ಚುನಾವಣೆ ಮೇಳೆ ಮಾತ್ರ ಕಾಂಗ್ರೆಸ್ ಕಾರ್ಯಕರ್ತರ ಭೇಟಿ: ಆಕ್ರೋಶ

| Published : Jan 31 2024, 02:19 AM IST

ಸಾರಾಂಶ

ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಪರ ಕೆಲಸ ಮಾಡಿದ್ದೇವೆ. ಸ್ಥಳೀಯ ಸಂಸ್ಥೆ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ದಿನೇಶ್ ಗೂಳಿಗೌಡ ಮತ್ತು ಮಧು ಮಾದೇಗೌಡರ ಪರ ಪ್ರಚಾರ ನಡೆಸಿ ಗೆಲ್ಲಿಸಿದ್ದೇವೆ. ಈ ಕ್ಷೇತ್ರಕ್ಕೆ ಅವರ ಕೊಡುಗೆ ಏನು..?, ಚುನಾವಣೆಯಲ್ಲಿ ಗೆದ್ದ ನಂತರ ಅವರ್‍ಯಾರು ನಮ್ಮ ಕ್ಷೇತ್ರದತ್ತ ತಿರುಗಿ ನೋಡುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಚುನಾವಣಾ ವೇಳೆ ಮಾತ್ರ ಕಾರ್ಯಕರ್ತರನ್ನು ಭೇಟಿ ಮಾಡಲು ಹಳ್ಳಿಗಳಿಗೆ ಬರುತ್ತಿರುವ ಕಾಂಗ್ರೆಸ್ ಮುಖಂಡರ ನಡೆ ವಿರುದ್ಧ ಬಹುತೇಕ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಂಡಿರುವ ಎರಡನೇ ಸುತ್ತಿನ ಪೂರ್ವಬಾವಿ ಪ್ರಚಾರ ಸಭೆ ಕಾಂಗ್ರೆಸ್ ಕಾರ್ಯಕರ್ತರು ನೇರವಾಗಿ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಪರ ಕೆಲಸ ಮಾಡಿದ್ದೇವೆ. ಸ್ಥಳೀಯ ಸಂಸ್ಥೆ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ದಿನೇಶ್ ಗೂಳಿಗೌಡ ಮತ್ತು ಮಧು ಮಾದೇಗೌಡರ ಪರ ಪ್ರಚಾರ ನಡೆಸಿ ಗೆಲ್ಲಿಸಿದ್ದೇವೆ. ಈ ಕ್ಷೇತ್ರಕ್ಕೆ ಅವರ ಕೊಡುಗೆ ಏನು ಎಂದು ಪ್ರಶ್ನೆ ಮಾಡಿದರು.

ಚುನಾವಣೆಯಲ್ಲಿ ಗೆದ್ದ ನಂತರ ಅವರ್‍ಯಾರು ನಮ್ಮ ಕ್ಷೇತ್ರದತ್ತ ತಿರುಗಿ ನೋಡುತ್ತಿಲ್ಲ. ಆದರೆ, ಜೆಡಿಎಸ್‌ನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಮುಂತಾದವರು ತಮ್ಮದಲ್ಲದ ಕ್ಷೇತ್ರಕ್ಕೆ ಬಂದು ಕಾರ್ಯಕರ್ತರನ್ನು ಭೇಟಿ ಮಾಡಿ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಾರೆ ಎಂದರು.

ತಮ್ಮ ವ್ಯಾಪ್ತಿಗೆ ಬಾರದ ಕೆ.ಆರ್.ಪೇಟೆ ಕ್ಷೇತ್ರಕ್ಕೂ ತಮ್ಮ ಪಕ್ಷದ ರಾಜ್ಯಸಭಾ ಸದಸ್ಯರು ಮತ್ತು ವಿಧಾನ ಪರಿಷತ್ ಸದಸ್ಯರಿಂದ ಅನುದಾನ ಹಾಕಿಸಿ ಕೊಡುತ್ತಾರೆ. ಕಾಂಗ್ರೆಸ್ ಮುಖಂಡರ ಮನೋಭಾವದಲ್ಲಿ ಬದಲಾವಣೆಯಾಗಬೇಕು. ಪಕ್ಷದ ಮುಖಂಡರು ಪರಸ್ಪರ ಗುಂಪುಗಾರಿಕೆ ತ್ಯಜಿಸಿ ಸಮನ್ವಯ ಗುಣ ಬೆಳೆಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಕಾರ್ಯಕರ್ತರು ಪಕ್ಷದ ಒಬ್ಬ ನಾಯಕನ ಬಳಿ ಹೋದರೆ ಮತ್ತೊಬ್ಬನಿಗೆ ಆಗುವುದಿಲ್ಲ. ಕಾರ್ಯಕರ್ತರು ಯಾವುದೇ ನಾಯಕನ ಜೊತೆ ವಿಶ್ವಾಸದಲ್ಲಿದ್ದರೂ ಅವನು ನಮ್ಮ ಪಕ್ಷದ ಕಾರ್ಯಕರ್ತ ಎನ್ನುವ ಮನೋಭಾವ ಮುಖಂಡರಲ್ಲಿ ಬರಬೇಕು ಎಂದರು.

ನಾಯಕರಲ್ಲಿ ಬದಲಾವಣೆಯಾಗದೆ ಪಕ್ಷದ ಸಂಘಟನೆ ಅಸಾಧ್ಯ ಎಂದು ತಾಲೂಕಿನ ಲಕ್ಷ್ಮೀಪುರ, ಅಘಲಯ, ಸಂತೇಬಾಚಹಳ್ಳಿ, ಹರಪನಹಳ್ಳಿ ಕ್ರಾಸ್ ಮುಂತಾದ ಸಭೆಗಳಲ್ಲಿ ನಾಯಕರೊಂದಿಗೆ ಕಾರ್ಯಕರ್ತರು ವಾಗ್ವಾದ ನಡೆಸಿದರು.

ಸಂಸದೆ ಸುಮಲತಾ ಕೊಟ್ಟ ಅನುದಾನ ಗೊತ್ತಿಲ್ಲ:

ಕಾರ್ಯಕರ್ತರು ಆಕ್ರೋಶಕ್ಕೆ ಉತ್ತರಿಸಿದ ಮುಖಂಡ ಬಿ.ಎಲ್.ದೇವರಾಜು, ಹೈಕಮಾಂಡ್ ಸೂಚನೆ ಮೇರೆಗೆ ಸುಮಲತಾ ಅವರನ್ನು ಬೆಂಬಲಿಸಬೇಕಾಯಿತು. ತಮ್ಮ 5 ವರ್ಷದ ಅಧಿಕಾರದಲ್ಲಿ ಸಂಸದೆ ಸುಮಲತಾ ನಾನು ಕಂಡಂತೆ ಕೇವಲ ಬಾರಿ ಕ್ಷೇತ್ರಕ್ಕೆ ಬಂದಿದ್ದಾರೆ. ಅವರು ಕೊಟ್ಟಿರುವ ಅನುದಾನದ ಬಗ್ಗೆ ನಮಗ್ಯಾರಿಗೂ ಗೊತ್ತಿಲ್ಲ ಎಂದರು.

ಪರಿಷತ್ ಸದಸ್ಯರ ಪ್ರಶ್ನಿಸುವ ಹಕ್ಕು ನಿಮಗಿದೆ. ನಾಯಕರು ಬಂದಾಗ ಕೇವಲ ಹಾರ ತುರಾಯಿ ಹಾಕುವ ಬದಲು ಕಾರ್ಯಕರ್ತರು ಪ್ರಶ್ನಿಸಿಸುವ ಮನೋಭಾವ ಬೆಳೆಸಿಕೊಂಡರೆ ನಾಯಕರಾದವರು ಕಾರ್ಯಕರ್ತರಿಗೆ ಅಂಜುತ್ತಾರೆ. ನಿಮ್ಮ ಅಸಮಾಧಾನವನ್ನು ಪಕ್ಷದ ನಾಯಕರ ಗಮನಕ್ಕೆ ತರುತ್ತೇವೆ ಎಂದು ಕಾರ್ಯಕರ್ತರನ್ನು ಸಮಾಧಾನಗೊಳಿಸಿದರು.

ಪಕ್ಷದ್ರೋಹ ಮಾಡಿದವರನ್ನು ಶಿಕ್ಷಿಸಲಿ:

ಮುಂದುವರೆದ ಮಾತನಾಡಿದ ಬಿ.ಎಲ್.ದೇವರಾಜು, ಕಳೆದ ಚುನಾವಣೆಯಲ್ಲಿ ಸೋಲಿಗೆ ಕಾರಣಕರ್ತರಾಗಿ ಪಕ್ಷ ದ್ರೋಹ ಮಾಡಿದವರನ್ನು ಶಿಕ್ಷಿಸಲಿ. ಕ್ಷೇತ್ರದಲ್ಲಿ ರಾಜಕಾರಣ ಮಾಡಲು ಇರುವ ಮತ್ತೊಂದು ಕ್ಷೇತ್ರವೆಂದರೆ ಡೇರಿ ಚುನಾವಣೆಗಳು. ಮನ್ಮುಲ್ ನಿರ್ದೇಶಕರಾಗಲು ಪ್ರತಿ ಮತಕ್ಕೆ ಒಂದೂವರೆ ಲಕ್ಷ ಹಣ ಕೊಡುತ್ತಿದ್ದಾರೆ. ಡೇರಿಗಳಲ್ಲಿ ರಾಜಕೀಯ ಹುಟ್ಟುಹಾಕಿ ಗ್ರಾಮಗಳನ್ನು ವಿಭಜಿಸುತ್ತಿದ್ದಾರೆ. ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಸಹಕಾರ ಸಂಘಗಳ ಮೇಲೆ ನಿಯಂತ್ರಣ ಸಾಧಿಸಬೇಕು ಎಂದರು.

ತಾಲೂಕಿನ ಚೌಡೇನಹಳ್ಳಿ, ದಬ್ಬೇಘಟ್ಟ, ಮಾದಾಪುರ, ಆನೆಗೊಳ, ಐಕನಹಳ್ಳಿ, ಲಕ್ಷ್ಮೀಪುರ, ಕಿಕ್ಕೇರಿ, ಭಾರತೀಪುರ ಕ್ರಾಸ್, ಅಘಲಯ, ಸಂತೇಬಾಚಹಳ್ಳಿ, ಹರಪನಹಳ್ಳಿ ಕ್ರಾಸ್ ಮತ್ತು ಸಾರಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮ ಮಟ್ಟದ ಸಭೆಗಳನ್ನು ನಡೆಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿದರು. ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಮುಖಂಡಕಾಜ ಎಂ.ಡಿ.ಕೃಷ್ಣಮೂರ್ತಿ, ಜಿಪಂ ಮಾಜಿ ಸದಸ್ಯರಾದ ಕೋಡಿಮಾರನಹಳ್ಳಿ ದೇವರಾಜು, ಕೊಡಗಹಳ್ಳಿ ಮಂಜೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಳಹಳ್ಳಿ ವಿಶ್ವನಾಥ್, ಬಿ.ನಾಗೇಂದ್ರ ಕುಮಾರ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಜಿಲ್ಲಾ ಅಹಿಂದ ಘಟಕದ ಅಧ್ಯಕ್ಷ ಕೃಷ್ಣ, ಸೋನಿಯಾ ಬ್ರಿಗೆಡ್ ಅಧ್ಯಕ್ಷೆ ವೀಣಾ ಶಂಕರ್, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೆ.ಬಿ.ಪ್ರತಿಭಾ ಸೇರಿದಂತೆ ಆಯಾ ಗ್ರಾಪಂ ವ್ಯಾಪ್ತಿಯ ಮುಖಂಡರು ಭಾಗವಹಿಸಿದ್ದರು.