ವಿದ್ವಾಂಸ, ಕಲಾವಿದ ದಿ. ಮಹಾಬಲೇಶ್ವರ ಭಟ್ಟ ನೇರಲಮನೆ ಹಾಗೂ ಕಲಾವಿದ ದಿ. ಚಿದಂಬರ ಭಟ್ಟ ಸೂಳಗಾರ ಅವರ ಸಂಸ್ಮರಣೆ ಕಾರ್ಯಕ್ರಮ ಏ. ೪ರಂದು ಸೂಳಗಾರಿನಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಯಲ್ಲಾಪುರ ವಿದ್ವಾಂಸ, ಕಲಾವಿದ ದಿ. ಮಹಾಬಲೇಶ್ವರ ಭಟ್ಟ ನೇರಲಮನೆ ಹಾಗೂ ಕಲಾವಿದ ದಿ. ಚಿದಂಬರ ಭಟ್ಟ ಸೂಳಗಾರ ಅವರ ಸಂಸ್ಮರಣೆ ಕಾರ್ಯಕ್ರಮ ಏ. ೪ರಂದು ಸೂಳಗಾರಿನಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಜಿ.ಎಸ್. ಭಟ್ಟ ತಟ್ಟಿಗದ್ದೆ ಹೇಳಿದರು.ಪಟ್ಟಣದಲ್ಲಿ ಸೋಮವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಮಧ್ಯಾಹ್ನ ೩ಕ್ಕೆ ಕಾರ್ಯಕ್ರಮವನ್ನು ವೈದಿಕ ವೆಂಕಟ್ರಮಣ ಭಟ್ಟ ಗುರ್ತೆಗದ್ದೆ ಉದ್ಘಾಟಿಸಲಿದ್ದಾರೆ. ಸಂಜೆ ೪ಕ್ಕೆ ಶಿರಸಿಯ ಚಂದನ ಆಂಗ್ಲಮಾಧ್ಯಮ ಶಾಲೆ ನರೇಬೈಲ್ ಮಕ್ಕಳಿಂದ ಚಕ್ರವ್ಯೂಹ ತಾಳಮದ್ದಲೆ ನಡೆಯಲಿದೆ. ನಂತರ ವೈದಿಕರ ಕರ್ತವ್ಯಗಳ ಕುರಿತು ರಾಮಕೃಷ್ಣ ಭಟ್ಟ ಮಾಗೋಡ ಹಾಗೂ ಹವ್ಯಕರಲ್ಲಿರಬೇಕಾದ ಆಚಾರಗಳ ಕುರಿತಾಗಿ ಮಂಜುನಾಥ ಭಟ್ಟ ಭಟ್ರಕೇರಿ ಉಪನ್ಯಾಸ ನೀಡಲಿದ್ದಾರೆ. ಡಾ. ಶಂಕರ ಭಟ್ಟ ಬಾಲಿಗದ್ದೆ ಅಧ್ಯಕ್ಷತೆ ವಹಿಸುವರು. ಗಣೇಶ ಹೆಗಡೆ ನೆರ್ಲೆಮನೆ ಅವರಿಂದ ಸಂಗೀತ ಸಂಜೆ ನಡೆಯಲಿದೆ. ಅರ್ಪಿತಾ ಅಂಕೋಲಾ ಇವರಿಂದ ಯಕ್ಷನೃತ್ಯ, ವಿದುಷಿ ಸುಮಾ ಹೆಗಡೆ ತೊಂಡೆಕೆರೆ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ ಎಂದರು.ಅನಂತ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ಭಟ್ಟ ಸೂಳಗಾರ ಮಾತನಾಡಿ, ರಾತ್ರಿ ೮ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದಾರೆ. ಪ್ರಣವ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಥಳೀಯ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು. ಸಿರಿಕಲಾ ಬಳಗದ ಅಧ್ಯಕ್ಷ ರವೀಂದ್ರ ಭಟ್ಟ ಅಣಲಗಾರ ಮಾತನಾಡಿ, ಸಿರಿ ಕಲಾ ಬಳಗ, ದಿ ಮಹಾಬಲೇಶ್ವರ ಭಟ್ಟ, ದಿ. ಚಿದಂಬರ ಭಟ್ಟ ಸೂಳಗಾರ ಅಭಿಮಾನಿ ಬಳಗದಿಂದ ರಕ್ತರಾತ್ರಿ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದರು. ರಂಗದಲ್ಲಿ ರವೀಂದ್ರ ಭಟ್ಟ, ಜಿ.ಎಸ್. ಭಟ್ಟ, ನರಸಿಂಹ ಕುಂಕಿಮನೆ, ಶ್ರೀಧರ ಅಣಲಗಾರ, ನರಸಿಂಹ ಮೆಲಿನಕುಂಕಿ, ಸುಬ್ಬಣ್ಣ ಕಂಚಗಲ್, ಪ್ರಸನ್ನ ಭಟ್ಟ, ಮಾದೇವ ನಾಯ್ಕ, ಮಂಜುನಾಥ ನಾಯ್ಕ, ತಿಮ್ಮಣ್ಣ ಭಟ್ಟ ಸೂಳಗಾರ, ಗಂಗಾಧರ ಗುಮ್ಮಾನಿ, ನಾರಾಯಣ ಭಟ್ಟ ತೆಂಗಿನಜಡ್ಡಿ, ಸುಮಾ ಭಟ್ಟ, ಮೀನಾಕ್ಷಿ ಭಟ್ಟ, ಹೇಮಾ ಹೆಗಡೆ, ವಿ.ಟಿ. ಭಟ್ಟ ಕನಕನಹಳ್ಳಿ ಭಾಗವಹಿಸುತ್ತಾರೆ ಎಂದರು.ಸಂಘಟನೆಯ ಪ್ರಮುಖರಾದ ವಿ.ಟಿ. ಹೆಗಡೆ, ತಿಮ್ಮಣ್ಣ ಭಟ್ಟ, ಮಂಜುನಾಥ ನಾಯ್ಕ ಇದ್ದರು.