ಭಾರತವು ಕಚ್ಚಾ ತೈಲದ ಅವಶ್ಯಕತೆಗಳಲ್ಲಿ ಶೇ.88ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ. ಯುದ್ಧವು ವಿಶ್ವದ ಅತ್ಯಂತ ನಿರ್ಣಾಯಕ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾದ ಹಾರ್ಮುಝ್ ಜಲಮಾರ್ಗವನ್ನು ವಾರಗಳ ವರೆಗೆ ಅಸ್ತವ್ಯಸ್ತಗೊಳಿಸಿದೆ.

ಹುಬ್ಬಳ್ಳಿ:ಇರಾನ್-ಅಮೆರಿಕ ಯುದ್ಧ ಮತ್ತು ಜಾಗತಿಕ ತೈಲ ಬೆಲೆಗಳ ಏರಿಕೆಯಿಂದ ತೀವ್ರವಾಗಿ ಹೊಡೆತ ಬಿದ್ದಿದೆ. ಅಲ್ಲದೇ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಕೂಡ ತೀವ್ರವಾಗಿ ದುರ್ಬಲಗೊಂಡಿದೆ ಎಂದು ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ನಾವೆಲ್ಲರೂ ಎಚ್ಚೆತ್ತುಕೊಂಡು, ಉಳಿತಾಯ ಕ್ರಮ ಅನುಸರಿಸಬೇಕಿದೆ ಎಂದು ಹೇಳಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತವು ಕಚ್ಚಾ ತೈಲದ ಅವಶ್ಯಕತೆಗಳಲ್ಲಿ ಶೇ.88ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ. ಯುದ್ಧವು ವಿಶ್ವದ ಅತ್ಯಂತ ನಿರ್ಣಾಯಕ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾದ ಹಾರ್ಮುಝ್ ಜಲಮಾರ್ಗವನ್ನು ವಾರಗಳ ವರೆಗೆ ಅಸ್ತವ್ಯಸ್ತಗೊಳಿಸಿದೆ. ಇದು ದೀರ್ಘಕಾಲದ ಪೂರೈಕೆ ಕೊರತೆಯ ಭಯ ಹುಟ್ಟು ಹಾಕಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ಇತ್ತೀಚಿನ ಶಾಂತಿ ಪ್ರಸ್ತಾಪ ತಿರಸ್ಕರಿಸಿದ ನಂತರ, ಜಾಗತಿಕ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 105 ಡಾಲರ್‌ಗಿಂತ ಹೆಚ್ಚಾಗಿದೆ ಎಂದರು.

ಹಣದುಬ್ಬರ ಮತ್ತು ಇಂಧನ ಸುರಕ್ಷತೆಯ ಬಗ್ಗೆ ಕಳವಳ ಹೆಚ್ಚುತ್ತಿವೆ. ಹಾಗಾಗಿ ಆರ್ಥಿಕ ಪರಿಣಾಮವನ್ನು ನಿಭಾಯಿಸಲು ವೆಚ್ಚ ಉಳಿತಾಯ ಕ್ರಮಗಳನ್ನು ಜಾರಿಗೆ ತರುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕರೆ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.ಇಂಧನ ಬಳಕೆ ಕಡಿಮೆ ಮಾಡಲು ಮತ್ತು ವಿದೇಶಿ ವಿನಿಮಯ ಉಳಿಸಲು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಅಳವಡಿಸಿಕೊಂಡ ವಿಧಾನಗಳು ದೇಶವನ್ನು ಪುನರುಜ್ಜಿವನಗೊಳಿಸಲಿವೆ ಎಂಬ ನಂಬಿಕೆಯಿಂದ ಎಂದು ಪ್ರಧಾನಿ ಹೇಳಿದ್ದಾರೆ. ಕೋರೋನಾ ಸಮಯವು ಆರೋಗ್ಯದ ಮೇಲೆ ಹೊಡೆತ ನೀಡಿದ್ದರೆ, ಮಧ್ಯಪ್ರಾಚ್ಯಗಳ ಯುದ್ಧವು ಇಡೀ ಜಗತ್ತಿನ ಆರ್ಥಿಕತೆಯ ಮೇಲೆ ಹೊಡೆತ ಬಿದ್ದಿದೆ. ಭಾರತದ ದೂರಾಲೋಚನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಭಾರತಕ್ಕೆ ಇನ್ನೂ ಹೆಚ್ಚಿನ ತೊಂದರೆ ಆಗಿಲ್ಲವಾದರೂ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕಿದೆ ಎಂದರು.