ಸಾರಾಂಶ
ಧಾರವಾಡ:
ಸಂಡೂರು ತಾಲೂಕಿನಲ್ಲಿ ಎರಡು ಕಂಪನಿಗಳಿಗೆ ನೀಡಿರುವ ಗಣಿ ಗುತ್ತಿಗೆಯ ಪ್ರಕ್ರಿಯೆ 2016ರಿಂದಲೇ ನಡೆದಿದ್ದು, ಕೊನೆಯ ಹಂತದಲ್ಲಿ ಫೈಲ್ ಕ್ಲಿಯರೆನ್ಸ್ ಮಾತ್ರ ತಮ್ಮ ಬಳಿ ಬಂದಿತ್ತು ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.ಗಣಿ ಗುತ್ತಿಗೆ ನೀಡಿರುವ ಸಚಿವ ಕುಮಾರಸ್ವಾಮಿ ವಿರುದ್ಧ ಮಂಗಳವಾರವಷ್ಟೇ ಸಮಾಜ ಪರಿವರ್ತನ ಸಮುದಾಯದ ಎಸ್.ಆರ್. ಹಿರೇಮಠ ಆರೋಪಿಸಿದ್ದು ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಗಣಿ ಗುತ್ತಿಗೆ ನೀಡುವ ಕುರಿತು 2016ರಿಂದಲೇ ಪ್ರಸ್ತಾವನೆ ಇತ್ತು. ಈಗ ನನ್ನಿಂದಾಗಿ ಗುತ್ತಿಗೆ ನೀಡುವ ಕಾರ್ಯವಾಗಿಲ್ಲ. ಸಂಡೂರು ಪ್ರದೇಶದಲ್ಲಿ ಗಣಿಗಾರಿಕೆಗೆ ಒಪ್ಪಿಗೆಯ ಪ್ರಸ್ತಾವನೆ ರಾಜ್ಯದಿಂದ ಹೋಗಿತ್ತು. 2017ರಲ್ಲಿ ಕೇಂದ್ರ ಸರ್ಕಾರ ಹಾಗೂ ಅರಣ್ಯ ಇಲಾಖೆ ಒಪ್ಪಿಗೆ ಕೊಟ್ಟಿವೆ. 2016ರಿಂದ ಪ್ರಾರಂಭವಾಗಿ ಸಹಿ ಹಂತಕ್ಕೆ ಮಾತ್ರ ನನ್ನ ಬಳಿ ಫೈಲ್ ಬಂದಿತ್ತು. ಎಸ್.ಆರ್. ಹಿರೇಮಠ ಅವರು ನೇರವಾಗಿ ಬಂದು ತಮ್ಮನ್ನು ಭೇಟಿಯಾದರೆ ಅವರೊಂದಿಗೆ ಚರ್ಚೆ ಮಾಡುತ್ತೇನೆ. ಈ ವಿಷಯದಲ್ಲಿ ನಾನು ಮುಕ್ತನಾಗಿದ್ದೇನೆ. ನ್ಯಾಯಾಲಯದ ಸಮಸ್ಯೆಗಳು ಮುಗಿದಿದ್ದರಿಂದಲೇ ನಾನು ಸಹಿ ಮಾಡಿದ್ದು, ಅಲ್ಲಿ ಅದಿರು ಉತ್ಪಾದನೆಗೆ ಮಾತ್ರ ಒಪ್ಪಿಗೆ ನೀಡಲಾಗಿದೆ. ಇದು ಹೊಸದಾದ ಗಣಿಗಾರಿಕೆ ಅನುಮತಿ ಅಲ್ಲ. ಹಿರೇಮಠ ಅವರಿಗೆ ಈ ವಿಷಯದಲ್ಲಿ ಗೊಂದಲಗಳಿದ್ದರೆ ತಮ್ಮನ್ನು ಭೇಟಿಯಾಗಲಿ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.