ಸಚಿವ ಎಂ.ಬಿ. ಪಾಟೀಲ ನಾಲ್ಕನೇ ಟಿಪ್ಪು ಸುಲ್ತಾನ್

| Published : Dec 26 2023, 01:30 AM IST / Updated: Dec 26 2023, 01:31 AM IST

ಸಚಿವ ಎಂ.ಬಿ. ಪಾಟೀಲ ನಾಲ್ಕನೇ ಟಿಪ್ಪು ಸುಲ್ತಾನ್
Share this Article
  • FB
  • TW
  • Linkdin
  • Email

ಸಾರಾಂಶ

ಯಾವ ರಾಜ್ಯದಲ್ಲೂ ಇಲ್ಲದ ಹಿಜಾಬ್ ವಿಷಯ ನಮ್ಮಲ್ಲಿ ಮಾತ್ರ ಏಕೆ? ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಚಿವ ಎಂ.ಬಿ.ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಸಚಿವ ಎಂ.ಬಿ.ಪಾಟೀಲ ನಾಲ್ಕನೇ ಟಿಪ್ಪು ಸುಲ್ತಾನ್ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಮೂರನೇ ಟಿಪ್ಪು ಎಂಬ ಸಚಿವ ಎಂ.ಬಿ.ಪಾಟೀಲರ ಹೇಳಿಕೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.

ಹಿಜಾಬ್‌ ನಿಷೇಧ ಆದೇಶ ವಾಪಸ್ ಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇದೇ ರೀತಿ ಸಮವಸ್ತ್ರ ಇರಬೇಕು ಎಂದು ಈ ಹಿಂದೆ ಬಿಜೆಪಿ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ. ಇಡಿ ದೇಶದಲ್ಲಿ ಎಲ್ಲಿಯೂ ಈ ವಿಷಯ ಇಲ್ಲ, ಕರ್ನಾಟಕದಲ್ಲಿ ಯಾಕೆ ಎಂದು ಪ್ರಶ್ನಿಸಿದರು.

ಇದು ಇವರೇ ತೆಗೆದಿದ್ದು, ಈ ವಿಚಾರ ಕಾಂಗ್ರೆಸ್‌ಗೆ ಲೋಕಸಭೆಯಲ್ಲಿ ನಿಶ್ಚಿತವಾಗಿ ಮುಳುವಾಗಲಿದೆ. ಈ ರೀತಿ ಕೋಮು ಆಧಾರದ ಮೇಲೆ ಮಕ್ಕಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ದಲಿತರು, ಹಿಂದುಳಿದ ವರ್ಗದ ಶಾಲಾ ಮಕ್ಕಳಿಗೆ ಪ್ರವಾಸಕ್ಕೆ ಕಳಿಸುತ್ತೀರಿ. ಬಡವರು ಸೇರಿದಂತೆ ಎಲ್ಲಾ ಮಕ್ಕಳನ್ನೂ ಕಳಿಸಬೇಕು. ಆಗ ಮಕ್ಕಳಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ. ಪ್ರತ್ಯೇಕವಾಗಿ ಕಳಿಸುವುದರಿಂದ ಮಕ್ಕಳನ್ನು ಪ್ರತ್ಯೇಕ ಇಡುತ್ತಿದ್ದೀರಿ. ಎಲ್ಲಾ ಸಮುದಾಯದ ಮಕ್ಕಳು ಕೂಡಿ ಓದಬೇಕು, ಕೂಡಿ ಊಟ ಮಾಡಬೇಕು, ಕೂಡಿ ಆಟವಾಡಬೇಕು. ಅಂದಾಗ ಮಾತ್ರ ಸಮಾನತೆ ಬರುತ್ತದೆ. ಸುಮ್ಮಸುಮ್ಮನೆ ಸಮಾನತೆ ಬರಲ್ಲ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ‌ ಮೋದಿ ಅವರು 2024ರ ಚುನಾವಣೆ ಒಳಗೆ ಅಥವಾ ಚುನಾವಣೆ ಬಳಿಕ ಸಮಾನ ನಾಗರಿಕ ಸಂಹಿತೆ ಜಾರಿಗೆ ತರಬಹುದು. ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ತರಬೇಕು ಎಂದು ಸುಪ್ರೀಂ ಕೋರ್ಟ್ ಸಹ ಸಲಹೆ ಕೊಟ್ಟಿದೆ. ಎಲ್ಲರಿಗೂ ಅನುಕೂಲವಾಗುವಂತಹ ಸಮಾನ ನಾಗರಿಕ ಸಂಹಿತೆ ಭಾರತದಲ್ಲಿ ಕೆಲವೇ ದಿನಗಳಲ್ಲಿ ಜಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೈತರ ಕುರಿತು ಸಚಿವ ಶಿವಾನಂದ ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕರು, ಇದು ದುರ್ದೈವ. ಯಾಕಂದ್ರೆ ಹಿಂದೆ ಶಿವಾನಂದ ಪಾಟೀಲ ರೈತರ ಆತ್ಮಹತ್ಯೆ ಬಗ್ಗೆಯೂ ಮಾತನಾಡಿದ್ದರು. ಇಂದು ಬರಗಾಲವನ್ನು ರೈತರು ಬಯಸುತ್ತಾರೆ ಅಂದ್ರೆ ಇದನ್ನು ಯಾವ ರೀತಿ ಖಂಡನೆ ಮಾಡಬೇಕು ಗೊತ್ತಾಗುತ್ತಿಲ್ಲ. ಈ ರೀತಿ ಒಬ್ಬ ಜವಾಬ್ದಾರಿಯುತ ಮಂತ್ರಿಗಳು ರೈತರ ಬಗ್ಗೆ ಇಷ್ಟು ಹಗುರವಾಗಿ ಮಾತನಾಡಿರುವುದು ಸರಿ ಅಲ್ಲ ಎಂದು ದೂರಿದರು.

ದೇಶದಲ್ಲಿರುವಂತಹ ಅನ್ನದಾತ ಬರಗಾಲ ಬರಲಿ ಎಂದು ಬಯಸುವುದಿಲ್ಲ. ಅವರೊಬ್ಬರೆ ಬರಗಾಲ ಬರಲಿ ಎಂದು ಬಯಸುತ್ತಿದ್ದಾರೆ. ಬರಗಾಲ ಬರಲಿ ಎಂದು ಕೆಲವು ಮಂದಿ ಯಾಕೆ ಬಯಸುತ್ತಾರೆ ಎಂದರೆ ಕೆಲವರಿಗೆ ಬ್ಯಾಂಕಿನ ಸಾಲ ಮನ್ನಾ ಆಗುತ್ತದೆ. ಬರಗಾಲ ಬಂದರೆ ಸಾಲ ಮನ್ನಾ ಆದರೆ ಡಿಸಿಸಿ ಬ್ಯಾಂಕಿನವರಿಗೆ ಬಹಳ ಖುಷಿ ಎಂದು ಸಚಿವ ಶಿವಾನಂದ ಪಾಟೀಲರಿಗೆ ಟಾಂಗ್ ನೀಡಿದರು.