ಸಾರಾಂಶ
ಹಸಿರು ಹಬ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪರಿಸರ ತಜ್ಞ
ಕನ್ನಡಪ್ರಭ ವಾರ್ತೆ ಕೊಟ್ಟೂರುಭೂಮಿ ಇದೀಗ ಐಸಿಯು ಸ್ಥಾನಕ್ಕೆ ಬಂದಿದ್ದು, ತಕ್ಷಣವೇ ಈ ವಾತಾವರಣದಿಂದ ಇದನ್ನು ಹೊರಗೆ ತರುವ ನಿಟ್ಟಿನಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯ ಮಾಡಬೇಕಿದೆ ಎಂದು ಪರಿಸರ ತಜ್ಞ ಶಿರಸಿಯ ಶಿವಾನಂದ ಕಳವೆ ಹೇಳಿದರು.ಪಟ್ಟಣದ ಡಾ. ಎಚ್.ಜಿ.ರಾಜ್ ಭವನದಲ್ಲಿ ಹಸಿರು ಹೊನಲು ಸೇವಾ ಸಂಸ್ಥೆಯವರು ಒಂದು ತಿಂಗಳಿಡೀ ನಡೆಸಿದ ಹಸಿರು ಹಬ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.ಪರಿಸರ ಕಾಪಾಡಲು ಪ್ರತ್ಯೇಕ ಯೋಜನೆ ಹಮ್ಮಿಕೊಳ್ಳುವ ಪ್ರಯತ್ನಕ್ಕೆ ಮುಂದಾಗದೇ ಪ್ರಾಥಮಿಕವಾಗಿ ಸಸಿ ನೆಟ್ಟು ಅವುಗಳನ್ನು ಕಾಡುಗಳನ್ನಾಗಿ ಬೆಳೆಸುವತ್ತ ತೊಡಗಿಸಿಕೊಂಡರೆ ಪರಿಸರ ಅಸಮತೋಲನ ನಿವಾರಣೆ ಮಾಡಬಹುದಾಗಿದೆ. ಪ್ರತಿಯೊಬ್ಬರೂ ಈ ಬಗ್ಗೆ ಸ್ವಯಂ ಪ್ರೇರಿತರಾಗಿ ಪರಿಸರ ಉಳಿಸುವ ಕಾರ್ಯದತ್ತ ತೊಡಗಿಸಿಕೊಂಡಾಗ ಮಾತ್ರ ಪರಿಸರ ಅಭಿವೃದ್ಧಿ ಹೆಚ್ಚುತ್ತದೆ ಎಂದರು.ಕಾಡುಗಳು ನಾಶವಾದಷ್ಟು ಪರಿಸರ ನಾಶವಾಗುತ್ತದಲ್ಲದೇ ಇದನ್ನು ಪೋಷಿಸಲು ಕೇವಲ ಸರ್ಕಾರವನ್ನೇ ನಂಬಿಕೊಳ್ಳದೇ ಪ್ರತಿಯೊಬ್ಬರು ಜವಾಬ್ದಾರಿ ಎಂದುಕೊಂಡು ಗಿಡ ಬೆಳೆಸಿ ಪೋಷಿಸುವತ್ತ ಮುಂದಾಗಬೇಕು. ಈ ಹಿಂದೆ ಇದ್ದ ಮೂರು ಸಾವಿರಕ್ಕೂ ಹೆಚ್ಚು ಕೆರೆಗಳು ಕೇವಲ ಮೈಸೂರು ಭಾಗದಲ್ಲಿ ಮಾತ್ರ ನಿರ್ಮಾಣಗೊಂಡವಾಗಿದ್ದು, ಉತ್ತರ ಕರ್ನಾಟಕ ಮತ್ತು ಬಯಲು ಪ್ರದೇಶಗಳಲ್ಲಿ ಈ ಕೆರೆ ಕಟ್ಟೆಗಳನ್ನು ನಿರ್ಮಿಸುವ ಯೋಜನೆ ತುರ್ತಾಗಿ ಜಾರಿಗೊಳ್ಳಬೇಕು ಎಂದರು.ರಾಷ್ಟ್ರದಲ್ಲಿನ ಪರಿಸರವನ್ನು ರಕ್ಷಿಸಲು ಅನಗತ್ಯವಾಗಿ ಇಸ್ರೇಲ್ ಅಥವಾ ಜಪಾನ್ ದೇಶದ ಮಾದರಿ ಅನುಸರಿಸುವ ಅಗತ್ಯ ನಮಗೆ ಇಲ್ಲವೇ ಇಲ್ಲ. ನಮ್ಮ ಮಾದರಿಯಲ್ಲಿಯೇ ನಾವು ಇದನ್ನು ಪೋಷಿಸಿಕೊಂಡು ಬೆಳೆಸುವತ್ತ ಮುಂದಾದರೆ ಕಾಡುಗಳು ವಿಫುಲವಾಗಿ ಬೆಳೆಯುತ್ತವೆ. ಇಲ್ಲಿನ ಹಸಿರು ಹೊನಲು ತಂಡ ನಾನಾ ಆಯಾಮಗಳ ಮೂಲಕ ಗಿಡಗಳನ್ನು ಬೆಳೆಸುವುದನ್ನು ರೂಢಿಸಿಕೊಂಡು ಮುಂದುವರೆಸಿರುವ ಈ ಪರಿಯನ್ನು ಸರ್ಕಾರ ಗಮನಿಸಿ ಪರಿಸರ ಉಳಿಸುವಿಕೆಗೆ ಇಂತಹ ಸಂಘ-ಸಂಸ್ಥೆಗಳ ಸಲಹೆ ಸಹಕಾರ ಪಡೆದುಕೊಳ್ಳಬೇಕಿದೆ ಎಂದರು.ಕೊಟ್ಟೂರಿನಂತಹ ಪಟ್ಟಣದಲ್ಲಿ ಗಿಡಗಳನ್ನು ಬೆಳೆಸಲು ಹತ್ತು ಹಲವು ಯೋಜನೆಗಳನ್ನು ಸ್ವಯಂ ಆಗಿ ರೂಪಿಸಿಕೊಂಡು ಈ ಮೂಲಕ ಕಾರ್ಯೋನ್ಮುಖವಾಗಿರುವ ಬಯಲು ಸೀಮೆಯಲ್ಲಿ ಹಸಿರು ಕ್ರಾಂತಿಯತ್ತ ಮುಂದಾಗಿರುವುದು ನಿಜಕ್ಕೂ ಮಾದರಿಯಾಗಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಚಾನುಕೋಟಿ ಮಠಾಧ್ಯಕ್ಷ ಡಾ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಪರಿಸರ ಕಾಳಜಿ ಕೇವಲ ತೋರಿಕೆಗೆ ಮಾತ್ರವಾಗದೆ ವಾಸ್ತವ ರೀತಿಯಲ್ಲಿ ಕೊಟ್ಟೂರಿನಂತಹ ಪಟ್ಟಣದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯಗತಗೊಂಡಿರುವುದು ಹೆಮ್ಮೆಯ ವಿಷಯ. ಇದಕ್ಕೆ ಕಾರಣರಾದ ಹಸಿರು ಹೊನಲು ತಂಡಕ್ಕೆ ಸದಾ ಸಮಾಜ ಋಣಿಯಾಗಿರಬೇಕು ಎಂದರು.ಅದ್ಯಕ್ಷತೆ ವಹಿಸಿದ್ದ ಹಸಿರು ಹೊನಲು ಸೇವಾ ಸಂಸ್ಥೆಯ ಗುರುರಾಜ ಮಾತನಾಡಿ, ಹಸಿರು ಹಬ್ಬಕ್ಕಾಗಿ ತಿಂಗಳ ಕಾಲ ವಿಶೇಷ ರೂಪರೇಷೆಗಳನ್ನು ಸಿದ್ಧಪಡಿಸಿಕೊಂಡು ಪಟ್ಟಣದ ಹಲವು ಉದ್ಯಾನಗಳಲ್ಲಿ ತಿಂಗಳ ಕಾಲ ಸಸಿ ನೆಟ್ಟಿದ್ದೇವೆ. ಇದಕ್ಕೆ ಎಲ್ಲ ಜನತೆ, ಸಂಘ-ಸಂಸ್ಥೆ, ಅಧಿಕಾರಿಗಳ ಸಹಕಾರ ಸಿಕ್ಕಿರುವುದು ಹೆಮ್ಮೆಯ ವಿಷಯ ಎಂದರು.ಹಸಿರು ಹೊನಲಿನ ಉಪಾಧ್ಯಕ್ಷ ಬಿ.ಅರ್. ವಿಕ್ರಂ ಇದ್ದರು. ಸದಸ್ಯ ಡಾ. ಸತೀಶ್ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಹಿತಿ ಕುಂ.ವೀರಭದ್ರಪ್ಪ, ಹ.ಬೊ.ಹಳ್ಳಿಯ ಆನಂದಬಾಬು, ವಿಜಯ ಇಟ್ಟಗಿ, ಎಂ.ಎಸ್. ಶಿವನಗುತ್ತಿ, ನಿರ್ಮಲಾ ಶಿವನಗುತ್ತಿ ಮತ್ತಿತರರು ಪಾಲ್ಗೊಂಡಿದ್ದರು. ಬಂಜಾರ ನಾಗರಾಜ ಸ್ವಾಗತಿಸಿದರು. ಶಿಕ್ಷಕಿ ಕಾವ್ಯ ನಿರೂಪಿಸಿದರು.