ಸಾರಾಂಶ
ಭಟ್ಕಳ: ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದ್ದು, ಅಲ್ಪಸಂಖ್ಯಾತರನ್ನು ಕೇವಲ ವೋಟಿಗಾಗಿ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.
ಮುರುಡೇಶ್ವರದ ಓಲಗ ಮಂಟಪದಲ್ಲಿ ಬೈಲೂರು, ಮಾವಳ್ಳಿ- ೧, ಮಾವಳ್ಳಿ- ೨, ಕಾಯ್ಕಿಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ಅಲ್ಪಸಂಖ್ಯಾತರು ಮೋದಿಜಿಯವರನ್ನು ವಿರೋಧಿಸುವುದಕ್ಕೆ ಕಾರಣವೇ ಇಲ್ಲ. ಪ್ರಧಾನಿ ಮೋದಿಯವರು ಯಾವುದೇ ಸೌಲಭ್ಯವನ್ನು ಘೋಷಣೆ ಮಾಡುವಾಗ ದೇಶದ ೧೪೦ ಕೋಟಿ ಜನತೆಯನ್ನು ಉದ್ದೇಶಿಸಿ ಘೋಷಣೆ ಮಾಡುತ್ತಾರೆ. ಅದರಲ್ಲಿ ಜಾತಿ, ಜನಾಂಗ, ಪಕ್ಷ, ಪಂಗಡಗಳನ್ನು ನೋಡಿಲ್ಲ. ಯೋಜನೆ ರೂಪಿಸುವಾಗ ಮತ್ತು ಅನುಷ್ಠಾನಗೊಳಿಸುವಾಗ ಅವರು ಎಂದೂ ಭೇದಭಾವ ಮಾಡುವುದಿಲ್ಲ ಎಂದರು.
ಮಾಜಿ ಸಚಿವ ಶಿವಾನಂದ ನಾಯ್ಕ ಮಾತನಾಡಿ, ದೇಶದೆಲ್ಲೆಡೆಯಲ್ಲಿ ಬಿಜೆಪಿ ಕುರಿತು ಉತ್ತಮವಾದ ವಾತಾವರಣವಿದ್ದು ರಾಜ್ಯದಲ್ಲಿಯೂ ೨೮ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದು ನಿಶ್ಚಿತವಾಗಿದೆ. ಕಳೆದ ಆರು ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಬಿಜೆಪಿಗೆ ಆಶೀರ್ವಾದ ಮಾಡಿದ್ದು, ಈ ಬಾರಿಯೂ ಕಾಗೇರಿ ಅವರನ್ನು ಹೆಚ್ಚು ಮತಗಳಿಂದ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸುನಿಲ್ ನಾಯ್ಕ, ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಹಾಗೂ ಲೋಕಸಭಾ ಚುನಾವಣೆ ಸಂಚಾಲಕ ಗೋವಿಂದ ನಾಯ್ಕ, ಕ್ಷೇತ್ರ ಉಸ್ತುವಾರಿ ಡಾ. ಜಿ.ಜಿ. ಹೆಗಡೆ, ಮಂಡಳ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಸುಬ್ರಾಯ ವಾಳ್ಕೆ, ಹಿರಿಯ ಮುಖಂಡ ಸುಬ್ರಾಯ ನಾಯ್ಕ ಕಾಯ್ಕಿಣಿ, ರಾಜ್ಯ ಬಿಜೆಪಿ ಹಿಂ.ವ. ಉಪಾಧ್ಯಕ್ಷ ಈಶ್ವರ ನಾಯ್ಕ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತಾರಾಮ, ಜೆಡಿಎಸ್. ಅಧ್ಯಕ್ಷ ಈಶ್ವರ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಧನ್ಯಕುಮಾರ್ ಜೈನ್ ಮುಂತಾದವರು ಉಪಸ್ಥಿತರಿದ್ದರು.