ಎಂಸಿಸಿ ಬ್ಯಾಂಕ್ನ ಸಂತೆಕಟ್ಟೆ ಶಾಖೆ ಪ್ರಾರಂಭವಾದ ಕೇವಲ ಏಳು ತಿಂಗಳ ಅವಧಿಯಲ್ಲೇ ೧೦ ಕೋಟಿ ರು. ವ್ಯವಹಾರ ವಹಿವಾಟು ಸಾಧಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ ಅಂಗವಾಗಿ ಶಾಖೆಯ ವತಿಯಿಂದ ಸಂತೆಕಟ್ಟೆ ಶಾಖಾ ಆವರಣದಲ್ಲಿ ಸಂಭ್ರಮಾಚರಣೆ ಹಾಗೂ ಶಾಲೆಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.
ಮಂಗಳೂರು: ಎಂಸಿಸಿ ಬ್ಯಾಂಕ್ನ ಸಂತೆಕಟ್ಟೆ ಶಾಖೆ ಪ್ರಾರಂಭವಾದ ಕೇವಲ ಏಳು ತಿಂಗಳ ಅವಧಿಯಲ್ಲೇ ೧೦ ಕೋಟಿ ರು. ವ್ಯವಹಾರ ವಹಿವಾಟು ಸಾಧಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ ಅಂಗವಾಗಿ ಶಾಖೆಯ ವತಿಯಿಂದ ಸಂತೆಕಟ್ಟೆ ಶಾಖಾ ಆವರಣದಲ್ಲಿ ಸಂಭ್ರಮಾಚರಣೆ ಹಾಗೂ ಶಾಲೆಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.ಬ್ಯಾಂಕ್ ಅಧ್ಯಕ್ಷ, ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂತೆಕಟ್ಟೆ ಶಾಖೆ ಕೇವಲ ಏಳು ತಿಂಗಳ ಅವಧಿಯಲ್ಲಿ ೧೦ ಕೋಟಿ ರು. ವ್ಯವಹಾರ ಸಾಧಿಸಲು ನೆರವಾದ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಾಧನೆ ಈ ಪ್ರದೇಶದ ಜನರು ಎಂಸಿಸಿ ಬ್ಯಾಂಕ್ ಮೇಲೆ ಇಟ್ಟಿರುವ ವಿಶ್ವಾಸ, ನಂಬಿಕೆ ಹಾಗೂ ನಿರಂತರ ಬೆಂಬಲದ ಪ್ರತಿಬಿಂಬವಾಗಿದೆ. ೨೦೧೮ರಲ್ಲಿ ಪ್ರಸ್ತುತ ಆಡಳಿತ ಮಂಡಳಿ ಬ್ಯಾಂಕಿನ ಹೊಣೆಗಾರಿಕೆಯನ್ನು ವಹಿಸಿಕೊಂಡಾಗ ಸದಸ್ಯರ ಮುಂದೆ ಒಂದು ಘೋಷಣಾ ಪತ್ರ ಮಂಡಿಸಲಾಗಿತ್ತು, ಆ ಘೋಷಣಾ ಪತ್ರದ ಆಧಾರದ ಮೇಲೆ ಹಾಗೂ ಸದಸ್ಯರು ಮತ್ತು ಶೇರುದಾರರು ತೋರಿದ ವಿಶ್ವಾಸದಿಂದ ನಿರ್ದೇಶಕರು ಆಯ್ಕೆಯಾಗಿದ್ದರು. ಸಮರ್ಪಿತ ಪ್ರಯತ್ನಗಳು ಹಾಗೂ ವೃತ್ತಿಪರ ಆಡಳಿತದ ಮೂಲಕ ಸದಸ್ಯರು ಮತ್ತು ಗ್ರಾಹಕರು ತೋರಿದ ವಿಶ್ವಾಸ ಹಾಗೂ ನಿರೀಕ್ಷೆಗಳನ್ನು ಉಳಿಸಿಕೊಳ್ಳಲು ಆಡಳಿತ ಮಂಡಳಿಗೆ ಸಾಧ್ಯವಾಗಿದೆ ಎಂದರು.
ತೊಟ್ಟಂನ ಸಂತ ಅನ್ನಾ ಚರ್ಚ್ ಧರ್ಮಗುರು ಫಾ.ಹೆನ್ರಿ ಮಸ್ಕರೇನ್ಹಸ್ ಮಾತನಾಡಿ, ಸಂತೆಕಟ್ಟೆ ಶಾಖೆಯ ವ್ಯವಹಾರ ಸಾಧನೆ ಅತ್ಯಂತ ಗಮನಾರ್ಹ ಸಾಧನೆಯಾಗಿದ್ದು, ಗ್ರಾಹಕರು ಎಂಸಿಸಿ ಬ್ಯಾಂಕ್ ಮೇಲೆ ಇಟ್ಟಿರುವ ವಿಶ್ವಾಸದ ಪ್ರತಿಬಿಂಬವಾಗಿದೆ ಎಂದರು.ಸಮಾಜಸೇವಕ ರೇಮಂಡ್ ವಾಲ್ಟರ್ ಕ್ರಾಸ್ತಾ, ಕಿನ್ನಿಮೂಲ್ಕಿಯ ಕಿದಿಯೂರು ಸಹಕಾರಿ ಸಂಘದ ನಿರ್ದೇಶಕ ನಿತಿನ್ ಪೂಜಾರಿ, ಶಾಖಾ ಸಹಾಯಕ ನಿರ್ದೇಶಕ ಡಾ.ಜೆರಾಲ್ಡ್ ಪಿಂಟೊ, ಮಹಾಪ್ರಬಂಧಕ ಸುನಿಲ್ ಮಿನೇಜಸ್, ಸಂತೆಕಟ್ಟೆ ಶಾಖೆಯ ಸ್ಥಾಪಕ ವ್ಯವಸ್ಥಾಪಕ ಅಜಿತ್ ಡಿಸೋಜಾ, ಶಾಖಾ ವ್ಯವಸ್ಥಾಪಕಿ ಜ್ಯೋತಿ ಬ್ಯಾರೆಟ್ಟೊ, ನಿರ್ದೇಶಕರಾದ ಎಲ್ರಾಯ್ ಕೆ.ಕ್ರಾಸ್ಟೊ, ಡಾ.ಫ್ರೀಡಾ ಡಿಸೋಜಾ ಮತ್ತಿತರರು ಇದ್ದರು.
ಸಂತೆಕಟ್ಟೆ ಶಾಖೆಯ ಹತ್ತು ಸ್ಥಾಪಕ ಗ್ರಾಹಕರಿಂದ ವಿಶೇಷ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬ್ಯಾಂಕ್ನ ಗ್ರಾಹಕರ ಮಕ್ಕಳಲ್ಲಿ ಬೋರ್ಡ್ ಪರೀಕ್ಷೆಯಲ್ಲಿ ಶೇ.೮೫ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಕುಂದಾಪುರದ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಂತ ಜೋಸೆಫ್ ಪ್ರೌಢ ಶಾಲೆ, ಗಂಗೊಳ್ಳಿಯ ಸ್ಟೆಲ್ಲಾ ಮೇರಿಸ್ ಶಾಲೆ ಹಾಗೂ ಬ್ರಹ್ಮಾವರದ ನಿರ್ಮಲಾ ಪ್ರೌಢ ಶಾಲೆಯ ಅಗತ್ಯವಿರುವ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಬಾರ್ಕೂರಿನ ಮರಿನೋಲ್ ಹೈಸ್ಕೂಲ್ಗೆ ಕ್ರೀಡಾ ಸಾಮಗ್ರಿಗಳನ್ನು ಸಹ ವಿತರಿಸಲಾಯಿತು. ಸಾಧನೆಗಾಗಿ ಶ್ರಮಿಸಿದ ಶಾಖಾ ಸಿಬ್ಬಂದಿಯನ್ನು ಗೌರವಿಸಲಾಯಿತು.
ಡಾ.ಜೆರಾಲ್ಡ್ ಪಿಂಟೊ ಸ್ವಾಗತಿಸಿದರು. ಜ್ಯೋತಿ ಬಾರೆಟ್ಟೋ ವಂದಿಸಿದರು. ಓವಿನ್ ರೆಬೆಲ್ಲೊ ನಿರೂಪಿಸಿದರು.