ಸಾರಾಂಶ
ಕಾಲೇಜಿನ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡುವಂತಾಗಿದೆ. ಅಲ್ಲದೆ ಕಂಪೌಂಡ್ ಗೋಡೆ ಒಡೆದಿದ್ದರಿಂದ ರಕ್ಷಣೆ ಇಲ್ಲದಂತಾಗಿದೆ.
ಕನ್ನಡಪ್ರಭ ವಾರ್ತೆ ಬೀದರ್
ತಾಲೂಕಿನ ನೌಬಾದ ಗ್ರಾಮದ ಸರ್ವೇ ನಂ.18/2 ಮತ್ತು 18/3 ರಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೀದರ್ (ನೌಬಾದ) ಕಾಲೇಜಿನ ಇತಿಹಾಸ ವಿಭಾಗದ ಕಂಪೌಂಡ್ ಗೋಡೆಯನ್ನು ಕಾಲೇಜಿನ ಪಕ್ಕದ ಕೆಲ ಜಮೀನುದಾರರು ಒಡೆದು ಅತಿಕ್ರಮಣ ಪ್ರವೇಶ ಮಾಡಿ ಕಾಲೇಜಿನ ಆಸ್ತಿಗೆ ನಷ್ಟವನ್ನುಂಟು ಮಾಡಿರುತ್ತಾರೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಆರೋಪಿಸಿದೆ.ಈ ಕುರಿತು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಕಾಲೇಜಿನ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡುವಂತಾಗಿದೆ. ಅಲ್ಲದೆ ಕಂಪೌಂಡ್ ಗೋಡೆ ಒಡೆದಿದ್ದರಿಂದ ರಕ್ಷಣೆ ಇಲ್ಲದಂತಾಗಿದೆ. ತಾವುಗಳು ಈ ಬಗ್ಗೆ ಸದರಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕ ಕೋರಿದೆ.
ಒಂದು ವೇಳೆ ಗೋಡೆ ಒಡೆದವರ ಮೇಲೆ ಕ್ರಮ ಜರುಗಿಸಲು ವಿಳಂಬ ಮಾಡಿದ್ದೆಯಾದಲ್ಲಿ ಕಾಲೇಜಿನ ಎದುರುಗಡೆ ಬೀದರ್ - ಉದಗೀರ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಪವನ್ ಕುಂಬಾರ್, ಅಂಬರೀಶ ಬಿರಾದರ್, ಸುಜಾತ ಸಾವಿತ್ರಿ, ಪೂಜಾ ಹಾಗೂ ರಾಜೇಶ್ವರಿ ಸೇರಿ ಇನ್ನಿತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.