ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಯಾವುದೇ ಅಡಚಣೆ ಇಲ್ಲದೆ ಪಾದಯಾತ್ರಿಗಳು ಯಶಸ್ವಿಯಾಗಿ ಧರ್ಮಸ್ಥಳವನ್ನು ತಲುಪಲಿ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಹೇಳಿದರು.

ತಾಲೂಕಿನ ಶ್ರವಣಬೆಳಗೊಳದ ಕೆಂಪೇಗೌಡ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿರುವ ಭಕ್ತರಿಗೆ ಬಾಳೆಹಣ್ಣು, ಬಿಸ್ಕತ್ ಹಾಗೂ ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸಿ ಮಾತನಾಡಿದರು. ಧರ್ಮಸ್ಥಳಕ್ಕೆ ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನೆಲೆ ಇದ್ದು, ಧರ್ಮದರ್ಶಿಗಳಾದ ಶ್ರೀಗಳ ಕುಟುಂಬದ ಉತ್ತಮ ನಿರ್ವಹಣೆ ಹಾಗೂ ಧರ್ಮದ ಆಡಳಿತದಿಂದ ಇಂದಿಗೂ ತನ್ನದೇ ಆದ ಮಹತ್ವವನ್ನು ಉಳಿಸಿಕೊಂಡು ವಿಶ್ವದ ಗಮನ ಸೆಳೆದಿದೆ ಎಂದರು. ವರ್ಷದಿಂದ ವರ್ಷಕ್ಕೆ ಕ್ಷೇತ್ರಕ್ಕೆ ತೆರಳುವ ಭಕ್ತರ ಸಂಖ್ಯೆ ಏರಿಕೆಯಾಗುತ್ತಿದ್ದು ಕ್ಷೇತ್ರದ ಮಹಿಮೆ ಹಾಗೂ ಹೆಗಡೆ ಶ್ರೀಗಳ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು.

ಬೆಂಗಳೂರು, ತುಮಕೂರು, ರಾಮನಗರ, ಕಣ್ಣೂರು, ಮಾಗಡಿ, ನಾಗಮಂಗಲ ಸೇರಿದಂತೆ ವಿವಿಧೆಡೆಯಿಂದ ಕೇಸರಿ ವಸ್ತ್ರ ಧರಿಸಿರುವ ಭಕ್ತರು ಪಟ್ಟಣ ಮಾರ್ಗವಾಗಿ ತಂಡೋಪತಂಡವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದತ್ತ ಕಾಲ್ನಡಿಗೆಯಲ್ಲಿ ಸಾಗುತ್ತಿರುವ ದೃಶ್ಯ ಕಣ್ಮನ ಸೆಳೆಯುತ್ತಿದೆ ಎಂದು ತಿಳಿಸಿದರು. ರಸ್ತೆಯುವುದಕ್ಕೂ ಅಲ್ಲಲ್ಲಿ ಸಂಘಸಂಸ್ಥೆಗಳ ಕಾರ್ಯಕರ್ತರು ಹಾಗೂ ದಾನಿಗಳು ನೆರಳಿನ ವ್ಯವಸ್ಥೆಯೊಂದಿಗೆ ಯಾತ್ರಿಗಳಿಗೆ ಕಾಫಿ, ಟೀ, ತಿಂಡಿ, ಊಟ, ಮಜ್ಜಿಗೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು ಯಾವುದೇ ತೊಂದರೆಯಾಗದಂತೆ ಗಮನಹರಿಸಲಾಗುತ್ತಿದೆ. ಇನ್ನು ವಾಹನ ಸವಾರರು ದಯವಿಟ್ಟು ಭಕ್ತರ ಪಾದಯಾತ್ರೆಯನ್ನು ಗಮನದಲ್ಲಿ ಇಟ್ಟುಕೊಂಡು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಸಂಚಾಲಕರಾದ ಮೀಸೆ ಮಂಜಣ್ಣ, ಕೆಂಪೇಗೌಡ ಬಳಗದ ಸದಸ್ಯರಾದ ಮಂಜುನಾಥ್, ಶರತ್, ರವಿ, ಲೋಕೇಶ್, ಜಯರಾಮ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.