ಕನ್ನಡಪ್ರಭ ವಾರ್ತೆ ರಾಮದುರ್ಗ
ಮುಂಗಾರು ಮಳೆಯ ಕೊರತೆಯಿಂದ ಭೀಕರ ಬರ ಪರಿಸ್ಥಿತಿ ಎದುರಿಸುತ್ತಿರುವ ತಾಲೂಕಿನ ವಿವಿಧ ಗ್ರಾಮಗಳಿಗೆ ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಭೇಟಿ ನೀಡಿ ಹಾನಿಗೊಳಗಾದ ಬೆಳೆ ಪರಶೀಲನೆ ನಡೆಸಿದರು.ಮಂಗಳವಾರ ತಾಲೂಕಿನ ಬಟಕುರ್ಕಿ, ಸಾಲಾಪೂರ ತಾಂಡಾ, ಸಾಲಹಳ್ಳಿ, ಬಿಜಗುಪ್ಪಿ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಹಾನಿಗೊಳಗಾದ ಹೆಸರು, ಉಳ್ಳಾಗಡ್ಡಿ ಬೆಳೆಗಳನ್ನು ಪರಿಶೀಲನೆ ಮಾಡಿ ರೈತರೊಂದಿಗೆ ಚರ್ಚೆ ಮಾಡಿದರು. ಅಲ್ಲದೇ, ರೈತರಿಗೆ ಸೂಕ್ತ ಪರಿಹಾರ ಬಿಡುಗಡೆ ಮಾಡಲು ಅಗತ್ಯ ಕ್ರಮಕೈಗೊಳ್ಳುವದಾಗಿ ಭರವಸೆ ನೀಡಿದರು.ಮುಂಗಾರು ಮಳೆಯ ವಿಫಲತೆಯಿಂದ ತಾಲೂಕಿನಲ್ಲಿ ಅಂದಾಜು 23600 ಹೆಕ್ಟೇರ್ ಹೆಸರು, 9100 ಹೆಕ್ಟೇರ್ ಗೋವಿನಜೋಳ, 950 ಹೆಕ್ಟೇರ್ ತೊಗರಿ, 350 ಹೆಕ್ಟೇರ್ ಸೂರ್ಯಕಾಂತಿ ಮತ್ತು 275 ಹೆಕ್ಟೇರ್ ಹತ್ತಿ ಬೆಳೆ ಹಾನಿಯಾಗಿರುವ ಸಾಧ್ಯತೆಯಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶ್ರೀನಾಥ ಚಿಮ್ಮಲಗಿ ಮತ್ತು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ ಮುಗಳಕೋಡ ಶಾಸಕರಿಗೆ ಮಾಹಿತಿ ನೀಡಿದರು. ಜಂಟಿ ಸಮೀಕ್ಷೆಯ ನಂತರ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಜಹೂರ ಹಾಜಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಿದ್ಲಿಂಗಪ್ಪ ಸಿಂಗಾರಗೊಪ್ಪ, ಬಸನಗೌಡ ಪ್ಯಾಟಿಗೌಡ್ರ, ರಾಮಣ್ಣ ಬೀಡಕಿ, ಪೀರು ತಳವಾರ ಸೇರಿದಂತೆ ಹಲವರಿದ್ದರು.