ಹೊನ್ನಾವರ: ತಾಲೂಕಿನ ಲೀಲಾ ಗಣಪತಿ ಚಾರಿಟೇಬಲ್ ಟ್ರಸ್ಟ್ನ 21ನೇ ವಾರ್ಷಿಕೋತ್ಸವ ಹಾಗೂ ಅಗ್ರಹಾರದ ಶ್ರೀ ಮಹಾಗಣಪತಿ ದೇವರ 281ನೇ ಸ್ಥಾಪನಾ ಸಮಾರಾಧನೆ ಅಂಗವಾಗಿ ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ''ಪ್ರತಿಭಾ ಪುರಸ್ಕಾರ'' ನೀಡಿ ಗೌರವಿಸಲಾಯಿತು.
ಅಗ್ರಹಾರದ ಶ್ರೀ ಮಹಾಗಣಪತಿ ದೇವಾಲಯದ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಕ್ರೀಡೆ ಮತ್ತು ಯೋಗ ವಿಭಾಗದಲ್ಲಿ ವಿಭಾಗೀಯ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆಗೈದ ಪ್ರತಿಭೆಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಕುರಿತು ಮಾತನಾಡಿದ ಟ್ರಸ್ಟ್ನ ಅಧ್ಯಕ್ಷ ಜಿ.ಜಿ. ಸಭಾಹಿತ್ ಅವರು, ಟ್ರಸ್ಟ್ ವತಿಯಿಂದ ಪ್ರತಿ ವರ್ಷವೂ ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸುವ ಕೆಲಸ ನಡೆಯುತ್ತಿದೆ. ಮಕ್ಕಳಿಗೆ ತಾವು ಮಾಡುವ ಸಾಧನೆಯ ಬಗ್ಗೆ ಹೆಮ್ಮೆ ಇರಬೇಕು. ಆ ಸಾಧನೆ ಇತರರಿಗೆ ಪ್ರೇರಣೆಯಾಗಬೇಕೇ ಹೊರತು, ಅದು ಎಂದಿಗೂ ಅಹಂಕಾರವಾಗಿ ಬದಲಾಗಬಾರದು ಎಂದು ಕಿವಿಮಾತು ಹೇಳಿದರು.
ಸ್ಟೇಟ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಕಾಶೀನಾಥ್ ಬಾಡಿಗೆ ಮಾತನಾಡಿ, ನಾವು ನಮ್ಮ ಸಂಸ್ಕೃತಿಯನ್ನು ಗೌರವಿಸಬೇಕು. ಶಿವಶರಣರ ವಚನಗಳು ಮತ್ತು ಮಂಕುತಿಮ್ಮನ ಕಗ್ಗ ನಮ್ಮ ಜೀವನವನ್ನು ರೂಪಿಸಿಕೊಳ್ಳಲು ದಾರಿದೀಪವಾಗಿವೆ. ಅವುಗಳನ್ನು ಅನುಸರಿಸುವ ಮೂಲಕ ಜೀವನದಲ್ಲಿ ಸಾರ್ಥಕತೆ ಕಾಣಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಜಿ. ಭಟ್ ಮಾತನಾಡಿ, ಇಂದಿನ ಮಕ್ಕಳೇ ದೇಶದ ಭವಿಷ್ಯ. ದೇಶದ ಅಭಿವೃದ್ಧಿಯಲ್ಲಿ ನಿಮ್ಮ ಪಾತ್ರ ದೊಡ್ಡದಿದೆ. ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಗೌರವಿಸುತ್ತಾ ದೇಶದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಗ್ರಾಪಂ ಉಪಾಧ್ಯಕ್ಷ ಅಜಿತ ನಾಯ್ಕ, ಆರ್ಇಎಸ್ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಸೋಮೇಶ್ ಪೂಜಾರ್, ಟ್ರಸ್ಟ್ನ ಪ್ರಮುಖರಾದ ದಾಮೋದರ್ ನಾಯ್ಕ ಹಾಗೂ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.