ಸಾರಾಂಶ
ಯಲ್ಲಾಪುರ: ಸುತ್ತ ಯಂತ್ರಗಳಿಂದಲೇ ತುಂಬಿರುವ ಧಾವಂತದ ಬದುಕಿಗೆ ಸಹಜತೆ ತುಂಬುವ ಚಿಕಿತ್ಸೆ ಸಿಗುವುದು ಕಾವ್ಯದಿಂದ ಮಾತ್ರ. ಗ್ರಾಮ್ಯ ಜಗತ್ತಿನ, ಸಹಜ ಬದುಕಿನ ಒಡಲಾಳದ ಈ ಕವಿತೆಗಳಲ್ಲಿ ಕವಿ ಅವರ ಸುತ್ತಮುತ್ತಲಿನ ಜಗತ್ತನ್ನು ನಿಷ್ಕಲ್ಮಷವಾಗಿ ತೆರೆದಿಟ್ಟಿದ್ದಾರೆ. ಯಾವ ಘೋಷಣೆ, ಪ್ರಣಾಳಿಕೆ ಅಥವಾ ಆಶ್ವಾಸನೆಗಳ ಹಂಗಿಲ್ಲದೇ ಪ್ರಾಮಾಣಿಕವಾಗಿ ಭಿತ್ತರಿಸಿದ್ದಾರೆ. ಅನುಭವ ಅರಿವಾಗಿ ಪರಿವರ್ತನೆ ಆದ ಇಂತಹ ಕವಿತೆಗಳು ಜನಮಾನಸದಲ್ಲಿ ನೆಲೆ ನಿಲ್ಲಲು ಸಾಧ್ಯ ಎಂದು ಖ್ಯಾತ ಕಥೆಗಾರ ಶ್ರೀಧರ ಬಳಗಾರ ಬಣ್ಣಿಸಿದರು.ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮತ್ತು ಮೈತ್ರಿ ಕಲಾ ಬಳಗ ಆಯೋಜಿಸಿದ್ದ ಗುರುಗಣೇಶ ಡಬ್ಗುಳಿ ಅವರ ಇದುವರೆಗಿನ ಪ್ರಾಯ ಕವಿತಾ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ನಮ್ಮ ಕುರಿತು ಸ್ವತಃ ನಾವೇ ಅನುಮಾನ, ಅತೃಪ್ತಿ ಹೊಂದಿರಬೇಕು. ಆಗ ಮಾತ್ರ ಇನ್ನಷ್ಟು ಉತ್ಕೃಷ್ಟ ಕಾವ್ಯ- ಸಾಹಿತ್ಯ ರಚನೆ ಸಾಧ್ಯ. ಗುರುಗಣೇಶ ಡಬ್ಗುಳಿ ಅವರ ಕವಿತೆಗಳಲ್ಲಿ ಬಳಸಿದ ಪದ, ಪ್ರತಿಮೆ ಶೈಲಿಗಳು ಅತ್ಯಂತ ಖಾಸಗಿಯಾದ ಚಿತ್ರದ ನೇಯ್ಗೆಯನ್ನು ನೀಡುತ್ತವೆ.ಚಿಕ್ಕ ಊರಿನ ಮುಗ್ಧ ಹಳ್ಳಿಯಲ್ಲಿ ಪ್ರಾಯದಿಂದ ಪ್ರಬುದ್ಧಮಾನವಾಗುವ ಹಾದಿಯಲ್ಲಿ ಗುರುಗಣೇಶ ಗುರುತಿಸಿದ ಸಂಗತಿಗಳು ಗಮನಾರ್ಹ. ತನ್ನ ಪರಿಸರಕ್ಕೆ ಸಹಜ, ಆತ್ಮೀಯವಾದ ಪದಗಳನ್ನು ಸಂಕೋಚವಿಲ್ಲದೇ ಬಳಸಿಕೊಳ್ಳುವ ಪ್ರೀತಿ, ಮಮತೆ ಇವರಿಲ್ಲದೆ. ಇದು ಹೊರಜಗತ್ತಿಗೆ ನಿಜಕ್ಕೂ ಅಚ್ಚರಿಯಾಗಿ ಕಾಣುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯ ಅಧ್ಯಾಪಕಿ ಮುಕ್ತ ಶಂಕರ್ ಮಾತನಾಡಿ, ಪ್ರಕೃತಿಯಲ್ಲಿರುವ ಅನೇಕ ವಸ್ತುಗಳನ್ನು ಬದುಕಿನ ಸಂಗತಿಗಳನ್ನು ಸಮಾಜದ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅಭಿವ್ಯಕ್ತಿದಾಗ ಕಾವ್ಯ ಸೃಷ್ಟಿಯಾಗುತ್ತದೆ. ಆ ದೃಷ್ಟಿಯಿಂದ ಬೆಳೆದು ಬಂದ ಪರಿಸರ ಸಂವೇದನಾಶೀಲತೆ ಅವನನ್ನು ಕವಿಯಾಗಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕೃತಿಗಳು ಬರುವಂತಾಗಲಿ ಎಂದರು.ಕಸಾಪ ತಾಲೂಕು ಕಾರ್ಯದರ್ಶಿ ಜಿ.ಎನ್. ಭಟ್ ಮಾತನಾಡಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸಹ ಕಾರ್ಯದರ್ಶಿ ಹಾಗೂ ಹಿಂದಿರತ್ನ ಪ್ರಶಸ್ತಿ ಪುರಸ್ಕೃತ ಸಿ.ಎಸ್. ಚಂದ್ರಶೇಖರ್ ಮತ್ತು ಕೃತಿಕಾರ ಗುರುಗಣೇಶ ದಂಪತಿಗಳನ್ನು ಈ ಸಂದರ್ಭದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಗಣಪತಿ ಕಂಚಿಪಾಲ ಸನ್ಮಾನಿಸಿಸಿದರು. ಪತ್ರಕರ್ತ ದತ್ತಾತ್ರೇಯ ಕಣ್ಣಿಪಾಲ ಅವರು ಕೃತಿ ಪರಿಚಯವನ್ನು ಮಾಡಿದರು. ಸಿ.ಎಸ್. ಚಂದ್ರಶೇಖರ್ ಸ್ವಾಗತಿಸಿದರು. ಸುಮಾ ಕಂಚಿಪಾಲ ನಿರ್ವಹಿಸಿದರು. ವೈಭವಿ ಮತ್ತು ಸ್ವಾತಿ ಪ್ರಾರ್ಥಿಸಿದರು. ವಾಣಿ ವಿನಯ ವಂದಿಸಿದರು.