ಕನ್ನಡಪ್ರಭವಾರ್ತೆ ತೀರ್ಥಹಳ್ಳಿ
ನೆರಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಡೇಮನೆವರೆಗಿನ ರಸ್ತೆಗೆ ಸರ್ಕಾರದಿಂದ ಮಂಜೂರಾಗಿದ್ದ ಹಣದಲ್ಲಿ ಪೂರ್ಣ ಕಾಮಗಾರಿ ನಡೆಸದ ಶಾಸಕ ಆರಗ ಜ್ಞಾನೇಂದ್ರ ಕಡೇಮನೆ ಗ್ರಾಮಸ್ಥರಿಗೆ ವಂಚನೆ ಮಾಡಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.ಸಂಚಾರಕ್ಕೆ ಯೋಗ್ಯವಲ್ಲದ ಗ್ರಾಮದ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಶಾಲಾ ವಿದ್ಯಾರ್ಥಿಗಳು ಸೋಮವಾರ ತಾಲೂಕು ಕಚೇರಿ ಎದುರು ಧರಣಿ ನಡೆಸಿದ್ದ ಕಡೇಮನೆ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ವೇಳೆ ಮಾತನಾಡಿ, ಕಡೇಮನೆವರೆಗಿನ ರಸ್ತೆ ಕಾಮಗಾರಿಗೆ ಮಂಜೂರಾಗಿದ್ದ ಅನುದಾನದಲ್ಲಿ ಬಿಂತಳ ಗ್ರಾಮದವರೆಗೆ ಮಾತ್ರ ರಸ್ತೆ ಮಾಡಿಸಿದ್ದಾರೆ. ಪೂರ್ಣ ಕಾಮಗಾರಿ ಮಾಡದ ಶಾಸಕರು ಶಾಸಕರ ಈ ಕ್ರಮವನ್ನು ಖಂಡಿಸಿ ಬಿಂತಳ ಗ್ರಾಮದಿಂದ ಪಾದಯಾತ್ರೆ ನಡೆಸುವುದಾಗಿ ಹೇಳಿದರು.
ಕಡೇಮನೆ ಗ್ರಾಮಕ್ಕೆ ಹೋಗುವ ರಸ್ತೆ ಮಾತ್ರವಲ್ಲದೇ ಈ ಮಾರ್ಗದಲ್ಲಿರುವ ಸೇತುವೆ ಕೂಡಾ ಶಿಥಿಲಗೊಂಡಿದೆ. ಈ ಕಾಮಗಾರಿಗೆ ಕನಿಷ್ಠ ಎರಡೂವರೆ ಕೋಟಿ ರು. ಅಗತ್ಯವಿದ್ದು, ಸರ್ಕಾರದಿಂದ ಅನುದಾನ ಮಂಜೂರು ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.ಆರೋಪಿಸಿದ ಮಾಜಿ ಶಾಸಕರು, ಸರ್ಕಾರದಿಂದ ಮಂಜೂರಾದ ಅನುದಾನದಲ್ಲಿ ಅರೆಬರೆ ಕೆಲಸ ಮಾಡುವ ಮೂಲಕ ತಮ್ಮ ಸಂಭಂಧಿಗೆ ಅನುಕೂಲ ಮಾಡುವ ಸಲುವಾಗಿ ಇಲ್ಲಿಗೆ ಮಂಜೂರಾಗಿದ್ದ ಹಣವನ್ನು ಹುಲಿಕಲ್ ಘಾಟಿ ಕಾಮಗಾರಿಗೆ ನೀಡಿದ್ದಾರೆ. ಶಾಸಕರ ಈ ಪಕ್ಷಪಾತಿ ಧೋರಣೆಯನ್ನು ಖಂಡಿಸಿ ಶೀಘ್ರದಲ್ಲಿ ಬಿಂತಳದಿಂದ ಪಾದಯಾತ್ರೆ ನಡೆಸುವುದಾಗಿಯೂ ಘೋಷಿಸಿದರು.
ದೇವಸ್ಥಾನಗಳ ಹುಂಡಿ ಹಣದ ಪ್ರಕರಣಕ್ಕೆ ಸಂಭಂದಿಸಿ ಶಾಸಕ ಆರಗ ಜ್ಞಾನೇಂದ್ರರಿಗೆ ಉತ್ತರ ಕೊಡಬೇಕಿದೆ. ಈ ಬಗ್ಗೆ ನಮ್ಮಲ್ಲಿ ಯಾರಾದರೂ ಉತ್ತರ ಕೊಡುತ್ತಾರೋ ನೋಡಬೇಕಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಇರುವವರು ಉತ್ತರ ಕೊಟ್ಟರೆ ಸಂತೋಷ. ಇಲ್ಲವಾದಲ್ಲಿ ನಾನೇ ಕೊಡುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು. ತಹಸೀಲ್ದಾರ್ ಎಸ್.ರಂಜಿತ್,ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ.ಶೈಲಾ ಕೂಡಾ ಕಡೇಮನೆ ಗ್ರಾಮಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೆಸ್ತೂರು ಮಂಜುನಾಥ್, ಅಮರನಾಥ ಶೆಟ್ಟಿ, ಪೂರ್ಣೆಶ್, ಬೇಳೂರು ದಿನೇಶ್, ಹೊನ್ನಕುಡಿಗೆ ಸುಂದರೇಶ್, ಇಕ್ಕೇರಿ ಚಂದ್ರಪ್ಪಗೌಡ ಇದ್ದರು.