ಭ್ರೂಣಹತ್ಯೆ ತಡೆಗೆ ಕಾನೂನು ಬದಲಾವಣೆ ಚಿಂತನೆ: ಗುಂಡೂರಾವ್‌

| Published : Dec 03 2023, 01:00 AM IST

ಭ್ರೂಣಹತ್ಯೆ ತಡೆಗೆ ಕಾನೂನು ಬದಲಾವಣೆ ಚಿಂತನೆ: ಗುಂಡೂರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

ಭ್ರೂಣಹತ್ಯೆ ತಡೆಗೆ ಕಾನೂನು ಬದಲಾವಣೆಗೆ ಚಿಂತನೆ ನಡೆಸಲಾಗುವುದು ಎಂದು ಸಚಿವ ದಿನೇಶ್ಶ್‌ ಗುಂಡೂರಾವ್ವ್‌ ಹೇಳಿಕೆ

ಕನ್ನಡಪ್ರಭ ವಾರ್ತೆ ಮಂಗಳೂರು

ಭ್ರೂಣ ಹತ್ಯೆ ತಡೆಗೆ ಕಠಿಣ ಕಾನೂನು ಅಗತ್ಯವಿದ್ದು, ಈ ಬಗ್ಗೆ ಕಾನೂನಿನಲ್ಲಿ ಬದಲಾವಣೆ ಅಗತ್ಯವಿದೆಯೇ ಎಂಬ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.ಮಂಗಳೂರಿನಲ್ಲಿ ಶನಿವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ, ಮಂಡ್ಯದಲ್ಲಿ ಬೆಳಕಿಗೆ ಬಂದಿರುವ ಭ್ರೂಣ ಹತ್ಯೆ ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದರು.ಮಂಡ್ಯದಲ್ಲಿ ಭ್ರೂಣ ಹತ್ಯೆ ಸಂಬಂಧ ನಾನು ಎಲ್ಲ ಕಡೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದೇನೆ. ಸಾರ್ವಜನಿಕರು ಸೇರಿ ಹಲವರಿಂದ ಮಾಹಿತಿ ಪಡೆಯಲಾಗಿದೆ. ಅದರಂತೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಮುಖ್ಯಮಂತ್ರಿಗೆ ಮನವಿ ಮಾಡಿದ್ದೆ. ಈ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ಸಿಎಂ ಆದೇಶ ಮಾಡಿದ್ದಾರೆ ಎಂದು ಹೇಳಿದರು.ಡಾ. ಸತೀಶ್ ಆಯುಷ್ ಅಧಿಕಾರಿಯಾಗಿದ್ದು, ಅವರು ಯಾಕಾಗಿ ಆತ್ಮಹತ್ಯೆ ಮಾಡಿಕೊಂಡರು ಗೊತ್ತಿಲ್ಲ. ಇವರ ಮೇಲೆ ಸಾಕಷ್ಟು ಆರೋಪ ಇತ್ತು, ಮೈಸೂರಲ್ಲೂ ದೂರುಗಳಿದ್ದವು. ಈ ಪ್ರಕರಣಕ್ಕೂ ಆತ್ಮಹತ್ಯೆಗೂ ಸಂಬಂಧ ಇದೆಯೋ ಗೊತ್ತಿಲ್ಲ. ಹೀಗಾಗಿ ನಾನು ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದ ಗುಂಡೂರಾವ್‌, ಪ್ರಕರಣದಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ ಎನ್ನುವುದು ತನಿಖೆಯಲ್ಲಿ ಗೊತ್ತಾಗಬೇಕು, ಪೊಲೀಸರು ಸಮಗ್ರ ತನಿಖೆ ನಡೆಸಲಿದ್ದಾರೆ ಎಂದರು.ರಾಜ್ಯದಲ್ಲಿ ಸ್ಕ್ಯಾನಿಂಗ್ ಸೆಂಟರ್‌ಗಳು ಸೇರಿ ಹಲವು ಕಡೆ ಪರಿಶೀಲನೆ ಆಗಬೇಕಿದೆ. ಜತೆಗೆ ಗುಪ್ತಚರ ಮಾಹಿತಿ ಕಲೆ ಹಾಕಬೇಕಿದೆ. ಪ್ರಕರಣದಲ್ಲಿ ಯಾರಿದ್ದಾರೆ, ಯಾರು ಮಾಡ್ತಿದಾರೆ ಎಂಬ ಮಾಹಿತಿ ಕಲೆ ಹಾಕಬೇಕಿದೆ. ಪೊಲೀಸ್ ಇಲಾಖೆ ಜತೆಗೆ ಆರೋಗ್ಯ ಇಲಾಖೆ ಕೂಡ ಸಹಕಾರ ನೀಡಬೇಕಿದೆ. ಈ ನಿಟ್ಟಿನಲ್ಲಿ ತನಿಖೆಗೆ ಸಹಕಾರ ಕೊಟ್ಟು‌ ನಿಜಾಂಶ ತಿಳಿಯುವ ಕೆಲಸ ಆಗಲಿದೆ ಎಂದು ತಿಳಿಸಿದರು.ಹಿಂದಿನ ಸರ್ಕಾರದಿಂದ ಡಯಾಲಿಸಿಸ್‌ ಸಮಸ್ಯೆ: ಗುಂಡೂರಾವ್‌ರಾಜ್ಯದಲ್ಲಿ ಡಯಾಲಿಸಿಸ್ ವ್ಯವಸ್ಥೆ ನಾನು ಆರೋಗ್ಯ ಸಚಿವನಾಗುವ ಮೊದಲೇ ಗೊಂದಲದಲ್ಲಿತ್ತು. ಹಿಂದಿನ ಸರ್ಕಾರ ಇದರ ನಿರ್ವಹಣೆಯನ್ನು ಎರಡು ಏಜೆನ್ಸಿಗೆ ವಹಿಸಿತ್ತು, ಅದರಲ್ಲಿ ಒಂದು ಏಜೆನ್ಸಿ ಅರ್ಧದಲ್ಲೇ ಬಿಟ್ಟಿತ್ತು. ಏಜೆನ್ಸಿಯ ನಿರ್ವಹಣೆ ಸಮರ್ಪಕವಾಗಿರಲಿಲ್ಲ. ಸಿಬ್ಬಂದಿಗೆ ಸಂಬಳ ಸರಿಯಾಗಿ ಪಾವತಿಸುತ್ತಿರಲಿಲ್ಲ. ಇಎಸ್‌ಐ, ಪಿಎಫ್ ಕಟ್ಟಿರಲಿಲ್ಲ. ಇದೀಗ ರಾಜ್ಯ ಸರ್ಕಾರ ಇಎಸ್‌ಐ, ಪಿಎಫ್ ಕಟ್ಟಲು ವ್ಯವಸ್ಥೆ ಮಾಡುತ್ತಿದೆ. ಅದಕ್ಕೂ ಮೊದಲು ಆ ಏಜೆನ್ಸಿಯನ್ನು ಬ್ಲಾಕ್ ಲಿಸ್ಟ್ ಮಾಡುವ ಕೆಲಸ ಆಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.ರಾಜ್ಯದಲ್ಲಿ ನಾಲ್ಕು ವಿಭಾಗದಲ್ಲಿ ಹೊಸ ಏಜೆನ್ಸಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಕೆಟ್ಟು ಹೋಗಿರುವ ಡಯಾಲಿಸಿಸ್ ಯಂತ್ರಗಳನ್ನು ಬದಲಾಯಿಸುವ ಕಾರ್ಯವನ್ನು ಈಗಿರುವ ಏಜೆನ್ಸಿ ಮಾಡಬೇಕು ಅಥವಾ ಹೊಸ ಏಜೆನ್ಸಿ ಬಂದ ಬಳಿಕ ಮಾಡಬೇಕಷ್ಟೇ. ಯಾವುದೂ ಆಗದೇ ಇದ್ದಲ್ಲಿ ಸರ್ಕಾರವೇ ಯಂತ್ರಗಳನ್ನು ಖರೀದಿಸಿ ನಿರ್ವಹಣೆ ಮಾಡಲು ಚಿಂತಿಸಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದರು.ಡಯಾಲಿಸಸ್ ಸಿಬ್ಬಂದಿ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆ. ಅವರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ತೇವೆ ಎಂದು ದಿನೇಶ್ ಗುಂಡೂರಾವ್ ಭರವಸೆ ನೀಡಿದರು.