ಹಗಲಿನಲ್ಲೇ ಗುಣಮಟ್ಟದ ವಿದ್ಯುತ್ ಪೂರೈಕೆ

| Published : Nov 15 2025, 03:15 AM IST

ಹಗಲಿನಲ್ಲೇ ಗುಣಮಟ್ಟದ ವಿದ್ಯುತ್ ಪೂರೈಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಡಂಚಿನ ಪ್ರದೇಶದ ಗ್ರಾಮಗಳಲ್ಲಿ ವಿದ್ಯುತ್ ನ್ನು ರಾತ್ರಿ ವೇಳೆ ಪೂರೈಸಿರುವುದರಿಂದ ರೈತರು ಜಮೀನಿಗೆ ನೀರು ಹಾಯಿಸುವ ಸಲುವಾಗಿ ರಾತ್ರಿ ವೇಳೆ ತೆರಳುತ್ತಿದ್ದರು

ಕನ್ನಡಪ್ರಭ ವಾರ್ತೆ ನಂಜನಗೂಡುಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರೈತರು ರಾತ್ರಿ ವೇಳೆ ಜಮೀನಿಗೆ ಹೋಗುವುದನ್ನು ತಪ್ಪಿಸಲು ಹಗಲಿನಲ್ಲೇ ಗುಣಮಟ್ಟದ ವಿದ್ಯುತ್ ಪೂರೈಸುವ ಸಲುವಾಗಿ ಖಾಸಗಿ ಸಂಸ್ಥೆಯ ಸಹಭಾಗಿತ್ವದ ಕುಸುಮ್ ಯೋಜನೆ ಅಡಿ 14 ಕೋಟಿ ವೆಚ್ಚದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು. ತಾಲೂಕಿನ ರಾಜೂರು ಗ್ರಾಮದ ಬಳಿಯ 14 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.ಕಾಡಂಚಿನ ಪ್ರದೇಶದ ಗ್ರಾಮಗಳಲ್ಲಿ ವಿದ್ಯುತ್ ನ್ನು ರಾತ್ರಿ ವೇಳೆ ಪೂರೈಸಿರುವುದರಿಂದ ರೈತರು ಜಮೀನಿಗೆ ನೀರು ಹಾಯಿಸುವ ಸಲುವಾಗಿ ರಾತ್ರಿ ವೇಳೆ ತೆರಳುತ್ತಿದ್ದರು, ಇದರಿಂದ ಆನೆ, ಚಿರತೆ, ಹುಲಿ ಸೇರಿದಂತೆ ಕಾಡು ಪ್ರಾಣಿಗಳಿಂದ ಹಾನಿಯಾಗುವ ಆತಂಕ ರೈತರಲ್ಲಿ ಆವರಿಸಿತ್ತು, ಆದ್ದರಿಂದ ಕಾಡಂಚಿನ ಪ್ರದೇಶಗಳಲ್ಲಿ ಹಗಲಿನ ವೇಳೆಯೇ ಗುಣಮಟ್ಟದ ವಿದ್ಯುತ್ ಪೂರೈಸುವ ಸಲುವಾಗಿ ಕುಸುಮ್ ಯೋಜನೆ ಅಡಿ ಆರ್.ಸಿ.ಸಿ.ಎಲ್ ಎಂಬ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕವನ್ನು ತೆರೆಯಲಾಗುತ್ತದೆ, ಇದನ್ನು ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿ ನಿರ್ವಹಣೆ ಮಾಡಲಿದ್ದು, ಈ ಘಟಕದಲ್ಲಿ 4 ಮೆಘಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಆಗಲಿದ್ದು, ಅದನ್ನು ಚಂದ್ರವಾಡಿಯ ವಿದ್ಯುತ್ ವಿತರಣಾ ಘಟಕದ ಮೂಲಕ ಕಾಡಂಚಿನ ಭಾಗದ ರೈತರ ಜಮೀನಿಗೆ ಹಗಲಿನಲ್ಲಿಯೇ ಗುಣಮಟ್ಟದ ವಿದ್ಯುತ್ ಪೂರೈಸಲು ಸಾಧ್ಯವಾಗಲಿದೆ ಎಂದರು. ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷಕ್ಕೆ ಶಾಶ್ವತ ಪರಿಹಾರಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷ ತಪ್ಪಿಸಲು ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಈಗಾಗಲೇ ಯಡಿಯಾಲ ಭಾಗದ ಅರಣ್ಯ ಪ್ರದೇಶದ ಅಂಚಿನಲ್ಲಿ ಸುಮಾರು 12 ಕೋಟಿ ರು. ವೆಚ್ಚದಲ್ಲಿ ರೈಲ್ವೆ ಬ್ಯಾರಿಕೇಡ್ ಮತ್ತು ಮೆಸ್ ಅಳವಡಿಕೆ ಮಾಡಲಾಗಿದೆ, ಇನ್ನು ಸುಮಾರು 8 ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಮಾಡುವ ಕೆಲಸ ಬಾಕಿಯಿದ್ದು, ಈಗಾಗಲೇ ಯೋಜನೆ ಸಿದ್ಧಪಡಿಸಲಾಗಿದ್ದು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ, ಶೀಘ್ರದಲ್ಲೇ ಆ ಕಾಮಗಾರಿ ಪೂರೈಕೆಗೊಂಡು ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷಕ್ಕೆ ತೆರೆ ಬೀಳಲಿದೆ, ಜೊತೆಗೆ ಕಾಡಂಚಿನ ಭಾಗದ ಜನರ ಸಮಸ್ಯೆ ಆಲಿಸಲು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ರವರ ನೇತೃತ್ವದಲ್ಲಿ ಯಡಿಯಾಲದಲ್ಲಿ ಸಭೆ ನಡೆಸಲಾಗಿತ್ತು, ಅತಿ ಶೀಘ್ರದಲ್ಲೇ ಮತ್ತೆ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು ಎಂದರು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ವಿಧಾನಸಭಾ ಉಸ್ತುವಾರಿ ಶ್ರೀಕಂಠು, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಪ್ರದೀಪ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ. ಮಾರುತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠನಾಯಕ, ಮುಖಂಡರಾದ ಎಂ. ಮಾದಪ್ಪ, ಮಹೇಶ್, ಸಂಗರಾಜು, ಆದರ್ಶ, ಪ್ರಭು, ಚಂದನ್ ಗೌಡ, ಸೆಸ್ಕ್‌ ಮುಖ್ಯ ಕಾರ್ಯಪಾಲಕ ಎಂಜಿನಿಯರ್ ಆನಂದ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಿರಣ್ ಕುಮಾರ್, ದೇವರಾಜಯ್ಯ, ಆರ್.ಸಿ.ಸಿ.ಎಲ್ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ವಿ. ಶೇಖರ್, ವಲಯ ವ್ಯವಸ್ಥಾಪಕ ಜೀವನ್ ಇದ್ದರು.