ಸಚಿವ ಎಂ.ಬಿ.ಪಾಟೀಲರಲ್ಲಿ ಸಿಎಂ ಆಗಲು ಸೂಕ್ತ ವ್ಯಕ್ತಿ ಹಾಗೂ ಸಿಎಂ ಆಗುವ ಸಾಮರ್ಥ್ಯವಿದೆ. ಸಿಎಂ ಆಗಲು ಪಂಚಪೀಠಗಳು ಕರುಣಿಸಬೇಕು ಎಂದು ವಿಜಯಪುರ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಮಹಾಸಂಸ್ಥಾನ ಮಠದ ಜಯಶಾಂತಲಿಂಗೇಶ್ವರ ಶಿವಾಚಾರ್ಯರು ಹಾಗೂ ಆಲಮೇಲ ಗುರು ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಆಶಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಚಿವ ಎಂ.ಬಿ.ಪಾಟೀಲರಲ್ಲಿ ಸಿಎಂ ಆಗಲು ಸೂಕ್ತ ವ್ಯಕ್ತಿ ಹಾಗೂ ಸಿಎಂ ಆಗುವ ಸಾಮರ್ಥ್ಯವಿದೆ. ಸಿಎಂ ಆಗಲು ಪಂಚಪೀಠಗಳು ಕರುಣಿಸಬೇಕು ಎಂದು ವಿಜಯಪುರ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಮಹಾಸಂಸ್ಥಾನ ಮಠದ ಜಯಶಾಂತಲಿಂಗೇಶ್ವರ ಶಿವಾಚಾರ್ಯರು ಹಾಗೂ ಆಲಮೇಲ ಗುರು ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಆಶಯ ವ್ಯಕ್ತಪಡಿಸಿದರು.

ನಗರದ ಅಥಣಿ ರಸ್ತೆಯಲ್ಲಿರುವ ಸುರಭಿ ನಗರದಲ್ಲಿ ಶನಿವಾರ ನಡೆದ ರಂಭಾಪುರಿ ಪೀಠದ ಶಾಖಾಮಠದ‌ ಭೂಮಿಪೂಜೆ ವೇಳೆ ಎಂ.ಬಿ.ಪಾಟೀಲ ಸಿಎಂ ಆಗಬೇಕು ಎಂದು ನುಡಿದರು.ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಪಂಚಪೀಠದ ಜಗದ್ಗುರುಗಳು ಹಾಗೂ ವಿರಕ್ತಮಠದ ಸ್ವಾಮೀಜಿ ಒಂದಾಗಬೇಕು.‌ ಸ್ವಾಮೀಜಿಗಳು ಒಂದಾದರೇ ನಾವೆಲ್ಲರೂ ಒಂದಾಗಿ ಬಿಡ್ತೇವೆ. ಪಂಚಪೀಠ ಹಾಗೂ ವಿರಕ್ತಮಠ ಎಲ್ಲವೂ ಒಂದಾಗಲಿ ಎಂದು ಶ್ರೀಗಳಿಗೆ ಮನವಿ ಮಾಡಿದರು.

ನಾನು ಈ ಹಿಂದೆ ಲಿಂಗಾಯತ ಧರ್ಮದ ಬಗ್ಗೆ ಹೋರಾಟ ಮಾಡಿದ್ದೇನೆ. ನಮ್ಮಲ್ಲಿ ಆಚರಣೆ ಬೇರೆ ಇರಬಹುದು. ಆದರೆ, ಉದ್ದೇಶ ಒಂದೇ ಇರುತ್ತದೆ. ಎಲ್ಲ ಉಪ ಪಂಗಡಗಳು ಒಂದೇ ಆಗಲಿ ಎಂಬುವುದು ನಮ್ಮ ಆಸೆಯಾಗಿದೆ. ಬಡತನದಲ್ಲಿರುವ ಜನರಿಗೆ ಅನುಕೂಲವಾಗಲಿ ಎಂಬುವುದು ನಮ್ಮ ಉದ್ದೇಶ. ನಮ್ಮ ಮಕ್ಕಳ ಶಿಕ್ಷಣಕ್ಕಾಗಿ ಉತ್ತಮ ಭವಿಷ್ಯಕ್ಕಾಗಿ ನಾವೆಲ್ಲರೂ ಒಂದಾಗಬೇಕು ಎಂದು ಕರೆ ನೀಡಿದರು.ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರುಗಳು ಮಾತನಾಡಿ, ಎಂ.ಬಿ.ಪಾಟೀಲ ಅವರಿಗೆ ನೀರಾವರಿ ಖಾತೆ ಕೊಡಬೇಕಿತ್ತು ಎಂದು ಆಶಯ ವ್ಯಕ್ತಪಡಿಸಿದರು.

ಎಂ.ಬಿ.ಪಾಟೀಲರು ಎಲ್ಲರ ಮುಂದೆ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ. ಎಂ.ಬಿ.ಪಾಟೀಲ ಹೇಳಿದಂತೆ ಆಂತರಿಕವಾಗಿ ಸಮಸ್ಯೆ ಇದೆ ಎಂದು ಹೇಳಿರೋದು ಸತ್ಯ. ವೀರಶೈವ ಲಿಂಗಾಯತ ಒಂದಾಗಿ ಕೆಲಸ ಮಾಡಿದರೇ ನಮ್ಮ ಶಕ್ತಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಮಾಜ ಒಂದಾಗಲಿ ಎಂದು ಹಾನಗಲ್ಲ ಕುಮಾರಸ್ವಾಮಿ ವೀರಶೈವ ಲಿಂಗಾಯತ ಮಹಾಸಭಾ ಶುರು ಮಾಡಿದರು. ಗುರುವಿರಕ್ತ ಮಠಾಧೀಶರು ಒಂದಾಗಿ ಸಮಾಜದ ಒಳತಿಗಾಗಿ ಕೆಲಸ ಮಾಡಿದ್ದೇವೆ. ವೀರಶೈವ ಮಹಾಸಭಾ ಹೇಳಿದಂತೆ ಭಕ್ತರಿಗಾಗಿ ಒಂದಾಗಿ ಕೆಲಸ ಮಾಡಿದ್ದೇವೆ. ವೀರಶೈವ ಲಿಂಗಾಯತ ಏಕತಾ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗಿದ್ದೇವೆ. ಆಚಾರ್ಯರು ಹಾಗೂ ಬಸವಾದಿ ಶರಣರು ಹೇಳಿರುವುದು ಎರಡು ಒಂದೇ. ಮಕ್ಕಳ ಶಿಕ್ಷಣಕ್ಕಾಗಿ, ಮೀಸಲಾತಿಗಾಗಿ‌ ಬಹಳ ಜನ ಹೋರಾಟ ಮಾಡಿದ್ದಾರೆ. ಎಂ.ಬಿ.ಪಾಟೀಲ ಏನೇ ಹೇಳಿದರೂ ಗಟ್ಟಿಯಾಗಿ, ಸ್ಪಷ್ಟವಾಗಿ ಹೇಳುತ್ತಾರೆ. ಗುರುವಿರಕ್ತ ಒಂದಾಗಬೇಕು ಎಂದು ಎಂ.ಬಿ.ಪಾಟೀಲ ಹೇಳಿದ್ದಾರೆ ಎಂದರು.

ವೀರಶೈವ ಲಿಂಗಾಯತ ಸಮುದಾಯ ತಾನಷ್ಟೇ ಬಾಳಬೇಕು ಎನ್ನಲ್ಲ. ಎಲ್ಲ ಸಮಾಜಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವುದು ವೀರಶೈವ ಲಿಂಗಾಯತ ಸಮಾಜದ ಸಿದ್ಧಾಂತವಾಗಿದೆ. ವೀರಶೈವ ಲಿಂಗಾಯತ ಸಮುದಾಯದ ಬಹಳ ದೊಡ್ಡ ಸಮುದಾಯ. ಈ ಭಾಗದಲ್ಲಿ ಮಠ ಬೇಕೆಂದು ಅಭಿಲಾಷೆ ಇತ್ತು. ಭಕ್ತರ ಅಭಿಲಾಷೆಯನ್ನು ಎಂ.ಬಿ.ಪಾಟೀಲರು ಮಾಡಿದ್ದಾರೆ. ಈ ಕಾರ್ಯಕ್ರಮ ಮಾಡಿರುವುದು ಭಕ್ತರಿಗೆ ಸಂತಸ ತಂದಿದೆ. ಎಂ.ಬಿ.ಪಾಟೀಲ ಮನಸ್ಸು ಮಾಡಿದರೇ ಎಲ್ಲ ಕೆಲಸ ಮಾಡುತ್ತಾರೆ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.ನಾನು ಯಾವುದೇ ರಾಜಕೀಯ ಉದ್ದೇಶದಿಂದ ಈ ಕಾರ್ಯಕ್ರಮ ಮಾಡಿಲ್ಲ. ನಾನು ಈ ಹಿಂದೆಯೇ ಮಾತುಕೊಟ್ಟಿದ್ದೆ. ಅದರಂತೆ ಮಾಡಿದ್ದೇನೆ. ವಿಜಯಪುರದಲ್ಲಿ ಸುಂದರವಾದ ಶಾಖಾ ಮಠ ನಿರ್ಮಾಣ ಮಾಡಲು ಸಹಕಾರ ಮಾಡುತ್ತೇನೆ.

-ಎಂ.ಬಿ.ಪಾಟೀಲ,

ಜಿಲ್ಲಾ ಉಸ್ತುವಾರಿ ಸಚಿವರು.ಗುರುವಿರಕ್ತರ ಜೊತೆಗೆ ಒಂದಾಗಲು ರಂಭಾಪುರಿ ಪೀಠ ಮೊದಲ ಸ್ಥಾನದಲ್ಲಿ ಇರುತ್ತದೆ. ಮುಂದಿನ ದಿನಗಳಲ್ಲಿ ವಿಜಯಪುರದಲ್ಲಿ ಪಂಚಾಚಾರ್ಯರು ಹಾಗೂ ವಿರಕ್ತರನ್ನು ಒಂದಾಗಿಸುವ ಕೆಲಸ ಮಾಡಲಿ. ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯಕ್ರಮ ಮಾಡಲಿ.ಎಂ.ಬಿ.ಪಾಟೀಲ ಅವರಿಗೆ ನೀರಾವರಿ ಖಾತೆ ಕೊಡಬೇಕಿತ್ತು.

-ಡಾ.ವೀರಸೋಮೇಶ್ವರ ಜಗದ್ಗುರುಗಳು, ಬಾಳೆಹೊನ್ನೂರು ರಂಭಾಪುರಿ ಪೀಠ.