ಕೇಂದ್ರ ಸರ್ಕಾರದ 15ನೇ ಹಣಕಾಸಿನ ಯೋಜನೆ ಮೂಲಕ ತಾಲೂಕಿನಲ್ಲಿ 40 ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ನೂತನ ಆರೋಗ್ಯ ಕಟ್ಟಡ ನಿರ್ಮಾಣದಿಂದ ಗ್ರಾಮಸ್ಥರಿಗೆ ಉತ್ತಮ ಆರೋಗ್ಯ ಸೇವೆ ಲಭಿಸಲಿದೆ.
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ತಾಲೂಕಿನ ಜನರು ಉತ್ತಮ ಆರೋಗ್ಯ ಸೇವೆ ಪಡೆಯುವ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್ ಯಶಸ್ವಿನಿ ಯೋಜನೆ ನೋಂದಾಯಿಸಿಕೊಳ್ಳುವ ಮೂಲಕ ಈ ಯೋಜನೆಗಳ ಲಾಭ ಪಡೆಯುವಂತೆ ಶಾಸಕ ಸಿ.ಎನ್. ಬಾಲಕೃಷ್ಣ ಮನವಿ ಮಾಡಿದರು.ಹೋಬಳಿಯ ಅತ್ತಿಹಳ್ಳಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ಆಯುಷ್ಮಾನ್ ಸ್ವಾಸ್ಥ್ಯ ಯೋಜನೆ ವತಿಯಿಂದ ಸುಮಾರು ₹65 ಲಕ್ಷ ವೆಚ್ಚದಲ್ಲಿ ನೂತನ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸೇವೆಯೇ ನಮ್ಮ ನಿಜವಾದ ಕರ್ತವ್ಯವೆಂದು ತಿಳಿದು ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿರುವ ಸ್ಟ್ಯಾಪ್ ನರ್ಸ್ ಸೇರಿದಂತೆ ವಿವಿಧ ಸಿಬ್ಬಂದಿಗೆ ಕಳೆದ 5 ತಿಂಗಳಿಂದ ಸಂಬಳವಾಗದೆ ಸಿಬ್ಬಂದಿ ತೀವ್ರ ಸಂಕಷ್ಟದಲ್ಲಿದ್ದು, ಇದರಿಂದ ಅವರ ಕುಟುಂಬಗಳ ನಿರ್ವಹಣೆಗೆ ಸಮಸ್ಯೆಯಾಗಿದೆ, ಈ ಸಮಸ್ಯೆಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ಮೂಲಕ ವೇತನ ಬಿಡುಗಡೆಗೆ ಒತ್ತಾಯಿಸುವುದಾಗಿ ತಿಳಿಸಿದರು.ಕೇಂದ್ರ ಸರ್ಕಾರದ 15ನೇ ಹಣಕಾಸಿನ ಯೋಜನೆ ಮೂಲಕ ತಾಲೂಕಿನಲ್ಲಿ 40 ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ನೂತನ ಆರೋಗ್ಯ ಕಟ್ಟಡ ನಿರ್ಮಾಣದಿಂದ ಗ್ರಾಮಸ್ಥರಿಗೆ ಉತ್ತಮ ಆರೋಗ್ಯ ಸೇವೆ ಲಭಿಸಲಿದೆ. ಗ್ರಾಮದಲ್ಲಿ ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಅನುದಾನ ನೀಡಲಾಗಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಯಂತ್ರಗಳ ಅಳವಡಿಕೆಯ ನಂತರ ನೀರಿನ ಘಟಕವನ್ನು ಉದ್ಘಾಟಿಸಲಾಗತ್ತದೆ ಜೊತೆಗೆ ಪಶು ಆಸ್ಪತ್ರೆ ಕಟ್ಟಡ ದುಸ್ಥಿತಿಯಲ್ಲಿದ್ದು ಹೊಸ ಕಟ್ಟಡ ನಿರ್ಮಾಣಕ್ಕೆ ಮುಂಬರುವ ದಿನಗಳಲ್ಲಿ ಆದ್ಯತೆ ನೀಡಲಾಗುತ್ತದೆ. ಈ ವರ್ಷದ ಪೂರ್ವ ಹಂಗಾಮಿನಲ್ಲಿ ತೋಟಿ ಏತ ನೀರಾವರಿ ಯೋಜನೆ ಪೂರ್ಣಗೊಂಡ ನಂತರ ಗ್ರಾಮದ ಮುಂಭಾಗದ ಕಟ್ಟೆಗೆ ನೀರು ಹರಿಸಲಾಗುತ್ತದೆ. ಗ್ರಾಮದ ದೇವಾಲಯಗಳ ಜೀರ್ಣೋದ್ಧಾರ, ಕಾಂಕ್ರಿಟ್ ರಸ್ತೆ, ಒಳಚರಂಡಿ ನಿರ್ಮಾಣ ಸೇರಿದಂತೆ ಬಹುತೇಕ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಆರೋಗ್ಯ ಅಧಿಕಾರಿ ಡಾ. ಹರೀಶ್, ಕೃಷಿ ಪತ್ತಿನ ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಹುಲಿಕೆರೆ ಸಂಪತ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಹಿರಿಯಣ್ಣ ಗೌಡ, ಅನಿತಾ ಮಹೇಶ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ವೇಣುಗೋಪಾಲ್, ಗುತ್ತಿಗೆದಾರ ಮನೋಜ್, ಮುಖಂಡರಾದ ಕೆಂಪೇಗೌಡ, ಮಂಜೇಗೌಡ, ತಿಮ್ಮೇಗೌಡ, ಪ್ರಭು, ನಾಗೇಂದ್ರ, ಧನಂಜಯ, ಕುಮಾರ್, ಧರ್ಮ, ಶೇಖರ್, ರಾಮೇಗೌಡ, ಸಹದೇವಣ್ಣ, ಬೇಲೂರಯ್ಯ, ಪುಟ್ಟೇಗೌಡ, ಚಂದನ್, ನಾಗರಾಜ್, ಮಂಜ ಶೆಟ್ಟಿ, ಬಸವೇಗೌಡ, ಮೋಹನ್ ಕುಮಾರ್, ನಂಜುಂಡೇಗೌಡ, ಮಧು, ಮಂಜಯ್ಯ ಸೇರಿ ಗ್ರಾಮಸ್ಥರು ಹಾಜರಿದ್ದರು.