ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೆ ಸಾಮಾಜಿಕ ನ್ಯಾಯದ ಬಗ್ಗೆ ಸ್ಪಷ್ಟತೆ, ಖಚಿತತೆ ಸತೀಶ್ ಜಾರಕಿಹೊಳಿಗೆ ಇದೆ. ಈ ಕಾರಣದಿಂದಲೇ ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಅವರು ಸ್ಪಷ್ಟವಾಗಿ ಕಾಣುತ್ತಾರೆ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಶ್ಲಾಘಿಸಿದರು.

ಗುರುವಾರ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಬೆಂಗಳೂರು ಪ್ರೆಸ್‌ಕ್ಲಬ್‌ ವರ್ಷದ ವ್ಯಕ್ತಿ ಪ್ರಶಸ್ತಿ 2026 ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾರಕಿಹೊಳಿಯವರ ಮೌನದ ಆಳದಲ್ಲಿ ರಭಸ ಇದೆ. ಆ ರಭಸ ಅವರ ಕೆಲಸದಲ್ಲಿ ಕಾಣುತ್ತದೆ. ಜಾರಕಿಹೊಳಿ ಬದಲು ಬೇರೆ ಯಾರಾದರೂ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದಿದ್ದರೆ ಇಷ್ಟೊತ್ತಿಗೆ ಹೈರಾಣಾಗಿ ಬಿಡುತ್ತಿದ್ದರು. ಹಿಂದಿನ ಸರ್ಕಾರ ಮಾಡಿಟ್ಟು ಹೋಗಿರುವ ಅನಾಹುತ, ಆರ್ಥಿಕ ಹೊರೆಯ ನಂತರ ಸಮತೋಲನದಿಂದ ಅವರು ಖಾತೆ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಬಹಳ ದೊಡ್ಡ ಉದ್ಯಮಿಯಾಗಿ ಸತೀಶ್‌ ಅವರು ಸಕ್ಸಸ್ ಆಗಿದ್ದರೂ, ಉದ್ಯಮ ಮತ್ತು ರಾಜಕಾರಣವನ್ನು ಪರಸ್ಪರ ಬೆರೆಸದೆ ಸ್ಪಷ್ಟ ಅಂತರ ಕಾಯ್ದುಕೊಳ್ಳುವಲ್ಲೂ ಯಶಸ್ವಿ ಆಗಿದ್ದಾರೆ. ಯಾವತ್ತು ಈಸೀ ಛೇರ್‌ ಪಾಲಿಟಿಕ್ಸ್‌ಗೆ ಒರಗಿಕೊಳ್ಳದ ಸತೀಶ್ ಜಾರಕಿಹೊಳಿ ಅವರು ಬಹಳ ಕಷ್ಟವಾದ ಹಾದಿಯನ್ನೇ ಆರಿಸಿಕೊಂಡು ಯಶಸ್ಸು ಪಡೆದವರು ಎಂದರು.


ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸತೀಶ್‌ ಜಾರಕಿಹೊಳಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ 25 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಈ ವೇಳೆ ಶೋಷಿತರಿಗೆ ಸಾಮಾಜಿಕ ನ್ಯಾಯ ಕೊಡುವ ಕೆಲಸ ಮಾಡಿದ್ದೇನೆ. ಲೋಕೋಪಯೋಗಿ ಇಲಾಖೆ ನಿಭಾಯಿಸುವುದು ಕಷ್ಟ. ಆದರೆ, ಇಲಾಖೆಯ ಸಚಿವನಾಗಿ ಒಳ್ಳೆಯ ಕಾರ್ಯ ಮಾಡಿರುವ ತೃಪ್ತಿ ನನಗೆ ಇದೆ ಎಂದರು.

ಸಮಾರಂಭದಲ್ಲಿ ಮಾಜಿ ಅಡ್ವೊಕ್ವೇಟ್‌ ಜನರಲ್‌ ರವಿವರ್ಮ ಕುಮಾರ್‌ ಅವರು, ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ‘ಪ್ರೆಸ್‌ಕ್ಲಬ್‌ ವರ್ಷದ ವ್ಯಕ್ತಿ’ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್, ಪ್ಲೆಸ್‌ಕ್ಲಬ್ ಅಧ್ಯಕ್ಷ ಶ್ರೀಧರ್ ಸೇರಿ ಇತರರು ಇದ್ದರು.