ರಾಣಿಬೆನ್ನೂರು ನಗರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆ ನಡೆಯಿತು. ನಗರಸಭೆ ಕಚೇರಿಯಿಂದ ತಾಪಂ ಕಚೇರಿಯವರಿಗೂ ರಾಷ್ಟ್ರಧ್ವಜ, ಸಂವಿಧಾನ ಪುಸ್ತಕ ಪ್ರದರ್ಶನ ಸಮೇತ ಶಾಲಾ-ಕಾಲೇಜು ಮಕ್ಕಳೊಂದಿಗೆ ಜಾಥಾ ನಡೆಯಿತು.
ರಾಣಿಬೆನ್ನೂರು: ಸಂವಿಧಾನದ ಆಶಯಗಳನ್ನು ಮನೆ ಮನೆಗೆ ತಲುಪಿಸಬೇಕು ಎಂದು ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ತಾಲೂಕು ಆಡಳಿತ, ತಾಪಂ, ಶಿಕ್ಷಣ ಇಲಾಖೆ, ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇನ್ನು ಕೆಲವರಿಗೆ ಸಂವಿಧಾನ ಅಂದರೆ ತಿಳಿದಿಲ್ಲ. ಅಂಬೇಡ್ಕರ್ ಬಗ್ಗೆ ಚಳವಳಿ ಆರಂಭವಾದರೆ ಸಂವಿಧಾನ ಬರುತ್ತದೆ. ಸಂವಿಧಾನದಲ್ಲಿ ಎಲ್ಲರಿಗೂ ಮೀಸಲಾತಿಯಿದೆ. ಹಿಂದುಳಿದ ವರ್ಗಗಳ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಸರಿಸಮಾನವಾಗಿ ಬೆಳೆಯಲು ಸಂವಿಧಾನ ಅಗತ್ಯವಿದೆ ಎಂದರು.ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ ಮಾತನಾಡಿ, ಸಂವಿಧಾನದಲ್ಲಿ ಸಮಾನ ಸ್ವಾತಂತ್ರ್ಯ ನೀಡಲಾಗಿದ್ದರೂ ಕೆಲವರು ಸಂವಿಧಾನವನ್ನು ಒಪ್ಪುತ್ತಿಲ್ಲ. ನಾವು ಶ್ರೇಷ್ಠರು ಎಂದು ಧಾರ್ಮಿಕ ಅಹಿಷ್ಣುತೆ ಸೃಷ್ಟಿಸಿ ಜನರ ಭಾವನೆ ದಕ್ಕೆತರುವ ಕೆಲಸ ಮಾಡುತ್ತಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳು ದಲಿತರ ಮತಗಳನ್ನು ಪಡೆದು ಅವರಿಗೆ ಅಧಿಕಾರ ನೀಡುವ ಕೆಲಸ ಮಾಡುತ್ತಿಲ್ಲ ಎಂದರು.
ತಹಸೀಲ್ದಾರ್ ಆರ್.ಎಚ್. ಭಾಗವಾನ ಅಧ್ಯಕ್ಷತೆ ವಹಿಸಿದ್ದರು. ಆರ್ಟಿಇಎಸ್ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಶಿವಕುಮಾರ ಬೆಣ್ಣಿ ಉಪನ್ಯಾಸ ನೀಡಿದರು. ತಾಪಂ ಇಒ ವೆಂಕಟೇಶ ಸಣ್ಣಬಿದರಿ, ಬಿಇಒ ಶ್ಯಾಮಸುಂದರ ಅಡಿಗ, ನಗರಸಭೆ ಆಯುಕ್ತ ಫಕ್ಕಿರಪ್ಪ ಇಂಗಳಗಿ, ಪಿಎಲ್ಡಿ ಅಧ್ಯಕ್ಷ ಕರೇಗೌಡ ಬಾಗೂರ, ನಗರಸಭೆ ಸದಸ್ಯ ಪ್ರಕಾಶ ಪೂಜಾರ, ರವೀಂದ್ರಗೌಡ ಪಾಟೀಲ, ನಿತ್ಯಾನಂದ ಕುಂದಾಪುರ, ರಮೇಶ ಕೊರವರ, ಗಣೇಶ ಗೋಣಿಬಸಮ್ಮನವರ, ಮಲ್ಲೇಶಪ್ಪ ಮದ್ಲೇರ ಮತ್ತು ಇತರರಿದ್ದರು.ಸಮಾರಂಭದ ಪ್ರಯುಕ್ತ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇದಕ್ಕೂ ಪೂರ್ವದಲ್ಲಿ ನಗರಸಭೆ ಕಚೇರಿಯಿಂದ ತಾಪಂ ಕಚೇರಿಯವರಿಗೂ ರಾಷ್ಟ್ರಧ್ವಜ, ಸಂವಿಧಾನ ಪುಸ್ತಕ ಪ್ರದರ್ಶನ ಸಮೇತ ಶಾಲಾ-ಕಾಲೇಜು ಮಕ್ಕಳೊಂದಿಗೆ ಜಾಥಾ ನಡೆಯಿತು.