನ ಮನೇಲಿದ್ದು ಕಲ್ಲು ಹೊಡೆಯೋದು ಬೇಡ:
ಕುಮಾರಸ್ವಾಮಿಯವರು ಆತ್ಮಸಾಕ್ಷಿಗೆ ಅನುಗುಣವಾಗಿ ಮಾತನಾಡಬೇಕು. ತಾವೊಬ್ಬರೇ ಸತ್ಯವಂತರು, ಬೇರೆಯವರೆಲ್ಲರೂ ಭ್ರಷ್ಟರು ಎಂಬ ಭ್ರಮೆಯಿಂದ ಹೊರ ಬರಬೇಕು. ಗಾಜಿನ ಮನೆಯಲ್ಲಿದ್ದುಕೊಂಡು ಕಲ್ಲು ಹೊಡೆಯುವ ಕೆಲಸ ಮಾಡಬಾರದು ಎಂದು ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದರು.ಡಿ.ಕೆ.ಶಿವಕುಮಾರ್ ಅವರು 1982- 83ರಲ್ಲಿ ಜಮೀನನ್ನು ಭೂ ಪರಿವರ್ತನೆ ಮಾಡಿ ನಿವೇಶನಗಳನ್ನು ಮಾರಾಟ ಮಾಡಿದ್ದರು. ಕಲ್ಲು ಗಣಿಗಾರಿಕೆ ಮಾತ್ರವಲ್ಲದೆ ಉದ್ಯಮಿಯಾಗಿ ವ್ಯಾಪಾರ- ವಹಿವಾಟು, ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಚುನಾವಣೆ ವೇಳೆ ಡಿಕೆಶಿ ₹1400 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಆದರೆ, 2004ರ ಚುನಾವಣೆಯಲ್ಲಿ ₹4 ಕೋಟಿ ಆಸ್ತಿ ಘೋಷಿಸಿದ್ದ ಕುಮಾರಸ್ವಾಮಿಯವರು ಈಗ ₹1 ಸಾವಿರ ಕೋಟಿ ಆಸ್ತಿ ಹೊಂದಿದ್ದಾರೆ. ಇದು ಹೇಗೆ ಸಂಪಾದಿಸಿದರು ಎಂದು ಪ್ರಶ್ನಿಸಿದರು.
ಡಿ.ಕೆ.ಶಿವಕುಮಾರ್ ರವರು ಈಗಷ್ಟೇ ಮುಖ್ಯಮಂತ್ರಿಯಾಗಿದ್ದಾರೆ. ಕೆಲಸ ಮಾಡಲು ಆರೇಳು ತಿಂಗಳು ಅವಕಾಶ ನೀಡಬೇಕು. ಕೆಲಸ ಮಾಡದಿದ್ದರೆ ಆರೋಗ್ಯಕರವಾಗಿ ಟೀಕೆ ಟಿಪ್ಪಣಿ ಮಾಡಿದರೆ ಅಭ್ಯಂತರವಿಲ್ಲ. ವಿಪಕ್ಷ ನಾಯಕ ಆರ್.ಅಶೋಕ್ ರವರು ಮುಖ್ಯಮಂತ್ರಿಗಳಿಗೆ ದಲ್ಲಾಳಿ ಎಂಬ ಪದ ಬಳಕೆ ಮಾಡಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಕೆ.ರಾಜು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಶಿವಪ್ರಸಾದ್, ತಾಲೂಕು ಅಧ್ಯಕ್ಷ ವಿ.ಎಚ್.ರಾಜು, ಅಶೋಕ್, ಸದಸ್ಯರಾದ ಸಿ.ರಮೇಶ್, ಜಯಣ್ಣ, ಸಿದ್ದೇಗೌಡ, ಮಹದೇವ್, ಸ್ವಾಮಿ ಮತ್ತಿತರರು ಹಾಜರಿದ್ದರು.
16ಕೆಆರ್ ಎಂಎನ್ 2.ಜೆಪಿಜಿಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ.ರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಉಪಾಧ್ಯಕ್ಷ ಶಿವಪ್ರಸಾದ್, ತಾಲೂಕು ಅಧ್ಯಕ್ಷ ವಿ.ಎಚ್.ರಾಜು, ಅಶೋಕ್ ಇತರರಿದ್ದರು.