ಸಾರಾಂಶ
ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಿಂದ ಎನ್ಎಸ್ಎಸ್ ಶಿಬಿರವನ್ನು ಮಳಲಗಾಂವ ಊರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಿರಸಿ: ದಿನನಿತ್ಯ ಕ್ಷೇತ್ರದಾದ್ಯಂತ ಓಡಾಟ ಮಾಡಿ ಜನರ ಸಮಸ್ಯೆ ಆಲಿಸುತ್ತಿದ್ದ ಶಾಸಕ ಭೀಮಣ್ಣ ನಾಯ್ಕ ತಮ್ಮ ಊರಾದ ತಾಲೂಕಿನ ಮಳಲಗಾಂವ ತೋಟದಲ್ಲಿ ವಿದ್ಯಾರ್ಥಿಗಳಿಗೆ ಕೃಷಿ ಪಾಠ ಮಾಡಿ ಗಮನ ಸೆಳೆದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಿಂದ ಎನ್ಎಸ್ಎಸ್ ಶಿಬಿರವನ್ನು ಮಳಲಗಾಂವ ಊರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಪಾಠದ ಜತೆ ಕೃಷಿಯಲ್ಲಿ ಆಸಕ್ತಿ ವಹಿಸಬೇಕಲ್ಲದೇ ಅವರಿಗೂ ಕೃಷಿಯ ಕುರಿತು ಮಾಹಿತಿ ಇರಬೇಕೆಂದು ತೋಟ ವೀಕ್ಷಣೆ ಹಾಗೂ ಮಾಹಿತಿ ವಿನಿಮಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶಾಸಕ ಭೀಮಣ್ಣ ನಾಯ್ಕ ವಿದ್ಯಾರ್ಥಿಗಳಿಗೆಕಾಳು ಮೆಣಸಿನ ಬಳ್ಳಿ, ಫಣಿಯೂರು ಮತ್ತು ಮಲ್ಲಿಸರ ಕಾಳು ಮೆಣಸು ನಮ್ಮ ಹವಾಮಾನಕ್ಕೆ ಒಗ್ಗುತ್ತವೆ. ಚಾಲಿ ಅಡಕೆಯನ್ನು ಸುಲಿಯುವಾಗ ಈ ರೀತಿ ಕುಳಿತುಕೊಳ್ಳಬೇಕು. ಕೃಷಿಯ ಒಂದೊಂದೇ ತಂತ್ರಜ್ಞಾನವನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು.
ಶಾಸಕ ಭೀಮಣ್ಣ ನಾಯ್ಕ ಮೂಲತಃ ಕೃಷಿಯ ಹಿನ್ನೆಲೆಯವರು. ಅಡಕೆ ತೋಟ, ಭತ್ತದ ಗದ್ದೆಗಳಲ್ಲಿ ಸ್ವತಃ ಕಾರ್ಯ ನಡೆಸುವ ಮೂಲಕ ಮೇಲಕ್ಕೆ ಬಂದವರು. ಹೀಗಾಗಿ ಅವರಿಗೆ ಕೃಷಿ ತಂತ್ರಜ್ಞಾನಗಳು ಸಹಜವಾಗಿಯೇ ಬಂದಿವೆ.ತಮ್ಮ ತೋಟಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ದು ಅಡಿಕೆ, ತೆಂಗು, ಕಾಳಮೆಣಸು, ಬಾಳೆ, ಅಗರ್ವುಡ್, ಶ್ರೀಗಂಧ, ವೆನ್ನಿಲ್ಲ ಬೆಳೆಗಳು ಬಗ್ಗೆ, ಅವುಗಳ ರೋಗಗಳು, ನಿಯಂತ್ರಣಾ ಕ್ರಮಗಳ ಬಗ್ಗೆ ಮಾಹಿತಿಯನ್ನು ವಿವರಿಸಿದರು.
ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಜಿ.ಟಿ. ಭಟ್ಟ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪಾಧ್ಯಕ್ಷ ಎಸ್.ಎಂ. ಕಮನಳ್ಳಿ, ಸದಸ್ಯರಾದ ಡಾ.ಕೆ.ಕೆಂಪರಾಜು, ಜಾಫಿ ಪೀಠರ್, ಪ್ರಮುಖರಾದ ದೀಪಕ ಹೆಗಡೆ ದೊಡ್ಡೂರು, ಗಣೇಶ ದಾವಣಗೆರೆ ಮತ್ತಿತರರು ಇದ್ದರು.