ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಮನೆ ಮನೆಗಳಿಗೆ ತಲುಪಲಿ-ಸ್ವಾಮೀಜಿ

| Published : Apr 08 2025, 12:31 AM IST

ಸಾರಾಂಶ

ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಮನೆ ಮನೆಗಳಿಗೆ ತಲುಪಬೇಕು, ನಿತ್ಯ ಜೀವನದಲ್ಲಿ ಅಳವಡಿಕೆಯಾಗಬೇಕು, ಆಗ ರೇಣುಕಾಚಾರ್ಯರ ಜಯಂತ್ಯುತ್ಸವಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಹಂಪಸಾಗರ ಕಟ್ಟೀಮನಿ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಮುಂಡರಗಿ: ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಮನೆ ಮನೆಗಳಿಗೆ ತಲುಪಬೇಕು, ನಿತ್ಯ ಜೀವನದಲ್ಲಿ ಅಳವಡಿಕೆಯಾಗಬೇಕು, ಆಗ ರೇಣುಕಾಚಾರ್ಯರ ಜಯಂತ್ಯುತ್ಸವಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಹಂಪಸಾಗರ ಕಟ್ಟೀಮನಿ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅವರು ಸೋಮವಾರ ಪಟ್ಟಣದ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ವೀರಮಾಹೇಶ್ವರ ಜಂಗಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಜರುಗಿದ ಜಗದ್ಗುರು ರೇಣುಕಾಚಾರ್ಯ ಜಯಂತಿ ನೇತೃತ್ವವಹಿಸಿ ಮಾತನಾಡಿದರು.

ಯಾರನ್ನೂ ಕೂಡ ಅಲ್ಲಗಳೆಯದೆ, ಯಾರನ್ನು ಖಂಡಿಸದೆ, ಯಾರ ಬಗ್ಗೆಯೂ ಭೇದ ಭಾವ ತಾಳದೆ ಈ ಜಗತ್ತಿನಲ್ಲಿ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಅತ್ಯಮೂಲ್ಯವಾದ ಸಿದ್ಧಾಂತವನ್ನು ಜಗದ್ಗುರು ರೇಣುಕಾಚಾರ್ಯರು ನೀಡಿದ್ದಾರೆ ಎಂದರು.

ಅಧ್ಯಕ್ಷತೆವಹಿಸಿದ್ದ ಗುರುಮೂರ್ತಿಸ್ವಾಮಿ ಅಳವಂಡಿ ಕಟ್ಟೀಮನಿ ಹಿರೇಮಠ ಮಾತನಾಡಿ, ಮಾನವ ಧರ್ಮಕ್ಕೆ ಜಯವಾಗಲಿ ಎಂದು ಸಾರಿದ ರೇಣುಕಾಚಾರ್ಯರ ಜಯಂತಿಯನ್ನು ನಾವು ಮಾಡುತ್ತಿದ್ದೇವೆ. ಇವತ್ತು ಸಮಾಜ ಸಾಕಷ್ಟು ಹಾಳಾಗಿ ಹೋಗಿದೆ. ಸಮಾಜದಲ್ಲಿ ಒಂದು ಮನೆಗೆ ಕಿಟಕಿ, ಹರನಾಳಿಗೆ, ಕಂಬಗಳು ಎಷ್ಟು ಮುಖ್ಯವೋ ನಮ್ಮ ಸಮಾಜಕ್ಕೆ ಗುರುಗಳು‌ ಅಷ್ಟೇ ಮುಖ್ಯವಾಗಿ ಬೇಕು. ನಮ್ಮ ಜಂಗಮರಲ್ಲಿಯೂ ಒಗ್ಗಟ್ಟು ಕಡಿಮೆಯಾಗಿ ದಿಕ್ಕಾಪಾಲಾಗಿದ್ದೇವೆ. ಇಂದು ಸ್ವಾಮೀಜಿಗಳೆ ದೊಡ್ಡವರು ಸಣ್ಣವರೆಂದು ಹೊಡೆದಾಡುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಜಂಗಮ ಸಮಾಜ ಬಾಂಧವರು ದುಶ್ಚಟಗಳಿಂದ ದೂರವಿರಬೇಕು. ಮಕ್ಕಳಿಗೆ ವೈದಿಕ ಹೇಳಿಕೊಡುವ ಕಾರ್ಯಕ್ರಮ ಪ್ರಾರಂಭಿಸುತ್ತಿದ್ದು, ಅದಕ್ಕೆ ಎಲ್ಲರೂ ತಮ್ಮ ಮಕ್ಕಳನ್ನು ಕಳಿಸಿರಿ ಎಂದರು. ಕಾರ್ಯಕ್ರಮದಲ್ಲಿ ವಿರುಪಾಪೂರ-ಕಲಕೇರಿ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯ ಸ್ವಾಮಿಜಿ ನೇತೃತ್ವವಹಿಸಿದ್ದರು. ಕಾರ್ಯಕ್ರಮದಲ್ಲಿ ಷಡಕ್ಷರಯ್ಯ ಅಳವಂಡಿಮಠ, ಎಸ್.ಎಸ್. ಹಿರೇಮಠ, ಡಾ. ಕುಮಾರಸ್ವಾಮಿ ಹಿರೇಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿ.ಜೆ. ಹಿರೇಮಠ ಸ್ವಾಗತಿಸಿದರು. ಚೇತನಾ ಹಂಪಿಮಠ ನಿರೂಪಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ವೀರಭದ್ರೇಶ್ವರ ಮಠದಿಂದ ಪ್ರಾರಂಭವಾದ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಗೆ ಜ. ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಚಾಲನೆ ನೀಡಿದರು.