ತುಂಗಭದ್ರಾ ಜಲಾಶಯದಲ್ಲಿಯೇ ಸಚಿವ ತಂಗಡಗಿ ಠಿಕಾಣಿ

| Published : Aug 13 2024, 12:45 AM IST

ಸಾರಾಂಶ

ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ ಗೇಟ್ ಮುರಿದಾಗಿನಿಂದ ಗೇಟನ್ನು ದುರಸ್ತಿಗೊಳಿಸುವ ಕಾರ್ಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಕಳೆದ ಎರಡು ದಿನಗಳಿಂದ ಹಗಲು ಇರುಳು ಜಲಾಶಯದಲ್ಲಿಯೇ ಠಿಕಾಣಿ ಹೂಡಿ, ಶ್ರಮಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ ಗೇಟ್ ಮುರಿದಾಗಿನಿಂದ ಗೇಟನ್ನು ದುರಸ್ತಿಗೊಳಿಸುವ ಕಾರ್ಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಕಳೆದ ಎರಡು ದಿನಗಳಿಂದ ಹಗಲು ಇರುಳು ಜಲಾಶಯದಲ್ಲಿಯೇ ಠಿಕಾಣಿ ಹೂಡಿ, ಶ್ರಮಿಸುತ್ತಿದ್ದಾರೆ.

ಘಟನೆಯ ವಿಷಯ ತಿಳಿಯುತ್ತಲೇ ಭಾನುವಾರ ನಸುಕಿನಲ್ಲಿ ಸ್ಥಳಕ್ಕೆ ಆಗಮಿಸಿದ ಸಚಿವ ಶಿವರಾಜ್ ತಂಗಡಗಿ ಕಳೆದ ಎರಡು ದಿನಗಳಿಂದ ಮುನಿರಾಬಾದ್ ವಸತಿ ಗೃಹದಲ್ಲಿ ತಂಗಿದ್ದಾರೆ.

ಘಟನೆಯ ಗಂಭೀರತೆ ಅರಿತಿರುವ ಸಚಿವರು ಹೇಗಾದರೂ ಮಾಡಿ ನೀರನ್ನು ಉಳಿಸುವ ಜೊತೆಗೆ ನಾಲ್ಕು ಜಿಲ್ಲೆಗಳ ರೈತರಿಗೆ ಎರಡನೇ ಬೆಳಗೆ ನೀರು ಒದಗಿಸಬೇಕೆಂದು ಸಚಿವ ತಂಗಡಿ ಅವರು ಶತಾಯ ಶ್ರಮಿಸುತ್ತಿದ್ದಾರೆ.

ಕಳೆದ ಎರಡು ದಿನಗಳಿಂದ ಸಚಿವರು ಸ್ಥಳದಲ್ಲಿಯೇ ಇದ್ದು, ಅಧಿಕಾರಿಗಳೊಂದಿಗೆ ನಿರಂತರವಾಗಿ ಸಭೆ ನಡೆಸಿ, ನೀರನ್ನು ಉಳಿಸಿ ಯಾವ ರೀತಿ ಗೇಟ್ ಅಳವಡಿಸಬೇಕು ಎಂಬ ಬಗ್ಗೆ ಇನ್ನಿಲ್ಲದ ಕಸರತ್ತನ್ನು ನಡೆಸುತ್ತಿದ್ದಾರೆ.

ಭಾನುವಾರ ಕೂಡ ತಡರಾತ್ರಿಯವರೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವ ಶಿವರಾಜ್ ತಂಗಡಗಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ, ಜಿಂದಾಲ್ ನಿಂದ ಪರಿಣಿತ ತಂಡ ಒಂದನ್ನು ಕರೆಯಿಸಿ ನೀರು ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ನಾರಾಯಣ ಇಂಡಸ್ಟ್ರಿಸ್ ಹಾಗೂ ಹಿಂದುಸ್ತಾನ್ ಸಂಸ್ಥೆಗಳು ಗೇಟ್ ಸಿದ್ಧಪಡಿಸಲಾಗುತ್ತಿರುವ ಕೊಪ್ಪಳದ ಹೊಸಳ್ಳಿ ಹಾಗೂ ಹೊಸಪೇಟೆಯ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಸಚಿವರು ಪರಿಶೀಲನೆ ನಡೆಸಿದ್ದು, ಕ್ಷಣ ಕ್ಷಣದ ಮಾಹಿತಿಯನ್ನು ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಗೆ ಒದಗಿಸುತ್ತಿದ್ದಾರೆ.

ಗ್ರಾಮಗಳಲ್ಲಿ ಡಂಗುರ:

ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಬಿಡುತ್ತಿರುವುದರಿಂದ ನದಿಯ ಪಾತ್ರದಲ್ಲಿನ ಗ್ರಾಮಗಳಲ್ಲಿ ಸೋಮವಾರ ಡಂಗುರ ಸಾರಲಾಗಿದೆ. ಜಲಾಶಯದಿಂದ ನೀರು ಬಿಡುವ ಪ್ರಮಾಣ ಯಾವುದೇ ಸಂದರ್ಭ ಹೆಚ್ಚಳ ಮಾಡಬೇಕಾಗಿರುವುದರಿಂದ ನದಿಪಾತ್ರದಲ್ಲಿನ ಗ್ರಾಮಸ್ಥರು, ಜಾನುವಾರುಗಳು ಸೇರಿದಂತೆ ಯಾರೂ ಸಹ ನದಿಯ ಬಳಿಗೆ ಹೋಗದಂತೆ, ಮೀನುಗಾರರು ನದಿಗೆ ಇಳಿಯದಂತೆ ಡಂಗುರ ಸಾರಲಾಗುತ್ತಿದೆ.