ಹಳೇ ಬೇರು ಹೊಸ ಚಿಗುರಿನಂತೆ ಯಕ್ಷಗಾನ ಕಲೆ ಬೆಳೆಯಲಿ: ಡಾ. ತಲ್ಲೂರು

| Published : Jan 08 2025, 12:15 AM IST

ಹಳೇ ಬೇರು ಹೊಸ ಚಿಗುರಿನಂತೆ ಯಕ್ಷಗಾನ ಕಲೆ ಬೆಳೆಯಲಿ: ಡಾ. ತಲ್ಲೂರು
Share this Article
  • FB
  • TW
  • Linkdin
  • Email

ಸಾರಾಂಶ

ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಳದ ಸಭಾಂಗಣದಲ್ಲಿ ಕುಂದಾಪುರದ ನಾದಾವಧಾನ ಪ್ರತಿಷ್ಠಾನದ ವತಿಯಿಂದ ಆನ್‌ಲೈನ್ ಮೂಲಕ ಎರಡು ದಿನ ಆಯೋಜಿಸಲಾದ ವಿಶೇಷ ಯಕ್ಷಗಾನ ಶಿಬಿರದ ಸಮಾರೋಪ ನಡೆಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರಹಳೆ ಬೇರು ಹೊಸ ಚಿಗುರು ಎಂಬಂತೆ ಯಕ್ಷಗಾನ ಕೂಡ ತನ್ನ ಸಂಪ್ರಾದಾಯಿಕ ಚೌಕಟ್ಟಿನಲ್ಲಿಯೇ ಹೊಸತನವನ್ನು ಬೆಳೆಸಿಕೊಂಡರೆ ಅದು ಜನಾನುರಾಗಿಯಾಗುತ್ತದೆ. ಆಧುನಿಕತೆಯ ಹೆಸರಿನಲ್ಲಿ ಪ್ರೇಕ್ಷಕರನ್ನು ರಂಜಿಸುವವ ಧಾವಂತದಲ್ಲಿ ಕಲಾವಿದ ಹೆಜ್ಜೆ ತಪ್ಪಬಾರದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಅವರು ಇಲ್ಲಿನ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಳದ ಸಭಾಂಗಣದಲ್ಲಿ ಕುಂದಾಪುರದ ನಾದಾವಧಾನ ಪ್ರತಿಷ್ಠಾನದ ವತಿಯಿಂದ ಆನ್‌ಲೈನ್ ಮೂಲಕ ಎರಡು ದಿನ ನಡೆದ ವಿಶೇಷ ಯಕ್ಷಗಾನ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.ಪ್ರೇಕ್ಷಕರನ್ನು ರಂಜಿಸಿ, ಚಪ್ಪಾಳೆಗಿಟ್ಟಿಸುವ ಭರದಲ್ಲಿ ಕಲಾವಿದರು ರಾಜಕೀಯ ಸೇರಿದಂತೆ ಅನಗತ್ಯ ವಿಷಯಗಳನ್ನು ಪ್ರಸ್ತಾಪಿಸುವುದು, ಸಹ ಕಲಾವಿದರ ಮೇಲೆ ಮಾತಿನ ದಾಳಿಯ ಮೂಲಕ ಕುಂದುಂಟು ಮಾಡುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವ ಬಗ್ಗೆ ಅಕಾಡೆಮಿಗೂ ದೂರುಗಳು ಬಂದಿವೆ. ಆದರೆ ಇಂತಹ ಅತಿರೇಕದ ವರ್ತನೆಗಳನ್ನು ಸರಿ ಮಾಡುವ ಶಕ್ತಿ ಇರುವುದು ಪ್ರೇಕ್ಷಕರಿಗೆ ಮಾತ್ರ. ಪ್ರೇಕ್ಷಕರು ಅಲ್ಲಿಯೇ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರೆ ಇಂತಹ ಅಭಾಸಗಳು ಮುಂದೆ ನಡೆಯುವ ಪ್ರಮೇಯವೇ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.ಖ್ಯಾತ ವೈದ್ಯ, ಕಲಾಪೋಷಕ ಡಾ.ಜಗದೀಶ್ ಶೆಟ್ಟಿ ಮಾತನಾಡಿ, ಕಲಾವಿದರು ತಾನು ಕಲಿತದ್ದಾಗಿದೆ ಎಂಬ ಮನೋಭಾವವನ್ನು ಬಿಟ್ಟು, ತನಗಿನ್ನೂ ಕಲಿಯಲಿಕ್ಕಿದೆ ಎಂಬ ಮನೋಭಾವ ತಳೆದರೆ ಅವರಿಗೆ ಇನ್ನಷ್ಟು ಬೆಳೆಯುವ ಅವಕಾಶ ಲಭ್ಯವಾಗುತ್ತದೆ ಎಂದರು.ಯಕ್ಷಗಾನ ಗುರು ಅನಂತಪದ್ಮನಾಭ ಪಾಟಕ್ ಪುಣೆ, ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಪ್ರದೀಪ್ ಯಡಿಯಾಳ್, ಕಲಾವಿದರಾದ ಸಂಪತ್ ಕನ್ನಂತ, ಬಾಲಚಂದ್ರ ಭಟ್, ಸತೀಶ್ ಮೂಡುಬಗೆ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ಅಜಿತ್ ಕಾರಂತ ಬೆಂಗಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕ ಎನ್.ಜೆ.ಹೆಗಡೆ ಯಲ್ಲಾಪುರ ವಂದಿಸಿದರು.