ಸಾರಾಂಶ
ಸಾಗರ: ಖಾತೆ ಜಮೀನು ಹೊಂದಿದವರಿಗೆ ಬಗರ್ಹುಕುಂ ಮಂಜೂರು ಮಾಡಬೇಡಿ ಎಂದು ಶಾಸಕ ಬೇಳೂರು ನೀಡಿರುವ ಹೇಳಿಕೆ ಖಂಡನೀಯ. ರೈತರಿಗೆ ೪.೩೮ ಎಕರೆ ಜಮೀನು ಮಂಜೂರು ಮಾಡಬಹುದು ಎನ್ನುವ ಕಾನೂನು ಇದೆ ಎಂದು ರೈತ ಸಂಘದ ಅಧ್ಯಕ್ಷ ಎಂ.ಬಿ.ಮಂಜಪ್ಪ ಹಿರೇನೆಲ್ಲೂರು ಹೇಳಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ. ೨೩ರಂದು ಶಾಸಕರು ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಖಾತೆದಾರರಿಗೆ ಬಗರ್ಹುಕುಂ ಜಮೀನು ಮಂಜೂರು ಮಾಡಬಾರದು ಎಂದು ತಹಸೀಲ್ದಾರ್ಗೆ ಸೂಚನೆ ನೀಡಿದ್ದಾರೆ. ಶಾಸಕರ ಹೇಳಿಕೆ ಕಾನೂನು ವಿರೋಧಿಯಾಗಿದ್ದು, ಅಧಿಕಾರಿಗಳಿಗೆ ರೈತರನ್ನು ಶೋಷಣೆ ಮಾಡಲು ಸೂಚನೆ ಕೊಟ್ಟಂತೆ ಆಗುತ್ತದೆ ಎಂದರು.
ಈಗಾಗಲೆ ರೈತರು ಬಗರ್ಹುಕುಂ ಮಂಜೂರಾತಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಫಾರಂ ನಂ. ೫೦, ೫೩, ಮತ್ತು ೫೭ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜಮೀನು ಮಂಜೂರು ಮಾಡಬೇಕಾದ ಶಾಸಕರು ತಮಗೆ ತೋಚಿದ ಹೇಳಿಕೆ ನೀಡಿ ರೈತರ ಶೋಷಣೆಗೆ ಮುಂದಾಗಿರುವುದು ಸರಿಯಲ್ಲ. ಶಾಸಕರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.ರೈತ ಮುಖಂಡ ಕನ್ನಪ್ಪ ಹೊಸಕೊಪ್ಪ ಮಾತನಾಡಿ, ಶಾಸಕರಾದವರು ಬೇರೆಬೇರೆ ಕಡೆ ಅಸ್ತಿಯನ್ನು ಹೊಂದಿದರೆ ಅದು ಕಾನೂನು ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ರೈತರ ಖಾತೆ ಜಮೀನಿನ ಜೊತೆ ಬಗರ್ಹುಕುಂ ಇದ್ದರೆ ಅದನ್ನು ಶಾಸಕರಾದವರಿಗೆ ಸಹಿಸಿಕೊಂಡು ಇರಲು ಆಗುತ್ತಿಲ್ಲ. ಜನಪ್ರತಿನಿಧಿಗಳ ಇಂತಹ ಹೇಳಿಕೆಯನ್ನು ರೈತ ಸಂಘ ಗಂಭೀರವಾಗಿ ಪರಿಗಣಿಸುವ ಜೊತೆಗೆ ಸಂದರ್ಭ ಬಂದರೆ ಬೀದಿಗೆ ಇಳಿದು ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದು ಹೇಳಿದರು.
ಸಂಘಟನೆಯ ಕೆ.ಟಿ.ರಮೇಶ್ ಐಗಿನಬೈಲು, ಆಲಳ್ಳಿ ದೇವು, ಬೇಬಿ ಗೋಳಗೋಡು, ಶಿಲ್ಪ ಈಳಿ ಹಾಜರಿದ್ದರು.