ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಪ್ರಸಿದ್ಧ ಡಿಂಕದಮ್ಮ ದೇವಸ್ಥಾನವನ್ನು 6.14 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣ ಕಾಮಗಾರಿಗೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಬುಧವಾರ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ಡಿಂಕಾ ಗ್ರಾಮದಲ್ಲಿ ಇರುವ ಪ್ರಸಿದ್ಧ ಡಿಂಕದಮ್ಮ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ದ್ವಿಗುಣವಾಗಿದೆ. ಅದರಲ್ಲೂ ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಹಾಗೂ ಅಮಾವಾಸ್ಯೆ, ಹುಣ್ಣಿಮೆಯಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಕೂಲವಾಗಲು ದೇವಸ್ಥಾನವನ್ನು 6,14 ಕೋಟಿ ಅಂದಾಜು ಮೊತ್ತದಲ್ಲಿ ಹೊಸದಾಗಿ ನಿರ್ಮಾಣ ಮಾಡಲು ಕ್ರಮವಹಿಸಲಾಗಿದೆ ಎಂದರು.

ದೇವಸ್ಥಾನದ ಅಭಿವೃದ್ಧಿಗೆ ನನ್ನ ಸ್ವಂತ ಹಣವನ್ನು ಒಂದು ರು. ವಿನಿಯೋಗ ಮಾಡುತ್ತಿಲ್ಲ. ಡಿಂಕದಮ್ಮ ದೇವಸ್ಥಾನದ ಸಮಿತಿಯಲ್ಲಿ 3 ಕೋಟಿ ಹಣ ಇದ್ದು ಅದನ್ನು ಸಹ ದೇವಸ್ಥಾನದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಉಳಿದಂತೆ ಭಕ್ತರು ನೀಡುವ ದೇಣಿ ಹಣ ಸಂಗ್ರಹಣೆ ಮಾಡಲಾಗುವುದು. ಸರ್ಕಾರದಿಂದ ಸ್ವಲ್ಪ ಅನುದಾನ ಬಿಡುಗಡೆ ಮಾಡಿಸಿ ಒಟ್ಟು ಹಂತದಲ್ಲಿ ಕಾಮಗಾರಿ ನಡೆಸಲು ಕ್ರಮವಹಿಸಲಾಗಿದೆ ಎಂದರು.

ಕಾಮಗಾರಿ ಸಂಪೂರ್ಣ ನಿರ್ವಹಣೆಯನ್ನು ನಿರ್ಮಿತಿ ಕೇಂದ್ರದ ಅಧಿಕಾರಿಗಳು ವಹಿಸಿಕೊಂಡಿದ್ದು, ಒಂದೂವರೆ ವರ್ಷದಲ್ಲಿ ದೇವಸ್ಥಾನ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗುವುದು. ದೇವಸ್ಥಾನದ ಅಭಿವೃದ್ಧಿಯಿಂದ ಸುತ್ತಮುತ್ತಲಿನ ಗ್ರಾಮಗಳಿಗೂ ಅನುಕೂಲವಾಗಲಿದೆ ಎಂದರು.


ದೇವಸ್ಥಾನದ ಅಭಿವೃದ್ಧಿ ಜೊತೆಗೆ ದೇಗುಲಕ್ಕೆ ಬರುವ ಭಕ್ತರು, ಸಾರ್ವಜನಿಕರಿಗೆ ಮೂಲಸೌಕರ್ಯಗಳು ಒದಗಿಸುವುದು, ಬೈಪಾಸ್ ರಸ್ತೆ ನಿರ್ಮಾಣಕ್ಕೂ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ತಹಸೀಲ್ದಾರ್ ಬಸವರೆಡ್ಡಪ್ಪರೋಣದ ಮಾತನಾಡಿ, ಡಿಂಕಮ್ಮ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ‘ಎ’ಪ್ರವರ್ಗಕ್ಕೆ ಸೇರಿದ ದೇವಸ್ಥಾನವಾಗಿದೆ. ಸಂಪೂರ್ಣ ಶಿಥಿಲಗೊಂಡಿರುವ ಜೊತೆಗೆ ಭಕ್ತರು ದರ್ಶನ ಮಾಡಲು ತುಂಬಾ ಕಿರಿದಾಗಿದ್ದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಲು ಕ್ರಮವಗಿಸಲಾಗಿದೆ ಎಂದರು.

ದೇವಸ್ಥಾನದಲ್ಲಿ ಇರುವ ಹಣ, ಭಕ್ತರಿಯಿಂದ ದೇಣಿಗೆ ಹಣ ಹಾಗೂ ಸರ್ಕಾರದ ಅನುದಾನದಲ್ಲಿ ದೇವಸ್ಥಾನ ಅಭಿವೃದ್ಧಿ ಪಡಿಸಲಾಗುವುದು. ಇನ್ನೂ ದೇವಸ್ಥಾನದ ರಕ್ಷಣೆಗೆ ಬೇಕಾದ ಪೊಲೀಸ್ ವ್ಯವಸ್ಥೆ, ಮೂಲ ಸೌಕರ್ಯಗಳ ವ್ಯವಸ್ಥೆಗೂ ಕ್ರಮ ವಹಿಸಲಾಗುವುದು ಎಂದರು.

ಮುಖಂಡ ಡಿಂಕಾ ಸೋಮಶೇಖರ್ ಮಾತನಾಡಿ, ಡಿಂಕದಮ್ಮ ದೇವಸ್ಥಾನದಲ್ಲಿ ಈವರೆಗೆ ಸುಮಾರು 10 ಬಾರಿ ಕಳ್ಳತನವಾಗಿದೆ. ದೇವಸ್ಥಾನಕ್ಕೆ ಸೂಕ್ತ ರಕ್ಷಣೆ ಇಲ್ಲವಾಗಿದೆ. ವಾರಗಳು, ವಿಶೇಷ ದಿನಗಳಲ್ಲಿ ಭಕ್ತರು ಬಂದಾಗ ಸಾಕಷ್ಟು ಟ್ರಾಫಿಕ್, ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಇಲ್ಲಿಗೆ ಸೂಕ್ತ ಪೊಲೀಸ್ ವ್ಯವಸ್ಥೆ ಕಲ್ಪಿಸಬೇಕು. ಜತೆಗೆ ದೇವಸ್ಥಾನಕ್ಕೆ ಬರುವ ದೇಣಿಗೆ ಆದಾಯದ ಬಗ್ಗೆ ಲೆಕ್ಕಾಪತ್ರಗಳ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಎಂಜಿನಿಯರ್ ಜಯಪ್ರಕಾಶ್, ಪಿಡಿಒ ಸ್ವಾಮೀಗೌಡ, ರೈತಸಂಘದ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ನಾಗರಾಜು, ರೈತಮುಖಂಡೆ ಎಂಜಿನಿಯರ್ ರೂಪ, ಮುಖಂಡ ಶಂಕರನಂಜಪ್ಪ, ಹಾಳೇಗೌಡ, ಮಹದೇವಪ್ಪ, ರಮೇಶ್, ಶ್ರೀಮೂರ್ತಿ, ಚಂದ್ರಕಾಂತ್, ವೆಂಕಟೇಶ್, ರಮೇಶ್, ಬಿ.ಜೆ.ಸ್ವಾಮಿ, ದೇವರಾಜು, ಶಂಕರ್ ಸೇರಿದಂತೆ ಹಲವರು ಹಾಜರಿದ್ದರು.