ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಆಡಳಿತ ಪಕ್ಷದ ಸದಸ್ಯರು ಮಾತನಾಡಿದ ರೀತಿ, ನಡೆದುಕೊಂಡ ರೀತಿ ಅಕ್ಷಮ್ಯ ಅಪರಾಧ. ಪ್ರಚೋದನಾಕಾರಿ ವಾತಾವರಣ ಸೃಷ್ಟಿಸಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಮೇಲೆ ಮೂರು ಬಾರಿ ಹಲ್ಲೆಗೆ ಯತ್ನಿಸಲಾಗಿದೆ. ನಾವು ಪ್ರತಿಭಟನೆ ಮಾಡಿದಾಗ, ಪೊಲೀಸರು ಎಲ್ಲರನ್ನು ಜೈಲಿಗೆ ತಳ್ಳಿದರು. ರಾಜ್ಯ ಸರ್ಕಾರ ಪೊಲೀಸ್ ವ್ಯವಸ್ಥೆಯನ್ನು ನೇರವಾಗಿಯೇ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕೇಶವಪ್ರಸಾದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಲಾಟೆ ಬಳಿಕ ಪೊಲೀಸರು ಸಿ.ಟಿ.ರವಿ ಅವರನ್ನು ಖಾನಾಪುರ ಸ್ಟೇಷನ್ಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ದೂರು ನೀಡಿದರೆ ದೂರು ಸ್ವೀಕರಿಸಿಲ್ಲ. ರವಿ ಅವರ ತಲೆಗೆ ಗಾಯವಾಗಿ ರಕ್ತ ಸುರಿಯುತ್ತಿದ್ದರೂ ಪೊಲೀಸರು ಚಿಕಿತ್ಸೆ ಕೂಡಲೇ ಕೊಡಿಸಿಲ್ಲ. ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೊರಟವರು ಯಾವುದೋ ಒಂದು ಕಾನನದ ಮಧ್ಯೆ ಗಾಡಿ ನಿಲ್ಲಿಸಿದರು ಎಂದರು. ಆಗ ನಾವು ನಿಮಗೆ ಸೂಚನೆ ಇದ್ದರೆ ರಸ್ತೆ ಮಧ್ಯೆಯೇ ಎನಕೌಂಟರ್ ಮಾಡಿ ಎಂದು ಪೊಲೀಸರಿಗೆ ಹೇಳಿದ್ದೆವು. ರಾಜ್ಯ ಸರ್ಕಾರ ಯಾಕೆ ಹೀಗೆ ಮಾಡಿದೆ?, ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಯಾಕೆ ದಿಕ್ಕು ತಪ್ಪಿಸಿದರು? 1975ರ ಎಮರ್ಜೆನ್ಸಿಯನ್ನು ಪುನರಾವರ್ತನೆ ಮಾಡಲು ಸಿಎಂ, ಡಿಸಿಎಂ ಅವರ ಸರ್ಕಾರ ಹೊರಟಿದೆಯಾ ಎಂಬ ಇತ್ಯಾದಿ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಸಿ.ಟಿ.ರವಿ ಮೇಲೆ ನಡೆದಿರುವ ಘಟನೆ ಪೂರ್ವನಿಯೋಜಿತ. ಡಿಸಿಎಂ ಹೇಳಿದ್ದಾರೆ ಬೆಳಗಾವಿಯಿಂದ ಸಿಟಿ ರವಿ ಹೊರಬಂದಿದ್ದೇ ಪುಣ್ಯ. ಬೆಳಗಾವಿ ಲಕ್ಷ್ಮಿ ಹೆಬ್ಬಾಳ್ಕರ ಅವರ ರಿಪಬ್ಲಿಕ್ ನಾ?, ಕನಕಪುರ ಡಿಕೆಶಿ ಅವರ ರಿಪಬ್ಲಿಕ್ ನಾ?. ಯಾರು ಏನೇ ಮಾಡಿದರೂ ಕಾನೂನು ಚೌಕಟ್ಟಿನಲ್ಲಿ ಮಾಡಬೇಕು, ಅದನ್ನು ಆಡಳಿತ ಸರ್ಕಾರ ಅರಿಯಬೇಕು ಎಂದರು.ಡಾ.ಅಂಬೇಡ್ಕರ್ ನಡೆಸಿಕೊಂಡ ಬಗ್ಗೆ ಹೇಳಿದ್ದಾರೆ:
ಡಾ.ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ ಎಂಬುದರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಆರ್ಥಿಕ ತಜ್ಞರಾದ ಅಂಬೇಡ್ಕರ್ ಅವರ ಸಲಹೆಯನ್ನು ನೆಹರು ಅವರು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಅವರು ಇದ್ದಾಗ ಅವರನ್ನು ಮುಂಚೂಣಿಗೆ ಬಿಡಲಿಲ್ಲ, ಸತ್ತಮೇಲೆ ಅಂತ್ಯಕ್ರಿಯೆಗೆ ಜಾಗ ಕೊಟ್ಟಿಲ್ಲ. ಅದರ ಬಗ್ಗೆ ಮಾತನಾಡುವಾಗ ಯಾವುದೋ ಒಂದು ತುಣುಕನ್ನು ಬಳಸಿಕೊಂಡು ಕಾಂಗ್ರೆಸ್ನವರು ಗೃಹ ಸಚಿವರ ತೇಜೋವಧೆ ಮಾಡುವ ಕೆಲಸ ಮುಂದುವರಿಸಿದ್ದಾರೆ. ಅಮಿತ್ ಶಾ ಹೇಳಿಕೆಯನ್ನು ತಿರುಚುತ್ತಿರುವ ಘಟನೆಯನ್ನು ನಾವು ಖಂಡಿಸುತ್ತೇನೆ ಎಂದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮುಖಂಡರಾದ ವಿವೇಕಾನಂದ ಡಬ್ಬಿ, ಚಂದ್ರಶೇಖರ ಕವಟಗಿ, ಸಾಬು ಮಾಶ್ಯಾಳ, ಈರಣ್ಣ ರಾವೂರ, ವಿಜಯ ಜೋಶಿ ಉಪಸ್ಥಿತರಿದ್ದರು.