ಸಾರಾಂಶ
ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿಯೇ ಪರಿಶಿಷ್ಟರ 26,426 ಕೋಟಿ ರು.ಅನುದಾನವನ್ನು ದುರಪಯೋಗಪಡಿಸಿಕೊಂಡಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಚಿತ್ರದುರ್ಗ : ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿಯೇ ಪರಿಶಿಷ್ಟರ 26,426 ಕೋಟಿ ರು.ಅನುದಾನವನ್ನು ದುರಪಯೋಗಪಡಿಸಿಕೊಂಡಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟ ಎಸ್ಸಿಪಿ ಮತ್ತು ಟಿಎಸ್ಪಿ ಹಣ ಗ್ಯಾರಂಟಿ ಯೋಜನೆಗೆ ವರ್ಗಾವಣೆ ಮಾಡಿರುವ ಕ್ರಮ ಖಂಡಿಸಿ ಚಿತ್ರದುರ್ಗದಲ್ಲಿ ಬಿಜೆಪಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಇದು ಪರಿಶಿಷ್ಟ ಸಮುದಾಯಗಳ ಶಿಕ್ಷಣಕ್ಕೆ, ಮನೆ ನಿರ್ಮಾಣಕ್ಕೆ, ಕೃಷಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಬಳಸಬೇಕಾದ ಹಣವಾಗಿದ್ದು ಅದನ್ನು ಸಿದ್ದರಾಮಯ್ಯರವರು ಚುನಾವಣೆಗೆ ಬಳಸಿಕೊಂಡಿದ್ದಾರೆ ಆರೋಪಿಸಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಅನುದಾನ ನೀಡಿದ್ದರು, ಬಿಜೆಪಿ ಸರ್ಕಾರದಲ್ಲಿ ಕಳೆದ 10 ವರ್ಷದಲ್ಲಿ ರಾಜ್ಯಕ್ಕೆ ಎಷ್ಟು ಅನುದಾನ ಬಂದಿದೆ ಎಂಬುದರ ಬಗ್ಗೆ ಸಿಎಂ ಸಿದ್ದರಾಮಯ್ಯ ರವರು ಶ್ವೇತಾ ಪತ್ರ ಹೊರಡಿಸಲಿ ಎಂದೂ ಅವರು ಆಗ್ರಹಿಸಿದರು.
ಈ ಅನುದಾನದ ದುರುಪಯೋಗ ವಿಚಾರವಾಗಿ ಪ್ರತಿಭಟನೆಯನ್ನು ಮಾಡಿ, ಮನವಿಯನ್ನು ಸಲ್ಲಿಸಲಾಯಿತು ಆದರೆ ಸಿದ್ದರಾಮಯ್ಯ ನವರು ಯಾವುದಕ್ಕೂ ಕೊಡ ಬಗ್ಗುತ್ತಿಲ್ಲ. ಇದರ ವಿರುದ್ಧವಾಗಿ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡುವ ಮಾಡುವ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ. ಇಂದು 4 ಲಕ್ಷ ಕೋಟಿ ಬಜೆಟ್ ಮಾಡಿಸುತ್ತೇವೆ ಅಂತ ಸಿದ್ದರಾಮಯ್ಯನವರು ಹೇಳುತ್ತಾರೆ. ಈ ಬಜೆಟ್ನಲ್ಲಿ ಎಸ್ಸಿಪಿ, ಟಿಎಸ್ಪಿ ಯೋಜನೆಗೆ ಹಣವನ್ನು ಒದಗಿಸಬೇಕು ಹಾಗೆಯೇ ಈ ಹಿಂದೆ ಬಳಸಿಕೊಂಡಿರುವ 26,426 ಕೋಟಿ ರು. ಸಹ ವಾಪಸ್ ನೀಡಬೇಕೆಂದು ಆಗ್ರಹಿಸಿ ರಾಜ್ಯದಲ್ಲಿ ಸಿದ್ದರಾಮಯ್ಯರವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ಪೈಸೆ ಅಭಿವೃದ್ಧಿ ಕಾರ್ಯ ನಡೆದಿಲ್ಲ.
ಯಾವುದೇ ಕಾಮಗಾರಿಗಳು ಸಹ ನಡೆಯುತ್ತಿಲ್ಲ. ಗುತ್ತಿಗೆದಾರರು ಬಿಲ್ ಮರುಪಾವತಿ ಆಗುತ್ತಿಲ್ಲವೆಂದು ಆರೋಪಿಸಿ ರಾಜ್ಯಪಾಲರಿಗೆ ಮನವಿ ಪತ್ರವನ್ನು ಕೂಡ ಸಲ್ಲಿಸಿದ್ದಾರೆ. ಇದೊಂದು ಅಸಮರ್ಥ ಸರ್ಕಾರ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾನೂನು ಸರಿಯಾಗಿ ಪಾಲನೆ ಆಗುತ್ತಿಲ್ಲ ಎಂದು ಸಂಸದರು ಆರೋಪಿಸಿ 2018ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರವನ್ನು ಕಳೆದುಕೊಂಡಾಗ 30 ಸಾವಿರ ಕೋಟಿ ರು. ಯೋಜನೆಗಳಿಗೆ ಟೆಂಡರ್ ಕರೆದು ಬಿಟ್ಟು ಹೋಗಿದ್ದರ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ 56 ಜನ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಗುತ್ತಿಗೆದಾರರು ಬಿಲ್ ಪಾವತಿ ಆಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. 10 ಜನ ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಹಣ ನೀಡದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 33 ಜನ ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಮಾಡಿ ಮೈಕ್ರೋ ಫೈನಾನ್ಸ್ ನವರ ಕಿರುಕುಳಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ 700 ಬಾಣಂತಿಯರು ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾರೆ. 1,400 ನವಜಾತ ಶಿಶುಗಳು ಮೃತಪಟ್ಟಿವೆ. ರಾಜ್ಯದಲ್ಲಿ ಬೆಲೆ ಏರಿಕೆ, ವಿದ್ಯುತ್ ದರ ಏರಿಕೆ, ನೀರಿನ ದರ ಏರಿಕೆ, ಹಾಲಿನ ದರ ಏರಿಕೆ ಹಾಗೂ ದಿನನಿತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿವೆ. ರಾಜ್ಯ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರದ ವಿರುದ್ಧ ಇಂದು ಸಾಂಕೇತಿಕವಾಗಿ ಪ್ರತಿಭಟನೆಯನ್ನು ನಡೆಸಲಿದ್ದೇವೆ. ಇದಕ್ಕೆ ಸರ್ಕಾರ ಬಗ್ಗದೇ ಇದ್ದರೆ ಎಸ್ಸಿಪಿ, ಟಿಎಸ್ಪಿ ಯೋಜನೆಯ ಹಣವನ್ನು ವಾಪಸ್ ನೀಡದೇ ಇದ್ದರೆ ರಾಜ್ಯಾದ್ಯಂತ ಆಂದೋಲನವನ್ನು ನಡೆಸಲಿದ್ದೇವೆ ಎಂದು ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಬುಡಕಟ್ಟು ಜನಾಂಗ, ಅಲೆಮಾರಿ, ಅರೆ ಅಲೆಮಾರಿಗಳ ಅಭ್ಯುದಯಕ್ಕಾಗಿ ಮೀಸಲಿಟ್ಟಿರುವ ಹಣವನ್ನು ರಾಜ್ಯ ಸರ್ಕಾರ ಅನ್ಯ ಉದ್ದೇಶಕ್ಕಾಗಿ ಬಳಸುತ್ತಿರುವುದು ಅಕ್ಷಮ್ಯ ಅಪರಾಧ. ಹಾಗಾಗಿ ಈ ಬಾರಿಯ ಬಜೆಟ್ನಲ್ಲಿ ಎಸ್ಸಿಪಿ, ಟಿಎಸ್ಪಿ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸುವುದಿಲ್ಲವೆಂದು ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಅಂಬಿಕಾ ಹುಲಿನಾಯ್ಕರ್, ಮಾಜಿ ಶಾಸಕಸರಾದ ಎಸ್.ಕೆ.ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಖಂಜಾಚಿ ಮಾಧುರಿ ಗೀರಿಶ್, ರೈತ ಮೋರ್ಚಾದ ವೆಂಕಟೇಶ್ ಯಾದವ್, ಸೋಮುನಾಥ್, ಮೋಹನ್, ಯೋಗಿಶ್ ಸಹ್ಯಾದ್ರಿ, ಹನುಮಂತಪ್ಪ, ಎಸ್ಸಿ ಮೋರ್ಚಾ ಹನುಮಂತಪ್ಪ ಓಬಲೇಶ್, ಓಬಿಸಿ ಮೋರ್ಚಾದ ನರೇಂದ್ರ ರಂಗಪ್ಪ, ಎಸ್ಸಿ ಮೋರ್ಚಾ ಶಿವಣ್ಣ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ಬೇದ್ರೇ ನಾಗರಾಜ್, ಛಲವಾದಿ ತಿಪ್ಪೇಸ್ವಾಮಿ, ಜಯಪಾಲಯ್ಯ, ಕುಮಾರಸ್ವಾಮಿ, ರಾಮದಾಸ್, ಶಿವಣ್ಣ, ತಿಪ್ಪೇಸ್ವಾಮಿ, ರಘುಮೂರ್ತಿ, ಬಸಮ್ಮ, ಕಾಂಚನಾ, ಅಂಬಿಕಾ ಶಂಭೂ, ಲೋಕೇಶ್ ನಾಗರಾಜ್ ಸೇರಿ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಭಾಗವಹಿಸಿದ್ದರು.