ಕನ್ನಡಪ್ರಭ ವಾರ್ತೆ ಬಾಗೂರು

ಕುಡಿಯುವ ನೀರಿಗಾಗಿ ಹಾಸನ, ಮಂಡ್ಯ, ತುಮಕೂರು ಜಿಲ್ಲೆಯ ನಾಲೆಗಳಿಗೆ 1 ತಿಂಗಳು ಹೇಮಾವತಿ ಡ್ಯಾಮ್‌ನಿಂದ ನೀರು ಹರಿಸಬೇಕು ಎಂದು ಜಿಲ್ಲಾಡಳಿತಕ್ಕೆ ಶಾಸಕ ಸಿ. ಎನ್. ಬಾಲಕೃಷ್ಣ ಮನವಿ ಮಾಡಿದರು.

ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರ ವತಿಯಿಂದ ಹೋಬಳಿಯ ಕಾಮನಾಯಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಎಫ್ಎನ್ಎಸ್ ಯೋಜನೆಯಡಿ ಗ್ರಾಮದ ಫಲಾನುಭವಿ ರೈತರಿಗೆ ರಾಗಿ ಮತ್ತು ಇತರ ಪರಿಕರ ವಿತರಿಸಿ ಮಾತನಾಡಿದರು. ಚನ್ನರಾಯಪಟ್ಟಣ ತಾಲೂಕಿಗೆ ಮುಂಗಾರು ಹಿಂಗಾರು ಮಳೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ತಾಲೂಕನ್ನು ಬರಪಟ್ಟಿಗೆ ಸೇರಿಸಬೇಕು ಹಾಗೂ ರೈತರ ಸಾಲ ಮನ್ನಾ ಮಾಡಬೇಕು ಎಂದು ಜಿಲ್ಲಾ ಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು. ರಾಗಿಗೆ 1 ಎಕರೆಗೆ 404 ರು. ಕೊಟ್ಟು ವಿಮೆ ಮಾಡಿಸಿದರೆ ಕನಿಷ್ಠ ಎಕರೆಗೆ ₹19 ಸಾವಿರ ಹಣ ಸಿಗುತ್ತದೆ ವಿಮೆ ಕಟ್ಟಲು ದಿನಾಂಕ 14 ಕೊನೆಯ ದಿನವಾಗಿದೆ ಎಂದು ತಿಳಿಸಿದರು. ಕಾಮನಾಯಕನಹಳ್ಳಿ ಗ್ರಾಮದ 87 ಹೆಕ್ಟೇರ್‌ ಪ್ರದೇಶದ 250 ಫಲಾನುಭವಿ ರೈತರಿಗೆ ವಿವಿಧ ಕೃಷಿ ಪರಿಕರಗಳು ಪ್ರೋತ್ಸಾಹಧನ ಸೇರಿ 9 ಸಾವಿರ ವಿತರಿಸಲಾಗುವುದು ಎಂದರು. ಕೆಎಂಆರ್ 316 ಕರ್ನಾಟಕ ಮಂಡ್ಯ ರಾಗಿ 100 ದಿನಕ್ಕೆ ಕಟಾವಿಗೆ ಬರುತ್ತದೆ ಸಶಿ ಮಡಿ ಮಾಡಿ ನಾಟಿ ಮಾಡಿದರೆ ಎಕರೆಗೆ 12 ಕ್ವಿಂಟಲ್ ಇಳುವರಿ ಬರುತ್ತದೆ ಕಡಿಮೆ ಅವಧಿಯಲ್ಲಿ ಬೆಳೆಯುವ ವಿಶೇಷ ತಳಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಎಚ್ ಎಸ್. ರಕ್ಷಿತ್ ನಾಯಕ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್. ಶಿವಣ್ಣ, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಓಬಳಾಪುರ ಏನ್. ಬಸವರಾಜ್, ಮಂಜುನಾಥ್, ಪುರೋಹಿತ್ ಸಿ.ಪಿ. ರಂಗನಾಥ್, ದೇವರಾಜು, ಕಾಂತರಾಜ್, ತಮ್ಮಯ್ಯಣ್ಣ, ಲೋಕೇಶ್, ನಾಗೇಶ್, ಶಂಕರ್, ಕೆ. ಪಿ. ಕುಮಾರ್, ದೇವರಾಜ್, ಪುಟ್ಟೇಗೌಡ, ಮಂಜುನಾಥ್, ದೇವೇಗೌಡ, ಚಂದ್ರಶೇಖರ್, ಕೃಷಿ ಇಲಾಖೆ ಸಿಬ್ಬಂದಿಯಾದ ವೀಣಾ, ಬಸವರಾಜ್, ಕಾವ್ಯ, ಕಾರೆಕೆರೆ ಕೃಷಿ ಕಾಲೇಜ್ ವಿದ್ಯಾರ್ಥಿಗಳು ಇತರರು ಹಾಜರಿದ್ದರು.