ಸಾರಾಂಶ
ಹಾನಗಲ್ಲ: ಮನಸ್ಸು, ಬುದ್ಧಿ, ವಿವೇಕಗಳ ಮೂಲಕ ಪರಮಾನಂದದತ್ತ ಸಾಗಲು ಮನೋವಿಕಾರಗಳನ್ನು ತೊಡೆದು ಸತ್ಸಂಗ ಹಾಗೂ ಉತ್ತಮ ಸಾಹಿತ್ಯದ ಪ್ರೇರಣೆ ಪಡೆಯಬೇಕು ಎಂದು ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ತಿಳಿಸಿದರು.ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಆಯೋಜಿಸಿದ್ದ ಪಂ. ಸೀತಾರಾಂ ಶಾಸ್ತ್ರಿ, ಗಿರೀಶ ಶಾಸ್ತ್ರಿ ಕಾಶೀಕರ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಾತ್ಮದ ನೆಲೆಯಲ್ಲಿ ನಾಡು ನುಡಿ ರಕ್ಷಣೆ ಕುರಿತು ಮಾತನಾಡಿ, ನಮ್ಮ ಸಾಂಸ್ಕೃತಿಕ ಪರಂಪರೆ ಅಂತರ್ಮುಖಿ ಅನುಭಾವವನ್ನು ಹೊಂದಿದೆ. ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಚಾರಗಳ ಮೂಲಕ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಅಂಧಕಾರ ಅಳಿಸಿ ಸುಶೀಲ ಚಿತ್ತದಿಂದ ಉತ್ತಮ ಆಲೋಚನೆಗೆ ಮುಂದಾದರೆ ಅದುವೇ ಬದುಕಿನ ಯಶಸ್ಸು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಗುರುನಾಥ ಗವಾಣಿಕರ ಅವರು, ಯಾಂತ್ರಿಕ ಜೀವನ ವಿಧಾನಕ್ಕೆ ಜೋತು ಬಿದ್ದು ನಮ್ಮ ಸಂಸ್ಕೃತಿ ಸಂಸ್ಕಾರಗಳೇ ದೂರವಾಗುತ್ತಿವೆ. ಬದುಕಿನ ಆರ್ಥವನ್ನು ನಮ್ಮ ಸಾತ್ವಿಕ ನಡೆನುಡಿಗಳಲ್ಲಿ ಕಾಣಬೇಕಾಗಿದೆ. ಇದಕ್ಕಾಗಿ ನಿತ್ಯ ಸಾಹಿತ್ಯ ಸಾಂಸ್ಕೃತಿಕ ಕಾರ್ಯಗಳು ನಡೆಯಬೇಕು. ಸಂಘ- ಸಂಸ್ಥೆಗಳು ಸಾಂಸ್ಕೃತಿಕ ವಾತಾವರಣಕ್ಕೆ ಬೆಂಬಲವಾಗಬೇಕು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ, ಒಳ್ಳೆಯವರ ಸ್ಮರಣೆ ಆಗಬೇಕು. ನಮ್ಮ ಮನಸ್ಸು ವಿಕಾರದಿಂದ ಹೊರಬಂದು ಸಾಕಾರ ಬದುಕಿಗೆ ಹೆಜ್ಜೆ ಹಾಕಬೇಕು. ದಾನ ನೀಡುವವರು ಬೇಕಾಗಿದ್ದಾರೆ. ಅದು ಸಮಾಜದಲ್ಲಿ ಉತ್ತಮ ವಾತಾವರಣ ನೀಡಲು ಸಾಕಾರವಾಗುತ್ತದೆ ಎಂದರು.ದತ್ತಿ ದಾನಿಗಳಾದ ಪಾರ್ವತಿಬಾಯಿ ಕಾಶೀಕರ, ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಉಪಾಧ್ಯಕ್ಷೆ ವೀಣಾ ಗುಡಿ ಅತಿಥಿಗಳಾಗಿ ಮಾತನಾಡಿದರು.ದಮಯಂತಿ ದೇಶಪಾಂಡೆ ಸಂಗಡಿಗರು ಪ್ರಾರ್ಥನೆ ಹಾಡಿದರು. ಪರಿಷತ್ ಕಾರ್ಯದರ್ಶಿ ನಾಗರಾಜ ಸಿಂಗಾಪೂರ ಸ್ವಾಗತಿಸಿದರು. ನಗರ ಘಟಕದ ಕಾರ್ಯದರ್ಶಿ ಎಸ್.ವಿ. ಹೊಸಮನಿ ಕಾರ್ಯಕ್ರಮ ನಿರೂಪಿಸಿದರು. ಎಂ.ಎಸ್. ಅಮರದ ವಂದಿಸಿದರು.