ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ತಾಲೂಕಿನಲ್ಲಿ 3000ಕ್ಕೂ ಹೆಚ್ಚು ರೈತರ ಕೊಳವೆಬಾವಿಗಳು ಅಕ್ರಮ- ಸಕ್ರಮ ಯೋಜನೆಗೆ ಒಳಪಡಲಿದ್ದು, ಇಂಧನ ಇಲಾಖೆ ನಿಗಧಿ ಮಾಡಿರುವ ಹಣವನ್ನು ರೈತರು ಪಾವತಿಸುವ ಮೂಲಕ ಯೋಜನೆಯ ಲಾಭ ಪಡೆಯುವಂತೆ ಶಾಸಕ ಸಿ.ಎನ್. ಬಾಲಕೃಷ್ಣ ಮನವಿ ಮಾಡಿದರು.

ಹೋಬಳಿ ಕೇಂದ್ರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ನುಗ್ಗೇಹಳ್ಳಿ ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಇಂಧನ ಇಲಾಖೆ ಆದೇಶದನ್ವಯ ಅಕ್ರಮ- ಸಕ್ರಮ ಯೋಜನೆಗೆ ರೈತರು ತಮ್ಮ ಕೊಳವೆ ಬಾವಿಗಳಿಗೆ ಗುಣಮಟ್ಟದ ವಿದ್ಯುತ್ ಪಡೆಯುವ ಸಲುವಾಗಿ ಇಲಾಖೆ ನಿಗದಿ ಮಾಡಿರುವ ಹಣವನ್ನು ಪಾವತಿಸುವ ಮೂಲಕ ನೋಂದಣಿ ಮಾಡಿಸಿ ಸಕ್ರಮಗೊಳಿಸಿಕೊಳ್ಳುವಂತೆ ರೈತರಿಗೆ ಮನವಿ ಮಾಡಿದರು.

ಹೋಬಳಿ ಕೇಂದ್ರದಲ್ಲಿರುವ ಉಪ ವಿಭಾಗ ಕಚೇರಿಗೆ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ₹1.60 ಕೋಟಿ ಅನುದಾನ ಬಿಡುಗಡೆಯಾಗಿದೆ. ಇಡೀ ಜಿಲ್ಲೆಯಲ್ಲೇ ಈ ವಿಭಾಗ ಅತಿ ಹೆಚ್ಚು ಕೊಳವೆಬಾವಿಗಳನ್ನು ಹೊಂದಿದೆ. ತಾಲೂಕಿನಲ್ಲಿ ರೈತರಿಗೆ ಗುಣಮಟ್ಟದ ವಿದ್ಯುತ್ ನೀಡುವ ಸಲುವಾಗಿ ಹೋಬಳಿಯ ತೆಂಕನಹಳ್ಳಿ ಬಳಿ 220 ಕೆವಿ ರಿಸಿವ್ ಸ್ಟೇಷನ್ ಗೆ ಈಗಾಗಲೇ ಇಂಧನ ಇಲಾಖೆಯಿಂದ ಮಂಜೂರಾತಿ ದೊರೆತು ಟೆಂಡರ್ ಪ್ರಕ್ರಿಯೆಯಲ್ಲಿ ಇದೆ, ಸದ್ಯದಲ್ಲೇ ಯೋಜನೆಗೆ ಭೂಮಿ ಪೂಜೆ ನೆರವೇರಿಸಲಾಗುತ್ತದೆ ಎಂದರು.


ಕುಸುಮ್ ಬಿ ಯೋಜನೆಯ ಲಾಭ ಪಡೆಯಿರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರಮುಖ ಯೋಜನೆಯದ ಕುಸುಮ್ ಬಿ ಸೋಲಾರ್ ಯೋಜನೆಯಿಂದ ರೈತರಿಗೆ ಗುಣಮಟ್ಟದ ವಿದ್ಯುತ್ ನಿರಂತರವಾಗಿ ದೊರಕಲಿದ್ದು, ಇನ್ನೂ ಸರ್ಕಾರ ಶೇಕಡ 80ರಷ್ಟು ಸಹಾಯಧನ ದೊರಕಲಿದ್ದು, ರೈತರು ಕೇವಲ 20ರಷ್ಟು ಹಣ ಪಾವತಿಸಬೇಕು. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಲಾಭ ಪಡೆಯುವಂತೆ ಸಲಹೆ ನೀಡಿದರು.

ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಜ್ರಕುಮಾರ್ ಎಚ್.ಡಿ., ಸಹಾಯಕ ಇಂಜಿನಿಯರ್ ಮಾದೇವ್, ಕಾಮಗಾರಿ ವಿಭಾಗದ ಇಂಜಿನಿಯರ್ ಚೆಲುವರಾಜ್, ತಾಂತ್ರಿಕ ವಿಭಾಗದ ಇಂಜಿನಿಯರ್ ಚೈತ್ರ, ಗುತ್ತಿಗೆದಾರ ಎಸ್.ಎನ್ ನವೀನ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಆರ್. ದೊರೆಸ್ವಾಮಿ, ಟಿಎಪಿಸಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಟೇಲ್ ಕುಮಾರ್, ತಾಪಂ ಮಾಜಿ ಸದಸ್ಯ ಪುಟ್ಟಸ್ವಾಮಿ, ವೀರಶೈವ ಸಮಾಜದ ಮುಖಂಡರಾದ ಕೃಪಾ ಶಂಕರ್, ಎನ್.ಎಸ್. ಗಿರೀಶ್, ಕೃಷಿ ಪತ್ತಿನ ಮಾಜಿ ಅಧ್ಯಕ್ಷ ಹುಲಿಕೆರೆ ಸಂಪತ್ ಕುಮಾರ್, ಮುಖಂಡರಾದ ಮಂಜುನಾಥ್, ಮೊಹಮ್ಮದ್ ಜಾವೀದ್, ಎನ್.ಆರ್.ಮುರಳಿ, ನಟರಾಜ್, ಕೆಂಪೇಗೌಡ, ಹೊನ್ನೇಗೌಡ, ಪೊಲೀಸ್ ಬೆಟ್ಟಯ್ಯ, ಯಲ್ಲಪ್ಪ, ಎನ್.ಆರ್. ಶಿವಕುಮಾರ್, ಚಂದ್ರು, ಡೈರಿ ಮಂಜಣ್ಣ, ಗೋಪಾಲ್, ಗಂಗಣ್ಣ, ದಿನೇಶ್ ಬಾಬು, ವಿದ್ಯುತ್ ಇಲಾಖೆಯ ಸಿಬ್ಬಂದಿ ವರ್ಗ ಸೇರಿದಂತೆ ಇತರರು ಹಾಜರಿದ್ದರು.