ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯದ 5 ಕೋಟಿ ಜನರು ಸೇರಿ ದೇಶದ 80 ಕೋಟಿ ಜನರಿಗೆ ಉಚಿತ ಆಹಾರ ಪದಾರ್ಥ ವಿತರಿಸುತ್ತಿದ್ದು, ನಾಲ್ಕು ತಿಂಗಳಿಗೆ ಬೇಕಾಗುವಷ್ಟು ಆಹಾರ ಶೇಖರಣೆ ಇದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.ಗುರುವಾರ ಆಹಾರ ನಿಗಮದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆಹಾರ ಕೊರತೆ ಇಲ್ಲ. ಅಗತ್ಯವಿರುವಷ್ಟು ಆಹಾರ ಸಂಗ್ರಹವಿದೆ. 2011ರ ಗಣತಿಯಂತೆ ದೇಶದ 80 ಕೋಟಿ ಜನರಿಗೆ ಉಚಿತವಾಗಿ ಆಹಾರ ನೀಡಲಾಗುತ್ತಿದೆ. ನಾಲ್ಕು ತಿಂಗಳಿಗೆ ಬೇಕಾಗುವಷ್ಟು ಆಹಾರವನ್ನು ಸಂಗ್ರಹಿಸಿಟ್ಟುಕೊಂಡು, ಉಳಿದದ್ದನ್ನು ಮಾರಾಟ ಮಾಡಲಾಗುತ್ತಿದೆ ಎಂದರು.ದೇಶದಲ್ಲಿ ಪಡಿತರ ವಿತರಣಾ ವ್ಯವಸ್ಥೆ ಚೆನ್ನಾಗಿದೆ. ರಾಜ್ಯದ ಹಲವೆಡೆ ಗೋದಾಮು ಸ್ಥಾಪಿಸಿ ಅಲ್ಲಿಂದಲೇ ರಾಜ್ಯದೆಲ್ಲೆಡೆಗೆ ವಿತರಣೆ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಜನರಿಗೆ ಆಹಾರದ ಕೊರತೆ ಉಂಟಾಗಬಾರದು. ಜತೆಗೆ ದರವೂ ಹೆಚ್ಚಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.ರಾಜ್ಯಕ್ಕೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು 24 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು. 10 ಕೆಜಿ ಉಚಿತವಾಗಿ ನೀಡಿದರೆ 48 ಲಕ್ಷ ಮೆಟ್ರಿಕ್ಟನ್ ಬೇಕಾಗುತ್ತದೆ. ಕಾಂಗ್ರೆಸ್ತನ್ನ ಪ್ರಣಾಳಿಕೆಯಲ್ಲಿ 10 ಕೆಜಿ ಉಚಿತವಾಗಿ ನೀಡುವ ಭರವಸೆ ನೀಡಿತ್ತು. ಆದರೆ ಆಹಾರ ನಿಗಮದ ಅಧಿಕಾರಿಗಳು ಮುನ್ನೆಚ್ಚರಿಕೆಯಾಗಿ ಅಗತ್ಯ ದಾಸ್ತಾನು ಹೊಂದಲು ಅಕ್ಕಿ ಇಲ್ಲ ಎಂದರು. ರಾಜ್ಯದಲ್ಲಿಯೇ 50 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಉತ್ಪಾದನೆ ಆಗುತ್ತದೆ. ಸರ್ಕಾರಕ್ಕೆ ಕೊಡುವ ಇಚ್ಛಾಸಕ್ತಿ ಇದ್ದರೆ ರೈತರಿಂದಲೇ ಖರೀದಿಸಿ ಕೊಡಬಹುದಿತ್ತು. ಆದರೆ ಸರ್ಕಾರ ಆ ಕೆಲಸ ಮಾಡಲಿಲ್ಲ ಎಂದರು.ರಾಜ್ಯದಲ್ಲಿ ಸಾರ್ವಜನಿಕ ವಿತರಣಾ ಪದ್ಧತಿಯಲ್ಲಿ ಪಡಿತರ ವಿತರಣೆಗೆ ಏನೇನು ಸಮಸ್ಯೆ ಇದೆ ಎಂದು ತಿಳಿಯಲು ಆಹಾರ ನಿಗಮದ ರಾಜ್ಯ ಸಲಹಾ ಸಮಿತಿ ಸಭೆ ನಡೆಸಿದ್ದೇನೆ. ಪಡಿತರ ವಿತರಣೆಯ ಸಮಸ್ಯೆ ಕುರಿತು ಚರ್ಚಿಸಲಾಗಿದೆ. ಇದೆಲ್ಲವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತೇನೆ. ಜತೆಗೆ ಜಿಲ್ಲೆಯ ಗೋದಾಮುಗಳಿಗೂ ಭೇಟಿ ನೀಡಿ ಪರಿಶೀಲಿಸುವುದಾಗಿ ಅವರು ಹೇಳಿದರು.ಹಿರಿಯ ನಾಗರಿಕೆಗೆ 10 ಕೆಜಿ ಅಕ್ಕಿ: ಗರೀಬ್ ಅನ್ನ ಕಲ್ಯಾಣ ಯೋಜನೆ ಮಾತ್ರವಲ್ಲದೆ ಬೇರೆ ಬೇರೆ ಯೋಜನೆಗಳಲ್ಲಿ ಆಹಾರ ಪದಾರ್ಥ ವಿತರಿಸುತ್ತಿದ್ದೇವೆ. ಜನಕಲ್ಯಾಣ ಯೋಜನೆಗಳು, ಮಿಲಿಟರಿ, ಅಂಗನಗಾಡಿಗಳಿಗೂ ಪೂರೈಸುತ್ತಿದ್ದೇವೆ. ಅನ್ನಪೂರ್ಣ ಯೋಜನೆಯಡಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತವಾಗಿ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ. ಆದರೆ, ದುರ್ದೈವ ರಾಜ್ಯ ಸರ್ಕಾರ 60 ವರ್ಷ ಮೇಲ್ಪಟ್ಟವರ ಪಟ್ಟಿ ಕೊಡದಿದ್ದರಿಂದ ರಾಜ್ಯದಲ್ಲಿ ಯೋಜನೆ ಜಾರಿಯಾಗಿಲ್ಲ. ಪಟ್ಟಿ ನೀಡಿದರೆ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದರು. ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮಕರ್ನಾಟಕದ 63 ಗೋದಾಮುಗಳಲ್ಲಿ 10.50 ಮೆಟ್ರಿಕ್ ಟನ್ ಆಹಾರ ಸಂಗ್ರಹಣಾ ಸಾಮರ್ಥ್ಯವಿದೆ. ನಾಲ್ಕು ತಿಂಗಳಿಗೆ ಬೇಕಾಗುವ ಆಹಾರಕ್ಕಿಂತ ಹೆಚ್ಚು ದಾಸ್ತಾನಿದೆ. ಪ್ರಸ್ತುತ ರಾಜ್ಯದಲ್ಲಿ ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು, ಮದ್ದೂರು, ಕುಶಾಲನಗರ ಸೇರಿ 6 ಗೋದಾಮುಗಳ ಸಾಮರ್ಥ್ಯ ಹೆಚ್ಚಳಕ್ಕೆ ತೀರ್ಮಾನಿಸಿ, ಟೆಂಡರ್ ಕರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.ವ್ಯವಸ್ಥಾಪಕ ಮಹೇಶ್ವರಪ್ಪ, ಸಿ.ಎನ್. ಮಂಜುನಾಥ್ ಮೊದಲಾದವರು ಇದ್ದರು.---ಕೋಟ್ರಾಜ್ಯ ಸರ್ಕಾರದಿಂದ ಒಂದು ಕೆಜಿ ಅಕ್ಕಿಯನ್ನೂ ಉಚಿತವಾಗಿ ನೀಡುತ್ತಿಲ್ಲ. ಕೋವಿಡ್ ಬಳಿಕ ಕಳೆದ ನಾಲ್ಕು ವರ್ಷಗಳಿಂದ ಕೇಂದ್ರ ಸರ್ಕಾರ ಉಚಿತವಾಗಿ 5 ಕೆಜಿ ಅಕ್ಕಿ ನೀಡುತ್ತಿದೆ. ಆದರೆ, ಅಕ್ಕಿ ನಮ್ಮದು, ಲೇಬಲ್ ಕಾಂಗ್ರೆಸ್ ಅವರದ್ದು ಎಂಬಂತಾಗಿದೆ. ಇದು ಕೇವಲ ಚುನಾವಣಾ ಗಿಮಿಕ್.-ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯ