ಸಚಿವ ಸಂತೋಷ್ ಲಾಡ್ ಅವರ ಅಧ್ಯಕ್ಷತೆಯಲ್ಲಿ ಕಾರ್ಮಿಕ ಸಂಘಟನೆಗಳೊಂದಿಗೆ ಸಮಾಲೋಚನಾ ಸಭೆ

| N/A | Published : Feb 20 2025, 12:48 AM IST / Updated: Feb 20 2025, 01:17 PM IST

ಸಾರಾಂಶ

ಕಟ್ಟಡ ಕಾರ್ಮಿಕರು ಸೇರಿದಂತೆ ಇತರೆ ಕಾರ್ಮಿಕರಿಗೆ ಯಾವುದಾದರೂ ರೀತಿಯ ಅಪಘಾತ ಸಂಭವಿಸಿದಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಅದನ್ನು ಮರುಪಾವತಿಸುವ ಅವಕಾಶವಿರುತ್ತದೆ.

ಗದಗ:  ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಅಧ್ಯಕ್ಷತೆಯಲ್ಲಿ ಕಾರ್ಮಿಕ ಸಂಘಟನೆಗಳೊಂದಿಗೆ ಸಮಾಲೋಚನಾ ಸಭೆ ಮಂಗಳವಾರ ಜರುಗಿತು.

ಕಟ್ಟಡ ಕಾರ್ಮಿಕರು ಸೇರಿದಂತೆ ಇತರೆ ಕಾರ್ಮಿಕರಿಗೆ ಯಾವುದಾದರೂ ರೀತಿಯ ಅಪಘಾತ ಸಂಭವಿಸಿದಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಅದನ್ನು ಮರುಪಾವತಿಸುವ ಅವಕಾಶವಿರುತ್ತದೆ, ಈ ಅವಕಾಶವನ್ನು ತಾಲೂಕಿನಲ್ಲಿರುವ ಖಾಸಗಿ ಆಸ್ಪತ್ರೆಗಳಿಗೂ ಸಹ ನೀಡಬೇಕೆಂದು ಕಾರ್ಮಿಕರೋರ್ವರು ಸಭೆಯಲ್ಲಿ ಕೋರಿದರು.ಇದಕ್ಕೆ ಪ್ರತಿಕ್ರಿಸಿದ ಕಾರ್ಮಿಕ ಸಚಿವ ಸಂತೋಷ ಲಾಡ್, ಖಾಸಗಿ ಆಸ್ಪತ್ರೆಯನ್ನು ಗುರುತಿಸಲು ಅದರದೇ ಆದ ನಿಯಮಗಳಿವೆ. ಆ ನಿಯಮಗಳಿಗೆ ಒಳಪಡುವ ಯಾವುದಾದರೂ ಖಾಸಗಿ ಆಸ್ಪತ್ರೆ ಟೆಂಡರ್‌ನ ನಿಯಮಗಳು ಹಾಗೂ ಷರತ್ತುಗಳಿಗನುಸಾರ ಭಾಗವಹಿಸಿದರೆ ಮಾತ್ರ ಅವಕಾಶ ನೀಡಲಾಗುವುದೆಂದು ಉತ್ತರಿಸಿದರು.

ರೈತರು ಸಹ ಕಾರ್ಮಿಕರಾಗಿದ್ದು ಹೊಲದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಹಾವಿನಿಂದ ಅಥವಾ ಇನ್ನು ಯಾವುದೇ ಕೀಟದಿಂದ ಅಪಘಾತ ಸಂಭವಿಸಿದಾಗ ಅವರಿಗೂ ಸಹ ಕಟ್ಟಡ ಕಾರ್ಮಿಕರಿಗೆ ನೀಡುವ ಸೌಲಭ್ಯಗಳನ್ನು ನೀಡಬೇಕೆಂದು ರೈತರು ಸಚಿವರಿಗೆ ಕೇಳಿದಾಗ, ರೈತರು ಅಸಂಘಟಿತ ವಲಯಕ್ಕೆ ಸೇರಿದವರಾಗಿದ್ದು ಸೆಸ್ ಅನುದಾನವನ್ನು ಬಳಸಲು ಅವಕಾಶವಿಲ್ಲದ ಕಾರಣ ಸಂಘಟಿತ ವರ್ಗಕ್ಕೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಸಹ ಅಸಂಘಟಿತ ರೈತರಿಗೂ ಸಿಗುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಪ್ರತಿಕ್ರಿಯಿಸಿದರು. ಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಬೇಕೆಂದು ಕಾರ್ಮಿಕರು ಸಚಿವರಿಗೆ ಕೇಳಿಕೊಂಡಾಗ ಕಾರ್ಮಿಕ ಸಚಿವರು ಅಂತರಾಷ್ಟ್ರೀಯ ಮಟ್ಟದಲ್ಲಿ ನ ಕೌಶಲ್ಯ ತರಬೇತಿಗಳನ್ನು ಜಿಲ್ಲಾ ಮಟ್ಟದಲ್ಲಿ ಇನ್ನೂ ಕೆಲವೇ ದಿನಗಳಲ್ಲಿ ಪ್ರಾರಂಭಿಸಲು ಚರ್ಚಿಸಲಾಗುವುದು ಎಂದರು. ಕೆಲವೊಂದು ಕಾರ್ಮಿಕರ ಅಹವಾಲುಗಳನ್ನು ಸ್ವೀಕರಿಸಿ ಮತ್ತು ಸ್ಥಳದಲ್ಲಿಯೇ ಇತ್ಯರ್ಥಗೊಳಿಸಿದರು.ಈ ಸಂದರ್ಭದಲ್ಲಿ ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ, ಶಾಸಕ ಜಿ.ಎಸ್.ಪಾಟೀಲ, ಡಾ.ಚಂದ್ರು ಲಮಾಣಿ, ಎಸ್.ವಿ.ಸಂಕನೂರ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ ಸೇರಿದಂತೆ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಸಿಇಓ ಭಾರತಿ ಡಿ, ಕಾರ್ಮಿಕ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ, ಹೆಚ್ಚುವರಿ ಕಾರ್ಮಿಕ ಆಯುಕ್ತ ಡಾ. ಎಸ್.ಬಿ.ರವಿಕುಮಾರ್, ಎಸ್ಪಿ ಬಿ.ಎಸ್.ನೇಮಗೌಡ, ಹಾಗೂ ಇತರ ಅಧಿಕಾರಿಗಳು, ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.