ಹುಬ್ಬಳ್ಳಿ:
ವಿಎಕೆ ಫೌಂಡೇಶನ್ ಅಧ್ಯಕ್ಷ ವೆಂಕಟೇಶ ಕಾಟವೆ ಜನ್ಮದಿನದ ಅಂಗವಾಗಿ ಜು. 29ರಂದು ಬೃಹತ್ ಆರೋಗ್ಯ ತಪಾಸಣೆ, ರಕ್ತದಾನ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಎಕೆ ಫೌಂಡೇಶನ್, ಕೆಎಲ್ಇ ಆಸ್ಪತ್ರೆ ಹಾಗೂ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಸಹಯೋಗದಲ್ಲಿ ದಾಜಿಬಾನ್ ಪೇಟೆಯ ದುರ್ಗಾದೇವಿ ಕಲ್ಯಾಣ ಮಂಟಪದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರ, ಸ್ವಾತಂತ್ರ್ಯ ಹೋರಾಟಗಾರರು, ವೀರ ಯೋಧರು, ಪದ್ಮಶ್ರೀ ಪುರಸ್ಕೃತರು, ಅಥ್ಲೆಟಿಕ್ ವಿಜೇತ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮಗಳು ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ನಡೆಯಲಿವೆ ಎಂದರು.
ವಿಎಕೆ ಫೌಂಡೇಶನ್ ಅಧ್ಯಕ್ಷ ವೆಂಕಟೇಶ ಕಾಟವೆ ಮಾತನಾಡಿ, ಕಾರ್ಯಕ್ರಮದ ಸಾನ್ನಿಧ್ಯವನ್ನು ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀ, ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶಿವಯೋಗೀಶ್ವರ ಶ್ರೀ ವಹಿಸುವರು. ಅಂದು ಬೆಳಗ್ಗೆ 11ಕ್ಕೆ ವೇದಿಕೆ ಕಾರ್ಯಕ್ರಮ ಜರುಗಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ರಾಜ್ಯಸಭಾ ಸದಸ್ಯರಾದ ನಾರಾಯಣಸಾ ಭಾಂಡಗೆ, ಮಾ. ನಾಗರಾಜ, ವಿಪ ಸದಸ್ಯರಾದ ಪ್ರದೀಪ ಶೆಟ್ಟರ್, ಲಿಂಗರಾಜ ಪಾಟೀಲ, ಕೆಎಲ್ಇ ಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ಗೋವಿಂದ ಜೋಶಿ, ಮೇಯರ್ ದುರ್ಗಮ್ಮ ಬಿಜವಾಡ, ಎಸ್ಎಸ್ಕೆ ಸಮಾಜದ ರಾಜ್ಯಾಧ್ಯಕ್ಷ ಶಶಿಕುಮಾರ ಮೆಹರವಾಡೆ, ಹು-ಧಾ ಎಸ್ಎಸ್ಕೆ ಸಮಾಜ ಕೇಂದ್ರ ಪಂಚ ಸಮಿತಿ ಅಧ್ಯಕ್ಷ ಸತೀಶ ಮೆಹರವಾಡೆ ಉಪಸ್ಥಿತರಿರುವರು. ಮಾಜಿ ಶಾಸಕ ಅಶೋಕ ಕಾಟವೆ ಅಧ್ಯಕ್ಷತೆ ವಹಿಸುವರು ಎಂದರು.ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಲು ಈಗಾಗಲೇ 100ಕ್ಕೂ ಹೆಚ್ಚು ಜನ ಹೆಸರು ನೋಂದಾಯಿಸಿದ್ದಾರೆ. ಆರೋಗ್ಯ ಶಿಬಿರದಲ್ಲಿ ಇಸಿಜಿ, ಸಕ್ಕರೆ ಕಾಯಿಲೆ, ರಕ್ತ ತಪಾಸಣೆ, ಬಿಪಿ ತಪಾಸಣೆ, ಕಿವಿ, ಮೂಗು ಮತ್ತು ಗಂಟಲು ತಪಾಸಣೆ, ಕಣ್ಣಿನ ತಪಾಸಣೆ, ಎಲುಬು, ಕೀಲು ತಪಾಸಣೆ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಪೈಲ್ಸ್, ಹರ್ನಿಯಾ, ಅಪೆಂಡಿಕ್ಸ್, ಟ್ಯೂಬೆಕ್ಟಮಿ ತಪಾಸಣೆ ಮಾಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಶಿಬಿರದ ಮಾಹಿತಿಯುಳ್ಳ ಪ್ರತಿ ಬಿಡುಗಡೆಗೊಳಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಕೆಎಲ್ಇ ಆಸ್ಪತ್ರೆ ಮಾರುಕಟ್ಟೆ ಅಧಿಕಾರಿ ರವಿ ಕುರಹಟ್ಟಿ, ಭಾಸ್ಕರ ಜಿತೂರಿ, ಸಚಿನ್ ಕಾಟವೆ ಸೇರಿದಂತೆ ಹಲವರಿದ್ದರು.