ಬೆಳೆಹಾನಿ ಪ್ರದೇಶಕ್ಕೆ ಶಾಸಕ ಪಾಟೀಲ ಭೇಟಿ

| Published : Apr 20 2025, 01:52 AM IST

ಸಾರಾಂಶ

ಹನುಮಸಾಗರ ಸುತ್ತುಮುತ್ತ ಶುಕ್ರವಾರ ಸಂಜೆ ಸುರಿದ ಮಳೆಯಿಂದ ಭಾರಿ ಹಾನಿಯಾಗಿದೆ. ವಿದ್ಯುತ್‌ ಕಂಬಗಳು ಧರೆಗುರುಳಿದ್ದು ಜೆಸ್ಕಾಂ ಸಿಬ್ಬಂದಿ ದುರಸ್ತಿ ಮಾಡಿದ್ದಾರೆ. ಬೆಳೆ ಹಾನಿ ಸಮೀಕ್ಷೆ ನಡೆಯಬೇಕಿದೆ.

ಹನುಮಸಾಗರ:

ಹನುಮಸಾಗರ ಸೇರಿದಂತೆ ವಿವಿಧೆಡೆ ಶುಕ್ರವಾರ ಸುರಿದ ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಶನಿವಾರ ಶಾಸಕ ದೊಡ್ಡನಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.

ಬಿರುಗಾಳಿಯಿಂದ ನೆಲಕ್ಕುರುಳಿದ ತೋಟದ ಬೆಳೆ, ಎಲೆಬಳ್ಳಿ ತೋಟ, ಮಾವಿನ ತೋಟಕ್ಕೆ ಭೇಟಿ ನೀಡಿದ ಶಾಕಸರು ರೈತರಿಂದ ಮಾಹಿತಿ ಪಡೆದುಕೊಂಡರು.

ಮಡಿಕೇರಿಯ ಮುದಿಯಪ್ಪ ಮುದಗಲ್ ಹಾಗೂ ಯೋಗಪ್ಪ ಹರಿಜನ ಅವರ ತಲಾ ಒಂದು ಎಕರೆ ವಿಳ್ಳೆದೇಲೆ, ಹೊಸಹಳ್ಳಿ ಸೀಮಾದಲ್ಲಿ ಬಸವರಾಜ ಹಳ್ಳೂರ ಅವರ ನಾಲ್ಕುವರೆ ಎಕರೆ ಮಾವಿನ ತೋಟ, ದ್ಯಾಮವ್ವ ಪರಸಪ್ಪ ಬಿಂಗಿ ಅವರ ೩ ಎಕರೆ ದಾಳಿಂಬೆ, ಮುದಟಗಿ ಸೀಮಾದ ಸಿರಾಜುದ್ಧೀನ್ ಮೂಲಿಮನಿ ಅವರ ಅರ್ಧ ಎಕರೆ ಸಸಿ ಸೇರಿದಂತೆ ಜೂಲಕಟ್ಟಿ, ಮಡಿಕೇರಿ, ಯರಗೇರಿ ಗ್ರಾಮಗಳಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ.

ಗಾಳಿಯಿಂದ ಮನ್ನೇರಾಳದಲ್ಲಿ ೬, ಕಬ್ಬರಗಿ ೪ ಹಾಗೂ ಕಾಟಾಪುರ ೨ ಭಾಗದ ೧೨ ವಿದ್ಯುತ್ ಕಂಬಗಳು ಬಿದ್ದಿದ್ದು ಅವುಗಳ ದುರಸ್ತಿಯನ್ನು ಜೆಸ್ಕಾಂ ಮಾಡಿದ್ದಾರೆ. ಯರಗೇರಿ ಭಾಗದಲ್ಲಿ ಪಂಪ್‌ಸೆಟ್‌ ಲೈನ್ ೫ ಕಂಬ ಹಾಗೂ ಹನುಮಸಾಗರಲ್ಲಿ ೪ ಕಂಬ ಬಿದ್ದಿದ್ದು ತೆರವುಗೊಳಿಸಿ ದುರಸ್ತಿ ಮಾಡಿ ವಿದ್ಯುತ್‌ ಪೂರೈಸಲಾಗಿದೆ. ಯರಗೇರಿ, ಬೆನಕನಾಳ, ಹೂಲಗೇರಿ ಭಾಗದಲ್ಲಿ ಪಂಪ್‌ಸೆಟ್ ಆರಂಭಿಸಲಾಗಿದೆ.

ಹಾರಿಹೋದ ತಗಡಿನ ಶೀಟ್‌

5ನೇ ವಾರ್ಡ್‌ನಲ್ಲಿ ಎರಡು ಮರ, ಕುಂಬಾರ ಓಣಿಯಲ್ಲಿ ವಿದ್ಯುತ್‌ ಕಂಬ ಬಿದ್ದಿವೆ. ಕುಮಾರ ಕಮ್ಮಾರ ಎಂಬುವವರ ಮನೆಯ ಮೇಲ್ಚಾವಣಿಯ ೧೨ ತಗಡಿನ ಶೀಟ್‌, ಮಿನಾಕ್ಷೀ ಮಾಲಿಪಾಟೀಲ ಅವರ ಎರಡು ತಗಡಿನ ಶೀಟ್‌ ಹಾರಿ ಹೋಗಿದ್ದು ಅವರ ಮೇಲೆ ಕಲ್ಲು ಬಿದ್ದ ಪರಿಣಾಮ ಗಾಯಗೊಂಡಿದ್ದಾರೆ. ಚಂದಾಲಿಂಗ ಹಾಗೂ ಮಾವಿನ ಇಟಗಿ ರಸ್ತೆ ಇಕ್ಕೆಲಗಳಲ್ಲಿ ಅರಣ್ಯ ಇಲಾಖೆ ನೆಟ್ಟಿದ್ದ ಗಿಡಗಳು ಬುಡಮೇಲಾಗಿ ನೆಲಕ್ಕೆ ಬಾಗಿದ್ದು ಶನಿವಾರ ತೆರವುಗೊಳಿಸಲಾಗಿದೆ. ಉಪವಲಯ ಅರಣ್ಯ ಅಧಿಕಾರಿ ರಮೇಶ ಕುಂಬಾರ ಮಾತನಾಡಿ, ಮರಗಳ ತೆರವು ಕಾರ್ಯಾಚರಣೆ ನಡೆದಿದೆ ಎಂದು ತಿಳಿಸಿದ್ದಾರೆ.