ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಹಳೇಬೀಡು ಸಮೀಪದ ಚೀನಕಹಳ್ಳಿ ಬಳಿ 5.50 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ 66/11 ಕೆವಿ ವಿದ್ಯುತ್ ವಿತರಣಾ ಉಪಕೇಂದ್ರವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಲೋಕಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಶಾಸಕರು, ತಾಲೂಕಿನ ಹಳೇಬೀಡು, ಸುಂಕಾತೊಣ್ಣೂರು ಭಾಗದ ಹಲವು ಗ್ರಾಮಗಳಿಗೆ ಪಾಂಡವಪುರ ಹಾಗೂ ಮಹದೇಶ್ವರಪುರ ಗ್ರಾಮದ ವಿದ್ಯುತ್ ಸಬ್ ಸ್ಟೇಷನ್‌ನಿಂದ ವಿದ್ಯುತ್ ವಿತರಣೆ ಮಾಡಲಾಗುತ್ತಿತ್ತು. ವಿದ್ಯುತ್ ಲೈನ್ ಉದ್ದವಾದ ಹಿನ್ನೆಲೆಯಲ್ಲಿ ಹೋಲ್ಟೇಜ್ ಸಮಸ್ಯೆಯಾಗಿ ರೈತರಿಗೆ ಸಾಕಷ್ಟು ಅನಾನುಕೂಲ ಉಂಟಾಗುತ್ತಿತ್ತು. ಆ ಹಿನ್ನೆಲೆಯಲ್ಲಿ ಚೀಕನಹಳ್ಳಿ ಬಳಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನದಲ್ಲಿ ಈ ಭಾಗದ ರೈತರಿಗೆ ಇಲ್ಲಿದಲೇ ವಿದ್ಯುತ್ ವಿತರಣೆ ಮಾಡಲಾಗುವುದು ಎಂದರು.

ಅವಮಾನ ವೈಪರಿತ್ಯದಿಂದ ಕಾಲಕಾಲಕ್ಕೆ ಮಳೆಯಾಗುತ್ತಿಲ್ಲ. ಇದರಿಂದ ವಿದ್ಯುತ್ ಸಮಸ್ಯೆ ಉಂಟಾಗಲಿದೆ. ರೈತರು ತಮ್ಮ ಜಮೀನುಗಳ ಬಳಿ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಿಕೊಳ್ಳಬೇಕು. ತಾಲೂಕಿನ ಹಲವೆಡೆ ಸೋಲಾರ್ ಪವರ್ ಪ್ಲಾಂಟ್ ಗಳನ್ನು ನಿರ್ಮಾಣ ಮಾಡಲು ಕ್ರಮವಹಿಸಲಾಗಿದೆ ಎಂದರು.

ಮಂಡ್ಯ ಜಿಲ್ಲೆಯಲಿಯೇ ಅತಿ ಹೆಚ್ಚು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇರುವುದರಿಂದ ಈ ಭಾಗಕ್ಕೆ ಆಸ್ಪತ್ರೆ ಮಂಜೂರು ಮಾಡಿಸುವುದು ಬಹಳ ಕಷ್ಟದ ವಿಷಯವಾಗಿದೆ. ಕೈಗಾರಿಕೆ ಆರಂಭಿಸುವುದಕ್ಕೆ ಮಾಣಿಕ್ಯನಹಳ್ಳಿ ಗೇಟ್ ಬಳಿಕ 10 ಎಕರೆ ಜಮೀನು ಗುರುತಿಸಲಾಗಿದೆ. ಅಲ್ಲಿ ಕೈಗಾರಿಕೆ ಸ್ಥಾಪನೆಗೆ, ಅಲ್ಲಲ್ಲಿ ಕೋಲ್ಡ್ ಸ್ಟೋರೆಜ್ ತೆರೆಯಲು, ಸುಂಕಾತೊಣ್ಣೂರು ಏತ ನೀರಾವರಿಯಿಂದ ಹಳೇಬೀಡು ಕೆರೆಗೂ ನೀರು ತುಂಬಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.


ಈ ವೇಳೆ ಸೆಸ್ಕ್ ಅಧೀಕ್ಷಕ ಎಂಜಿನಿಯರ್ ಅತಿಗಸಬಾನ, ಎಕ್ಸೂಕಿಟಿವ್ ಎಂಜಿನಿಯರ್‌ ಕಿಶೋರ್, ಸಂತೋಷ್‌ಕುಮಾರ್, ಇಇ ಮಮತ, ಎಇಇ ರವಿಕುಮಾರ್, ಅಜೀತ್, ರೈತಸಂಘದ ಅಧ್ಯಕ್ಷ ಮಂಜುನಾಥ್, ಗುತ್ತಿಗೆದಾರ ಲಿಂಗೇಶ್, ಮುಖಂಡರಾದ ಕೆ.ಎಸ್.ದಯಾನಂದ್, ಹಳೇಬೀಡು ತಿಮ್ಮೇಗೌಡ, ಹೊಸಕೋಟೆ ವಿಜಯ್‌ಕುಮಾರ್, ಕೆನ್ನಾಳು ನಾಗರಾಜು, ಎಂಜಿನಿಯರ್ ರೂಪನಿತಿನ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ಮುಖಂಡರು ಹಾಜರಿದ್ದರು.