ಬಾಳೆಹೊನ್ನೂರುಕಸ್ತೂರಿ ರಂಗನ್ ವರದಿ ಜಾರಿ ಸಮಸ್ಯೆ ಹಾಗೂ ಮಲೆನಾಡಿನ ಸಮಸ್ಯೆಗಳ ಕುರಿತು ಅಧ್ಯಯನಕ್ಕಾಗಿ ಸೆ.19ರಂದು ಬಾಳೆಹೊನ್ನೂರಿಗೆ ನಿಗದಿಗೊಂಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭೇಟಿ ಕಾರ್ಯಕ್ರಮವನ್ನು ಪಕ್ಷಾತೀತ ವಾಗಿ ಆಯೋಜಿಸಿ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲು ನಿರ್ಧರಿಸಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಮಲೆನಾಡಿನ ಜ್ವಲಂತ ಸಮಸ್ಯೆ ಪರಿಹಾರಕ್ಕೆ ಒಗ್ಗಟ್ಟಾಗಿ ಮುಖ್ಯಮಂತ್ರಿಗೆ ಮನವರಿಕೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಕಸ್ತೂರಿ ರಂಗನ್ ವರದಿ ಜಾರಿ ಸಮಸ್ಯೆ ಹಾಗೂ ಮಲೆನಾಡಿನ ಸಮಸ್ಯೆಗಳ ಕುರಿತು ಅಧ್ಯಯನಕ್ಕಾಗಿ ಸೆ.19ರಂದು ಬಾಳೆಹೊನ್ನೂರಿಗೆ ನಿಗದಿಗೊಂಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭೇಟಿ ಕಾರ್ಯಕ್ರಮವನ್ನು ಪಕ್ಷಾತೀತ ವಾಗಿ ಆಯೋಜಿಸಿ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲು ನಿರ್ಧರಿಸಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಪಟ್ಟಣದ ನಾರಾಯಣಗುರು ಸಮುದಾಯ ಭವನದಲ್ಲಿ ಭಾನುವಾರಜಿಲ್ಲೆಯ ಕಾಂಗ್ರೆಸ್ ಮುಖಂಡರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮಲೆನಾಡಿಗೆ ಮರಣ ಶಾಸನವಾದ ಕಸ್ತೂರಿ ರಂಗನ್ ವರದಿ ಜಾರಿಗೆ ಈಗಾಗಲೇ ಕೇಂದ್ರ ಸರ್ಕಾರ ೬ ಕರಡು ಅಧಿಸೂಚನೆ ಹೊರಡಿಸಿ ಅವುಗಳನ್ನೆಲ್ಲಾ ರಾಜ್ಯ ಸರ್ಕಾರ ತಿರಸ್ಕಾರ ಮಾಡಿದೆ. ಇದೀಗ 7ನೇ ಕರಡು ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಪ್ರಸ್ತುತ ಅದರ ತಿರಸ್ಕಾರಕ್ಕೆ ಸರ್ಕಾರಕ್ಕೆ ವರದಿ ಬಾಧ್ಯಸ್ಥ ಜಿಲ್ಲೆಗಳ ಶಾಸಕರು ಮನವಿ ಮಾಡಿದ್ದಾರೆ.

ವರದಿ ಜಾರಿಯ ಸಾಧಕ-ಬಾಧಕಗಳನ್ನು ಮುಕ್ತವಾಗಿ ಜನರೊಂದಿಗೆ ಚರ್ಚಿಸಲು ಖುದ್ದು ಮುಖ್ಯಮಂತ್ರಿಗಳೇ ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಕಾರ್ಯಕ್ರಮ ಕೇವಲ ನಮ್ಮ ಪಕ್ಷದ ಕಾರ್ಯಕರ್ತರೇ ಇರುವಂತಾಗಬಾರದು. ಈ ಹಿನ್ನೆಲೆಯಲ್ಲಿ ಪಕ್ಷದ ಆಂತರಿಕ ಸಭೆ ನಡೆಸಿದ್ದು, ಪಕ್ಷದ ಮುಖಂಡರು ಪಕ್ಷಾತೀತ ವಾಗಿ ವಿವಿಧ ಸಂಘಟನೆ ಒಗ್ಗೂಡಿಸಿ ಮುಖ್ಯಮಂತ್ರಿಗಳ ಸಭೆ ನಡೆಸಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

19ಕ್ಕೆ ಸಮಾಲೋಚನಾ ಸಭೆ: ಸೆ.19ರಂದು ಬಾಳೆಹೊನ್ನೂರಿನ ಕಲಾರಂಗ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಗಳ ಸಮಾಲೋಚನಾ ಸಭೆ ನಡೆಯಲಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಿಂದಲೂ 10 ಸಾವಿರಕ್ಕೂ ಅಧಿಕ ಜನರನ್ನು ಸೇರಿಸಬೇಕು ಎಂಬ ನಿರೀಕ್ಷೆಯಿದೆ.

ಈ ಬಗ್ಗೆ ಜಿಲ್ಲೆಯ ಎಲ್ಲಾ ಹೋಬಳಿಗಳಲ್ಲೂ ವಿವಿಧ ಪಕ್ಷಗಳ ಮುಖಂಡರು, ಬೆಳೆಗಾರ ಸಂಘಟನೆಗಳು, ವಿವಿಧ ಪಕ್ಷಗಳ ಮುಖಂಡರು, ಸಾರ್ವಜನಿಕರನ್ನು ಒಗ್ಗೂಡಿಸಿ ಸಭೆ ನಡೆಸಿ ಭಾಗವಹಿಸುವಂತೆ ಕೋರಲಾಗಿದೆ. ಪ್ರಮುಖವಾಗಿ ಮುಖ್ಯ ಮಂತ್ರಿಗಳ ಬಳಿ ಕಸ್ತೂರಿ ರಂಗನ್ ವರದಿ ತಿರಸ್ಕಾರ, ಮಲೆನಾಡಿನಲ್ಲಿ ಮಾನವ-ಕಾಡುಪ್ರಾಣಿ ಸಂಘರ್ಷ, ಪ್ರಸ್ತುತ ವರ್ಷದ ಬರ ಸಮಸ್ಯೆ, ಅಡಿಕೆ ಬೆಳೆಗಾರರ ಸಮಸ್ಯೆ, ಅರಣ್ಯ-ಕಂದಾಯ ಭೂಮಿ ಸಮಸ್ಯೆ, ಹಕ್ಕುಪತ್ರ ವಿತರಣೆ, ಫಾರಂ ನಂ.50, 53, 94 ಸಿ, ಒತ್ತುವರಿ ಸಮಸ್ಯೆ, ಒತ್ತುವರಿ ಭೂಮಿ ಲೀಸ್‌ಗೆ ನೀಡುವ ವಿಚಾರ ಮುಂತಾದವನ್ನು ಪ್ರಸ್ತಾಪಿಸಲಾಗುವುದು.

ಭದ್ರಾ ಕಾಡಾ ನಿಗಮ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ವಿಧಾನ ಪರಿಷತ್ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ಶಾಸಕ ಎಚ್.ಡಿ.ತಮ್ಮಯ್ಯ, ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಮಂಜೇಗೌಡ, ರಾಜ್ಯ ಕಿಸಾನ್ ಸೆಲ್ ಅಧ್ಯಕ್ಷ ಸಚಿನ್ ಮೀಗಾ, ಎಐಸಿಸಿ ರಾಜ್ಯ ವಕ್ತಾರ ಬಿ.ಎಂ.ಸಂದೀಪ್, ಪ್ರಮುಖರಾದ ಬಿ.ಸಿ.ಗೀತಾ, ಡಿ.ಎಲ್.ವಿಜಯಕುಮಾರ್, ಮಹಮ್ಮದ್ ಹನೀಫ್, ಗೇರುಬೈಲು ನಟರಾಜ್, ಕುಕ್ಕುಡಿಗೆ ರವೀಂದ್ರ, ರಮೇಶ್ ಭಟ್, ಓಣಿತೋಟ ರತ್ನಾಕರ್, ಚಂದ್ರಮ್ಮ, ಹಿರಿಯಣ್ಣ, ಎಚ್.ಎಂ.ಸತೀಶ್, ಎಂ.ಎಸ್.ಅರುಣೇಶ್, ಎಂ.ಎಸ್.ಜಯಪ್ರಕಾಶ್, ಕೌಶಿಕ್ ಪಟೇಲ್, ಬಿ.ಕೆ.ಮಧುಸೂದನ್, ಆಶಾ ಮತ್ತಿತರರು ಹಾಜರಿದ್ದರು.೧೩ಬಿಹೆಚ್‌ಆರ್ ೫:

ಬಾಳೆಹೊನ್ನೂರಿನಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರುಗಳ ಆಂತರಿಕ ಸಭೆಯಲ್ಲಿ ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಮಂಜೇಗೌಡ, ಶಾಸಕ ಎಚ್.ಡಿ.ತಮ್ಮಯ್ಯ, ಎಐಸಿಸಿ ವಕ್ತಾರ ಸಂದೀಪ್ ಅವರನ್ನು ಶಾಸಕ ಟಿ.ಡಿ.ರಾಜೇಗೌಡ ಗೌರವಿಸಿದರು.