ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವ ನಾನಾ ಜಿಲ್ಲೆಗಳಲ್ಲಿ ನಡೆದುಕೊಂಡು ಬರುತ್ತಿದೆ. ಶಿವಯೋಗಿಗಳು ಸಾವಿರಾರು ವರ್ಷಗಳ ಹಿಂದೆ ಎರಡು ರಾಜ ಮನೆತನಗಳ ನಡುವೆ ಇದ್ದಂತಹ ವೈಷಮ್ಯವನ್ನು ಹೋಗಲಾಡಿಸಿ ಸಾಮರಸ್ಯ, ಪ್ರೀತಿ, ಸ್ನೇಹದ ಬೀಜವನ್ನು ಬಿತ್ತಿ ನಾಡಿಗೆ ಕಲ್ಯಾಣ ತಂದವರು.

ಕನ್ನಡಪ್ರಭ ವಾರ್ತೆ ಮಂಡ್ಯ/ಮಳವಳ್ಳಿ

ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳು ಲೋಕ ಕಲ್ಯಾಣಕ್ಕಾಗಿ ಮಾಡಿದ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಸುತ್ತೂರು ಜಗತ್ ಗುರು ಶ್ರೀವೀರ ಸಿಂಹಾಸನ ಮಹಾ ಸಂಸ್ಥಾನಧೀಶ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.

ಮಂಗಳವಾರ ಮಳವಳ್ಳಿಯಲ್ಲಿ ಆಯೋಜಿಸಲಾಗಿದ್ದ ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ 1066 ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವ ನಾನಾ ಜಿಲ್ಲೆಗಳಲ್ಲಿ ನಡೆದುಕೊಂಡು ಬರುತ್ತಿದೆ. ಶಿವಯೋಗಿಗಳು ಸಾವಿರಾರು ವರ್ಷಗಳ ಹಿಂದೆ ಎರಡು ರಾಜ ಮನೆತನಗಳ ನಡುವೆ ಇದ್ದಂತಹ ವೈಷಮ್ಯವನ್ನು ಹೋಗಲಾಡಿಸಿ ಸಾಮರಸ್ಯ, ಪ್ರೀತಿ, ಸ್ನೇಹದ ಬೀಜವನ್ನು ಬಿತ್ತಿ ನಾಡಿಗೆ ಕಲ್ಯಾಣ ತಂದವರು ಎಂದರು.

ಅವರ ಹಾದಿಯಲ್ಲಿ ಬಂದಂತಹ ಎಲ್ಲಾ ಸುತ್ತೂರು ಮಠದ ಸ್ವಾಮಿಗಳು ಸುತ್ತೂರು ಮಠವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಸುಮಾರು 6 ವರ್ಷಗಳ ಹಿಂದೆಯೇ ಜಯಂತ್ಯುತ್ಸವ ಮಳವಳ್ಳಿ ನಡೆಯಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಬಹುಶಃ 6 ವರ್ಷಗಳ ಹಿಂದೆ ಆಗಿದ್ದರೆ ರಾಷ್ಟ್ರಪತಿಗಳು ಕಾರ್ಯಕ್ರಮ ಉದ್ಘಾಟಿಸುತ್ತಿರಲಿಲ್ಲ. ಇದು ದೈವ ಸಂಕಲ್ಪ ಎಂದರು.

ಮಳವಳ್ಳಿಯಲ್ಲಿ ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ 1066 ನೇ ಜಯಂತಿ ಮಹೋತ್ಸವ ಕಾರ್ಯಕ್ರಮ ನಡೆಯುವುದಕ್ಕೆ ಕುಮಾರಸ್ವಾಮಿ ಅವರೇ ಕಾರಣ. ಜೊತೆಗೆ ರಾಷ್ಟ್ರಪತಿಗಳು ಸಮಾರಂಭಕ್ಕೆ ಬರುವುದಕ್ಕೂ ಅವರೇ ಕಾರಣ. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ತಮ್ಮ ಮನೆಯ ಕಾರ್ಯಕ್ರಮದಂತೆ ಮುತುವರ್ಜಿ ವಹಿಸಿ ಅಚ್ಚುಕಟ್ಟಾಗಿ ರೂಪಿಸಿದ್ದಾರೆ. ಮಳವಳ್ಳಿಯ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಮುಖಂಡರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜವಾಬ್ದಾರಿ ವಹಿಸಿದ್ದಾರೆ ಎಂದರು.