ಸಾರಾಂಶ
ಕುರುಬ ಸಮುದಾಯ ಪದಕೋಶವನ್ನು ರಚಿಸುವ ಅವಶ್ಯಕತೆ ಇದ್ದು, ಸಮುದಾಯದ ಚರಿತ್ರೆ ನಿರ್ಮಾಣ ಆಗಬೇಕಿದೆ.
ಹೊಸಪೇಟೆ: ಹಾಲುಮತ ಬರೀ ಜಾತಿಯಲ್ಲ, ಅದೊಂದು ಸಮುದಾಯ, ವಿಶಿಷ್ಟ ಸಂಸ್ಕೃತಿ, ವೈವಿಧ್ಯಮಯ ಆಚರಣೆ, ಸಂಪ್ರದಾಯಗಳನ್ನು ಹೊಂದಿರುವ ನಾಡಿನ ಸಾಂಸ್ಕೃತಿಕ ಪ್ರತೀಕ ಎಂದು ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ನಿಂಗರಾಜ ಉಳ್ಳಾಗಡ್ಡಿ ಹೇಳಿದರು.ಕನ್ನಡ ವಿಶ್ವವಿದ್ಯಾಲಯದ ಹಾಲುಮತ ಅಧ್ಯಯನ ಪೀಠ ವತಿಯಿಂದ ಹಾಲುಮತ 9ನೇ ಉಪನ್ಯಾಸ ಮಾಲೆಯ ಹಾಲುಮತ ಸಾಂಸ್ಕೃತಿಕ ಪದಕೋಶ: ಸ್ವರೂಪ ಮತ್ತು ಆಶಯ ಎಂಬ ಕುರಿತು ಉಪನ್ಯಾಸ ನೀಡಿದರು. ಹಾಲುಮತ ಸಮುದಾಯದವರು ಸದಾ ನಿಸರ್ಗದಲ್ಲಿದ್ದು, ಸಾಹಿತ್ಯ, ಸಂಸ್ಕೃತಿ, ಕಲೆ ಹಾಗೂ ಹಬ್ಬ ಆಚರಣೆಗಳಿಗೆ ತಮ್ಮದೇ ಕೊಡುಗೆ ನೀಡಿದ್ದು, ಇದು ಸಾಮಾಜಿಕ ಪ್ರಜ್ಞೆಗೆ ನಿದರ್ಶನಗಳಲ್ಲಿ ಒಂದು ಎನ್ನುವಂತೆ ಬೆಳೆದು ಬಂದಿದೆ ಎಂದು ತಿಳಿಸಿದರು.
ಹಾಲುಮತ ಅಧ್ಯಯನ ಪೀಠದ ಸಂಚಾಲಕ ಡಾ. ಎಫ್.ಟಿ. ಹಳ್ಳಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುರುಬ ಸಮುದಾಯ ಪದಕೋಶವನ್ನು ರಚಿಸುವ ಅವಶ್ಯಕತೆ ಇದ್ದು, ಸಮುದಾಯದ ಚರಿತ್ರೆ ನಿರ್ಮಾಣ ಆಗಬೇಕಿದೆ. ಈ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯ ಅನೇಕ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಆಡಳಿತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.ಕನ್ನಡ ವಿವಿಯ ಹಾಲುಮತ ಅಧ್ಯಯನ ಪೀಠದ ಸಂಚಾಲಕ ಡಾ. ಎಫ್.ಟಿ. ಹಳ್ಳಿಕೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.