ಸಾರಾಂಶ
ಬ್ಯಾಕೋಡು: ಸಮೀಪದ ತುಮರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಿರುವಾಸೆ ಗ್ರಾಮದ ಜಂಟಿ ಅರಣ್ಯ ಸಮಿತಿಯ ಸರ್ವ ಸದಸ್ಯರ ಸಭೆಯನ್ನು ಗ್ರಾಮಸ್ಥರು ಬಹಿಷ್ಕರಿಸಿ ಸಭೆಯಿಂದ ಹೊರ ನೆಡೆದ ಘಟನೆ ಬುಧವಾರ ನಡೆದಿದೆ. ಇಲ್ಲಿನ ಕಿರುವಾಸೆ ಗ್ರಾಮದಲ್ಲಿ 2024-25 ನೇ ಸಾಲಿನಲ್ಲಿ ಗ್ರಾಮದಲ್ಲಿ ಸುಮಾರು 50ಹೆಕ್ಟೇರ್ ಪ್ರದೇಶದಲ್ಲಿನ ಅಕೇಶಿಯಾ ಕಟಾವು ಮಾಡಲಾಗಿದೆ. ಆದರೆ ಸುಮಾರು 7ವರ್ಷಗಳ ನಂತರ ಹಣ ಪಾವತಿ ಮಾಡಿರುವ ಕ್ರಮಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಸುಮಾರು 1 ಕೋಟಿ 36ಲಕ್ಷ ರುಪಾಯಿಯನ್ನು ಮರಗಳ ಕಡಿತಲೆ ಮತ್ತು ಸಾಗಣಿಕ ವೆಚ್ಚವಾಗಿ ತೋರಿಸಿರುವುದು ಅರಣ್ಯ ಇಲಾಖೆ ಅಂಕಿ ಅಂಶಗಳಲ್ಲಿ ಬೆಳಕಿಗೆ ಬಂದಿದೆ, ಇದರಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ ಗ್ರಾಮಸ್ಥರು, ತಕ್ಷಣವೇ ಜಿಲ್ಲಾಧಿಕಾರಿಗಳು ಗಮನ ಹರಿಸಿ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಸಭೆಯನ್ನು ಬಹಿಷ್ಕರಿಸಿದರು. ಇದೇ ವೇಳೆ ನಮ್ಮೂರಿಗೆ ಅಕೇಶಿಯಾ ಹಾಗೂ ಗ್ರಾಮ ಅರಣ್ಯ ಸಮಿತಿ ಸಹ ಬೇಡ ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ವಷ್ಟವಾಗಿ ತಿಳಿಸಿದರು. ಈ ವೇಳೆ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ರೆಂಜರ್ ರಾಘವೇಂದ್ರ, ಪಿಡಿಒ ಭೋಗರಾಜ, ಕಂದಾಯ ನಿರೀಕ್ಷಕ ಹುಸೇನ್ ಕಟ್ಟಿಮನಿ, ಕೆಡಿಪಿ ಸದಸ್ಯ ಸತ್ಯನಾರಾಯಣ ಜಿ ಟಿ, ಪರಮೇಶ್ವರ ಕರೂರು, ಪಿ ಟಿ ಸತ್ಯನಾರಾಯಣ ಇದ್ದರು.