ಪಟ್ಟಣದ ಪುರಸಭೆ ಸಮೀಪ ಸರ್ಕಾರಿ ಆಸ್ಪತ್ರೆ ಮತ್ತು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮರ ತೆರವು ಮಾಡುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು 7 ದಿನ ಕಾಲಾವಕಾಶ ನೀಡಿದ ಅರಣ್ಯ ಇಲಾಖೆ ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು ಕರೆದಿದ್ದ ಸಭೆ ಗೊಂದಲದಲ್ಲಿ ಅಂತ್ಯ ಕಂಡಿದೆ.
ಕನ್ನಡಪ್ರಭ ವಾರ್ತೆ ಮಾಗಡಿ
ಪಟ್ಟಣದ ಪುರಸಭೆ ಸಮೀಪ ಸರ್ಕಾರಿ ಆಸ್ಪತ್ರೆ ಮತ್ತು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮರ ತೆರವು ಮಾಡುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು 7 ದಿನ ಕಾಲಾವಕಾಶ ನೀಡಿದ ಅರಣ್ಯ ಇಲಾಖೆ ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು ಕರೆದಿದ್ದ ಸಭೆ ಗೊಂದಲದಲ್ಲಿ ಅಂತ್ಯ ಕಂಡಿದೆ. ಹೈಕೋರ್ಟ್ ಆದೇಶದಂತೆ ಅಭಿವೃದ್ಧಿ ಹಿನ್ನೆಲೆಯಲ್ಲಿ ಮರ ತೆರವುಗೊಳಿಸುವುದಾದರೆ ಕಾನೂನು ಬದ್ಧವಾಗಿ ಅನುಮತಿ ಪಡೆದು ತೆರವುಗೊಳಿಸುವಂತೆ ಆದೇಶ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮರ ತೆರವು ವಿಚಾರವಾಗಿ ಪರ-ವಿರೋದ ಆಕ್ಷೇಪಣೆ ಅರ್ಜಿಗಳನ್ನು ಪಡೆಯಲು 7 ದಿನ ಸಾರ್ವಜನಿಕ ಪ್ರಕಟಣೆ ಮೂಲಕ ತಿಳಿಸಲಾಗಿತ್ತು. ಪರ ಮತ್ತು ವಿರೋಧ ಅರ್ಜಿಗಳು ಸಲ್ಲಿಕೆಯಾಗಿದ್ದು ಮಂಗಳವಾರ ತಾಲೂಕು ಕಚೇರಿ ಆವರಣದಲ್ಲಿ ಆಕ್ಷೇಪಣೆ ಸಲ್ಲಿಸಲು ಅಧಿಕಾರಿಗಳ ತಂಡ ಮತ್ತು ಸಾರ್ವಜನಿಕರ ಸಭೆಯಲ್ಲಿ ಅರಣ್ಯ ಇಲಾಖೆ ಮತ್ತು ಸರ್ಕಾರಿ ಆಸ್ಪತ್ರೆ ಇಲಾಖೆಯ ವೈದ್ಯರು ಅಧಿಕಾರಿಗಳು ಭಾಗವಹಿಸಿದ್ದರು.ಪರ ಮತ್ತು ವಿರೋಧ ಅರ್ಜಿಗಳು ಸಲ್ಲಿಕೆಯಾಗಿ ಸಾರ್ವಜನಿಕರ ಸಭೆಯಲ್ಲಿ ಸಲ್ಲಿಸುವ ವೇಳೆ ಆಸ್ಪತ್ರೆ ನಿರ್ಮಾಣವಾಗಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದರು.ಮರ ತೆರುವಿಗೆ ವಿರೋಧ ವ್ಯಕ್ತಪಡಿಸಿರುವ ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಹಾಗೂ ಅವರ ಬೆಂಬಲಿಗರು ವಿರೋಧಿಸಿ ಅರ್ಜಿ ಸಲ್ಲಿಸುವ ಹಿನ್ನೆಲೆಯಲ್ಲಿ ಸಭೆಗೆ ಹಾಜರಾಗುತ್ತಿದ್ದಂತೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಿವೃತ್ತ ವಾಯು ಸೇನೆ ಅಧಿಕಾರಿ ಶಿವಲಿಂಗಯ್ಯ ಯಾವುದೇ ಕಾರಣಕ್ಕೂ ಸರ್ಕಾರಿ ಆಸ್ಪತ್ರೆ ಅಧಿಕಾರಿಗಳು ಇಲ್ಲಿ ಮಾತನಾಡಬಾರದು ಅರಣ್ಯ ಇಲಾಖೆಯವರು ಮಾತ್ರ ಏಕೆ ಮರವನ್ನು ತೆರವು ಮಾಡುತ್ತಿದ್ದೀರಾ ಎಂದು ಹೇಳಬೇಕು ಎಂದರು.
ಇಲ್ಲಿ ಮರಗಳನ್ನು ತೆರವು ಮಾಡದೆ ಬೇರೆ ಜಾಗದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡುವಂತೆ ಸಭೆಯಲ್ಲಿ ಹೇಳುತ್ತಿದ್ದಂತೆ ಗೊಂದಲದ ವಾತಾವರಣ ನಿರ್ಮಾಣವಾಗಿ ಕೂಗಾಟ ಶುರುವಾಯಿತು. ತಕ್ಷಣವೇ ಡಿವೈಎಸ್ಪಿ ರವಿ ನೇತೃತ್ವದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು ಅರಣ್ಯ ಇಲಾಖೆಯ ಅಧಿಕಾರಿ ಚೈತ್ರ ರವರಿಗೆ ನೀವು ಆಕ್ಷೇಪಣೆ ಸಲ್ಲಿಸಲು ಸಭೆಯನ್ನು ಕರೆದಿದ್ದು ನೀವು ಮಾತ್ರ ಉತ್ತರಿಸಿ. ಇಲ್ಲಿ ಸರ್ಕಾರಿ ಆಸ್ಪತ್ರೆ ಅಧಿಕಾರಿಗಳು ಮಾತನಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.ಡಿವೈಎಸ್ಪಿ ರವಿ ಅವರು ಈಗಾಗಲೇ ಪರ-ವಿರೋಧ ಅರ್ಜಿಗಳು ಸಲ್ಲಿಕೆಯಾಗಿದ್ದು ಸರ್ಕಾರ ತೀರ್ಮಾನದಂತೆ ಕ್ರಮ ಕೈಗೊಳ್ಳುತ್ತಾರೆ ಸಭೆ ಇಲ್ಲಿಗೆ ಮುಕ್ತಾಯ ಮಾಡಲಾಗಿದೆ ಎಂದು ಕೆಲವೇ ನಿಮಿಷಗಳಲ್ಲಿ ಸಭೆಯನ್ನು ನಿಲ್ಲಿಸಲಾಯಿತು. ಇದರಿಂದ ಅಧಿಕಾರಿಗಳಾಗಲಿ ಪರ ವಿರೋಧವಾಗಿ ಮಾತನಾಡಲು ಬಂದಿದ್ದ ಕಾರ್ಯಕರ್ತರು ಯಾವುದೇ ವಿಚಾರ ಮಾಡದೆ ತೆರುಳುವಂತಾಯಿತು.
ಯಾವುದೇ ಕಾರಣಕ್ಕೂ ಮರ ತೆಗೆಯಬಾರದುಕೆಂಪೇಗೌಡ ಅಭಿವೃದ್ಧ ಸಮಿತಿ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಆಸ್ಪತ್ರೆ ಕಟ್ಟಲು ವಿರೋಧ ಮಾಡುತ್ತಿಲ್ಲ ಮರಗಳನ್ನು ತೆರವು ಮಾಡದೆ ಅಭಿವೃದ್ಧಿ ಕಾರ್ಯ ಮಾಡಲಿ. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಾವು ವಿರೋಧ ಮಾಡುತ್ತಿದ್ದೇವೆ ಎಂದು ಶಾಸಕ ಬಾಲಕೃಷ್ಣ ಅವರು ಆರೋಪಿಸುತ್ತಾರೆ. ಅವರು ಈಗ ಅಂಬೇಡ್ಕರ್ ಭವನ ಹಿಂದೆ ಇದ್ದ ಜಾಗದಲ್ಲೇ ಕಟ್ಟಿದರೆ ನಮ್ಮದೇನು ತಕರಾರು ಇಲ್ಲ. ಈಗ ಪಶು ಆಸ್ಪತ್ರೆ ಇರುವ ಜಾಗದಲ್ಲಿ ಕಟ್ಟಲು ಮುಂದಾಗುತ್ತಿದ್ದಾರೆ ಇದಕ್ಕೆ ನಮ್ಮ ವಿರೋಧವಿದೆ. ಹೈಕೋರ್ಟ್ ಕೂಡ ಮರ ತೆರವು ಮಾಡಬೇಕಾದರೆ ನಿಯಮಾನುಸಾರ ಅನುಮತಿ ಪಡೆಯಬೇಕೆಂದು ಕೇಳಿದ್ದಾರೆ ನಾವು 2000ಕ್ಕೂ ಹೆಚ್ಚು ಸಾರ್ವಜನಿಕರಿಂದ ಮರ ತೆರವು ಮಾಡದಂತೆ ಸಹಿ ಸಂಗ್ರಹಿಸಿ ಹಲವಾರು ಅರ್ಜಿಗಳನ್ನು ಅರಣ್ಯ ಇಲಾಖೆಗೆ ನೀಡಿದ್ದೇವೆ. ಆಕ್ಷೇಪಣೆ ಸಲ್ಲಿಸಲು ಕರೆದಿದ್ದ ಸಭೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಗೊಂದಲ ಮಾಡಿದ್ದಾರೆ ನಮ್ಮ ಹೋರಾಟ ನಿರಂತರವಾಗಿ ಇರುತ್ತದೆ ಎಂದು ತಿಳಿಸಿದರು.
ಬಡವರಿಗೆ ಅನುಕೂಲ: ಶ್ರೀಮಂತರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ ಬಡವರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ ಬೇಕಾಗಿದೆ. ಆದ್ದರಿಂದ ಇಲ್ಲಿ ವಿರೋಧ ಮಾಡುತ್ತಿರುವವರು ಅಭಿವೃದ್ಧಿಗೆ ತೊಂದರೆ ಕೊಡಬಾರದು. ಒಂದೂ ಮರ ತೆರವು ಮಾಡಿದರೆ 10 ಮರ ನೀಡುತ್ತೇವೆ. ಈಗ ಡೇರಿಯಲ್ಲಿ ಪ್ರತಿ ರೈತರಿಗೂ ಎರಡು ಸಸಿಗಳನ್ನು ನೀಡಿ ಸಾವಿರಾರು ಮರಗಳನ್ನು ತಾಲೂಕಿನಾದ್ಯಂತ ಬೆಳೆಸುವ ಕೆಲಸ ಶಾಸಕ ಬಾಲಕೃಷ್ಣ ನೇತೃತ್ವದಲ್ಲಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ ವಿರೋಧ ಮಾಡಬೇಡಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೂಜಾರಿ ಪಾಳ್ಯ ಕೃಷ್ಣಮೂರ್ತಿ ಮನವಿ ಮಾಡಿದರು.ಇದೇ ವೇಳೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ಅಶೋಕ್, ದಲಿತ ಮುಖಂಡ ಮಾಡಬಾಳ್ ಜಯರಾಂ, ಮರೂರು ಸಾಗರ್, ತಮ್ಮಣ್ಣಗೌಡ, ಎಂ.ಎನ್.ಮಂಜುನಾಥ್, ಅನಿಲ್, ಬಮೂಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ತಮ್ಮಣ್ಣಗೌಡಕಲ್ಕರೆ ಶಿವಣ್ಣ, ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ಮುಖಂಡರು ಹಾಗೂ ಕೆಂಪೇಗೌಡ ಅಭಿವೃದ್ಧಿ ಸಮಿತಿ ಸದಸ್ಯರುಗಳು ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.