ಸಾರಾಂಶ
ಯಮಕನಮರಡಿ ಸೇರಿದಂತೆ ಮತ್ತಿತರ ಮಾರ್ಗಗಳಲ್ಲಿ ಬಸ್ಗಳ ಸಂಚಾರ ಕೊರತೆಯಿದೆ ಎಂಬ ದೂರುಗಳಿವೆ. ಹಾಗಾಗಿ ಈ ಮಾರ್ಗಗಳಲ್ಲಿ ಸಂಬಂಧಿಸಿದ ಡಿಪೋದಿಂದ ಅಗತ್ಯ ಬಸ್ಗಳ ಓಡಾಟ ಆರಂಭಿಸಬೇಕು. ಫೆಬ್ರುವರಿಯಲ್ಲಿ ಪ್ರತಿ ಡಿಪೋಗೆ 10 ಹೊಸ ಬಸ್ಗಳು ಬರಲಿವೆ.
ಕನ್ನಡಪ್ರಭ ವಾರ್ತೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಪ್ರಯಾಣಿಕರಿಗೆ ಅಗತ್ಯ ಬಸ್ ಸೇವೆ ಒದಗಿಸಲು ಪ್ರಯತ್ನಿಸಲಾಗುತ್ತಿದ್ದು, ಫೆಬ್ರುವರಿ ತಿಂಗಳಿನಿಂದ ಇನ್ನಷ್ಟು ನೂತನ ಮಾರ್ಗಗಳಲ್ಲಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಪ್ರಯಾಣಿಕರು, ಶಾಲಾ - ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಗತ್ಯ ಬಸ್ ಸಂಚಾರ ಒದಗಿಸಲಾಗುವುದು. ಕೋಚರಿ, ರಾಜಕಟ್ಟಿ, ದಡ್ಡಿ, ಮಾರಣಹೋಳ, ಉಳ್ಳಾಗಡ್ಡಿ ಖಾನಾಪುರ, ಯಮಕನಮರಡಿ ಸೇರಿದಂತೆ ಮತ್ತಿತರ ಮಾರ್ಗಗಳಲ್ಲಿ ಬಸ್ಗಳ ಸಂಚಾರ ಕೊರತೆಯಿದೆ ಎಂಬ ದೂರುಗಳಿವೆ. ಹಾಗಾಗಿ ಈ ಮಾರ್ಗಗಳಲ್ಲಿ ಸಂಬಂಧಿಸಿದ ಡಿಪೋದಿಂದ ಅಗತ್ಯ ಬಸ್ಗಳ ಓಡಾಟ ಆರಂಭಿಸಬೇಕು. ಫೆಬ್ರುವರಿಯಲ್ಲಿ ಪ್ರತಿ ಡಿಪೋಗೆ 10 ಹೊಸ ಬಸ್ಗಳು ಬರಲಿವೆ ಎದು ಹೇಳಿದರು.ಜಲಜೀವನ ಮಿಷನ್ (ಜೆಜೆಎಂ) ಅಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಲ್ಲಿ ತಾಂತ್ರಿಕ ದೋಷವಿದ್ದು, ಬಹುತೇಕ ಕಡೆಗಳಲ್ಲಿ ಅವೈಜ್ಞಾನಿಕವಾಗಿ ಕೆಲಸ ಮಾಡಲಾಗಿದೆ ಎಂಬ ಗಂಭೀರ ದೂರುಗಳು ಕೇಳಿ ಬಂದಿವೆ. ಈ ನಿಟ್ಟಿನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಸಂಬಂಧಿಸಿದ ಗುತ್ತಿಗೆದಾರರಿಂದ ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಮಾಡಿಸಬೇಕು ಎಂದು ಅವರು ಸೂಚಿಸಿದರು.ತಾಲೂಕಿನ ವಿವಿಧ ಗ್ರಾಮಗಳ ಜನರ ಅಹವಾಲು, ಕುಂದುಕೊರತೆ ಆಲಿಸಿದ ಸಚಿವರು, ಕೂಡಲೇ ಅವುಗಳನ್ನು ಪರಿಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರೂ ಆದ ತಾಪಂ ಆಡಳಿತಾಧಿಕಾರಿ ಲಕ್ಷ್ಮಣ ಬಬಲಿ, ತಹಸೀಲ್ದಾರ ಮಂಜುಳಾ ನಾಯಕ, ತಾಪಂ ಇಒ ಪ್ರವೀಣ ಕಟ್ಟಿ, ಮ್ಯಾನೇಜರ ಅವಿನಾಶ ಹೊಳೆಪ್ಪಗೋಳ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡ ರವೀಂದ್ರ ಜಿಂಡ್ರಾಳಿ, ಇಲಿಯಾಸ ಇನಾಮದಾರ, ಕಿರಣ ರಜಪೂತ, ದಯಾನಂದ ಪಾಟೀಲ, ವೃಷಭ ಪಾಟೀಲ, ಬಸವರಾಜ ಕೋಳಿ, ಆನಂದ ತವಗಮಠ, ಅಕ್ಷಯ ವೀರಮುಖ ಮತ್ತಿತರರು ಇದ್ದರು.