ಸಾರಾಂಶ
ಕೂಡ್ಲಿಗಿ: ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಪರ ಪ್ರಚಾರ ಸಭೆಗೆ ಆಗಮಿಸಿದ್ದ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್, ಜನಸಂದಣಿ ಇರುವುದನ್ನು ಅರಿತು ತಾಲೂಕಿನ ಶಿವಪುರ ಗ್ರಾಮದ ಹೊರವಲಯದಲ್ಲಿ ತಮ್ಮ ಕಾರಿನಿಂದ ಇಳಿದು, ಬುಲೆಟ್ ಬೈಕ್ನಲ್ಲಿ ಬಂದು ಗಮನ ಸೆಳೆದರು.
ಮುಖ್ಯಮಂತ್ರಿ ಆಗಮಿಸುವ ಹೆಲಿಪ್ಯಾಡ್ ನೇರವಾಗಿ ಬೈಕಿನಲ್ಲಿ ಬಂದರು. ಇನ್ನೊಂದು ಬೈಕಿನಲ್ಲಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಸಹ ಬಂದರು.ಬಿಜೆಪಿ ಕ್ಯಾನ್ಸರ್ ಇದ್ದಂಗೆ: ಬಿಜೆಪಿ ಕ್ಯಾನ್ಸರ್ ಇದ್ದಂತೆ. ಮೊದಲ ಹಂತದಲ್ಲೇ ಕಿತ್ತೊಗೆಯಬೇಕು. ಇಲ್ಲದಿದ್ದರೆ ಎರಡನೇ ಹಂತದಲ್ಲಿ ಕಿತ್ತೊಗೆಯಬೇಕು, ಮೂರನೇ ಹಂತಕ್ಕೆ ಬಿಟ್ಟುಕೊಂಡರೆ ಆ ಕಾಯಿಲೆ ವಾಸಿಯಾಗುವುದಿಲ್ಲ. ಈಗಲೇ ಕಿತ್ತೊಗೆಯಿರಿ. ಇದು ದೇಶಕ್ಕೆ ಅಪಾಯಕಾರಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದರು.ಪಟ್ಟಣದ ಮಹದೇವ ಮೈಲಾರ ಕ್ರೀಡಾಂಗಣದಲ್ಲಿ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಈ.ತುಕಾರಾಂ ಪರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಜನರ ಮಧ್ಯೆ ಹೋಗಿ ನಮ್ಮ ಸಾಧನೆ ಹೇಳಿ ಮತ ಕೇಳುತ್ತೇವೆ. ಬಿಜೆಪಿ ಸಾಧನೆ ಶೂನ್ಯ. ಹಿಂದೂ-ಮುಸ್ಲಿಂ ಎಂದು ಮತ ಕೇಳ್ತಾರೆ. 2023ರ ಚುನಾವಣೆಯಲ್ಲಿ ನೀಡಿದ ಗ್ಯಾರಂಟಿಗಳನ್ನು ಪೂರೈಸಿದ್ದೇವೆ. ಗ್ಯಾರಂಟಿ ಸಾಧ್ಯವಿಲ್ಲ ಎಂದು ಇವರು ಬೊಬ್ಬೆ ಹೊಡೆದರು. ಆದರೆ ಸಿದ್ದರಾಮಯ್ಯ ಎಲ್ಲ ಗ್ಯಾರಂಟಿ ನೀಡಿದ್ದಾರೆ. ವಸತಿ ಇಲಾಖೆಯಿಂದ ಕನಿಷ್ಠ ಒಂದು ಮನೆಯನ್ನೂ ಬಿಜೆಪಿ ನೀಡಿಲ್ಲ. ಕುಮಾರಸ್ವಾಮಿ, ಯಡಿಯೂರಪ್ಪ ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಕಳ್ಳರನ್ನು ಆಯ್ಕೆ ಮಾಡಿ ಕಳಿಸಬೇಡಿ ಎಂದು ಶ್ರೀರಾಮಲು ಹೆಸರು ತೆಗೆಯದೇ ಚಾಟಿ ಬೀಸಿದರು.