ಕನ್ನಡಪ್ರಭ ವಾರ್ತೆ ವಿಜಯಪುರ

ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಚಿವ ಎಂ.ಬಿ.ಪಾಟೀಲರಿಗೆ ಬಿಜೆಪಿ ಜಿಲ್ಲಾಧ್ಯಕ್ಷರು ನೀಡಿರುವ ಪಂಥಾಹ್ವಾನವನ್ನು ನಾವು ಸ್ವೀಕರಿಸಿದ್ದು, ಕೇವಲ‌ ಕಾಗದ ಅಷ್ಟೇ ಅಲ್ಲ ನೀರಾವರಿ ಆಗಿರುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಅವರನ್ನು ತೋರಿಸುತ್ತೇವೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆರೆ ತುಂಬುವ ಯೋಜನೆಗೆ ಅನುಮೋದನೆ ದೊರೆಯಿತು. ಇದಕ್ಕೆ ಸಚಿವ ಎಂ.ಬಿ.ಪಾಟೀಲರು ಸಹ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಆದರೆ, ಇಡೀ ಕೆರೆ ತುಂಬುವ ಯೋಜನೆ ತಮ್ಮ ಸಾಧನೆ ಎಂದು ಬಿಜೆಪಿ ಲೇಬಲ್ ಅಂಟಿಸಿಕೊಳ್ಳಲು ಹೋಗುತ್ತಿದೆ. ಬಿಜೆಪಿ ನಾಯಕರು ನೀರಾವರಿ ತಮ್ಮ ಸಾಧನೆ ಎಂದು ಹೇಳಿಕೊಳ್ಳುವ ಮೊದಲು ತಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಬಿಡುಗಡೆಯಾದ ಅನುದಾನದ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದರು.

ಇಂಡಿ ಶಾಸಕರು ಅಂಧಭಕ್ತರು ಎಂದಿದ್ದಕ್ಕೆ ಅವರ ವಿರುದ್ಧ ಬಿಜೆಪಿಗರು ಮುಗಿಬೀಳುತ್ತಿದ್ದಾರೆ. ಆದರೆ, ಇಡೀ ದೇಶವೇ ಅವರಿಗೆ ಅಂಧಭಕ್ತರು ಎನ್ನುತ್ತಿದೆ. ಅಲ್ಲದೇ, ಇಸ್ರೇಲ್ ನಮ್ಮ ಪಿತೃದೇಶ ಎಂದು ದೇಶದ ಪ್ರಧಾನಿಗಳು ಹೇಳಿದಾಗ ದೇಶದ ಮಾನ ಹರಾಜು ಆಗಲಿಲ್ಲವೇ ಎಂದು ಪ್ರಶ್ನಿಸಿದರು. ಅಲಿಪ್ತ ನೀತಿ ಅನುಸರಿಸಿದ ನೆಹರು ಅವರದ್ದು ಶ್ರೇಷ್ಠ ವಿದೇಶಾಂಗ ನೀತಿ. ಆದರೆ, ಮೋದಿಜಿ ಅವರ ವಿದೇಶಾಂಗ ನೀತಿಯಿಂದ ದೇಶ ಹಾಳಾಗುತ್ತಿದೆ. ಪಂಚ ರಾಜ್ಯ ಚುನಾವಣೆ ತನಕ ಸುಮ್ಮನಿದ್ದು ಏಕಾಏಕಿಯಾಗಿ ಪೆಟ್ರೋಲ್, ಡಿಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ಚೆಕ್ ರೂಪದಲ್ಲಿ ಲಂಚ ಪಡೆದುಕೊಂಡು ಜೈಲು ಸೇರಿದ ವ್ಯಕ್ತಿಯನ್ನು ಪ್ರಧಾನಿ ಮೋದಿಯವರು ಪಕ್ಕದಲ್ಲಿ ಕೂರಿಸಿಕೊಂಡು ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಟೀಕೆ ಮಾಡುತ್ತಾರೆ. ಹೀಗೆ ಟೀಕೆ ಮಾಡಲು ಹೇಗೆ ಮನಸು ಬಂತು ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಡಾ.ರವಿಕುಮಾರ ಬಿರಾದಾರ, ವಸಂತ ಹೊನಮೋಡೆ ಉಪಸ್ಥಿತರಿದ್ದರು.


ಬಿಜೆಪಿ ನಾಯಕರೇ ವೇದಿಕೆ ಸಿದ್ದಪಡಿಸಲಿ, ನಾವು ದಾಖಲೆ ಸಮೇತ, ಆಧಾರ ಸಹಿತವಾಗಿ ಸಚಿವ ಎಂ.ಬಿ.ಪಾಟೀಲರು ನೀರಾವರಿಗೆ ನೀಡಿದ ಕೊಡುಗೆಯನ್ನು ವಿವರಿಸುತ್ತೇವೆ. ಕೆರೆ ತುಂಬುವ ಯೋಜನೆ ಸಚಿವ ಎಂ.ಬಿ.ಪಾಟೀಲರ ಪರಿಕಲ್ಪನೆಯ ಕೂಸು, ಅಸಾಧ್ಯವಾದ ಈ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತಂದಿದ್ದಾರೆ.

-ಎಸ್.ಎಂ.ಪಾಟೀಲ ಗಣಿಹಾರ, ಕೆಪಿಸಿಸಿ ವಕ್ತಾರ