ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರಚಿಸಲು ಶಾಸಕ ಸೂಚನೆ

| Published : Oct 07 2024, 01:34 AM IST

ಸಾರಾಂಶ

ಯಳಂದೂರು: ಪಟ್ಟಣ ಪಂಚಾಯಿತಿ ಚಿಕ್ಕದಾಗಿದ್ದು ಇಲ್ಲಿನ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲು ಮಾಸ್ಟರ್ ಪ್ಲಾನ್‌ನ್ನು ರಚಿಸಿಕೊಟ್ಟಲ್ಲಿ ನಾನು ಸರ್ಕಾರದಿಂದ ವಿಶೇಷ ಅನುದಾನ ತಂದು ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.

ಯಳಂದೂರು: ಪಟ್ಟಣ ಪಂಚಾಯಿತಿ ಚಿಕ್ಕದಾಗಿದ್ದು ಇಲ್ಲಿನ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲು ಮಾಸ್ಟರ್ ಪ್ಲಾನ್‌ನ್ನು ರಚಿಸಿಕೊಟ್ಟಲ್ಲಿ ನಾನು ಸರ್ಕಾರದಿಂದ ವಿಶೇಷ ಅನುದಾನ ತಂದು ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.ಪಟ್ಟಣ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ: ಪಟ್ಟಣದಲ್ಲಿ ನೂತನವಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಇಂದಿರಾ ಕ್ಯಾಂಟೀನ್ ಬಳಿ ಇರುವ ೧.೧೫ ಎಕರೆ ಜಾಗದಲ್ಲಿ ೧.೦೫ ಎಕರೆ ಬಸ್ ನಿಲ್ದಾಣ ಮಾಡಲು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಆದಷ್ಟು ಬೇಗ ಈ ಕಾಮಗಾರಿ ಆರಂಭಿಸಲು ಕ್ರಮ ವಹಿಸಲಾಗುವುದು. ಅಲ್ಲದೆ ಸಮಗ್ರ ಕುಡಿಯುವ ನೀರಿಗೆ ೬ ಕೋಟಿ ರು. ಹಣ ಬಿಡುಗಡೆಯಾಗಿತ್ತು. ಈಗಾಗಲೇ ಇದಕ್ಕೆ ಮೂರು ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ ಮೂರು ಬಾರಿಯೂ ಒಬ್ಬರೇ ಟೆಂಡರ್ ಹಾಕಿರುವುದರಿಂದ ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಇದನ್ನು ಕಳುಹಿಸಿ ಇವರಿಗೆ ಟೆಂಡರ್ ನೀಡಲು ಕ್ರಮ ವಹಿಸಲಾಗುವುದು. ಆಗ ಇಲ್ಲಿನ ಕುಡಿವ ನೀರಿನ ಸಮಸ್ಯೆ ನೀಗಲಿದೆ. ಅಲ್ಲದೆ ಮುಳ್ಳೂರು ಗ್ರಾಮದಲ್ಲಿರುವ ಜಾಕ್‌ವೆಲ್‌ನಿಂದ ಪಟ್ಟಣಕ್ಕೆ ಕಾವೇರಿ ಕುಡಿಯುವ ನೀರು ಸರಬರಾಜಾಗುತ್ತಿದ್ದು ಮಧ್ಯ ಇರುವ ಗ್ರಾಮಗಳಿಗೂ ನೀರು ನೀಡಲಾಗುತ್ತಿದೆ. ಈಗ ಜೆಜೆಎಂ ಯೋಜನೆ ಜಾರಿಯಾಗಿದ್ದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಇದನ್ನು ಕಡಿತಗೊಳಿಸಲು ಕ್ರಮ ವಹಿಸಲಾಗುವುದು.

ಎಸ್‌ಎಫ್‌ಸಿ ಹಾಗೂ ೧೫ ನೇ ಹಣಕಾಸು ಸೇರಿ ವಿವಿಧ ಕಾಮಗಾರಿಗಳಿಗೆ ಪಟ್ಟಣದ ಅಭಿವೃದ್ಧಿಯ ಹೊಸ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅನುಮೋದನೆ ನೀಡಲಾಗಿದೆ. ಇದರೊಂದಿಗೆ ಪಂಚಾಯಿತಿಯಲ್ಲಿ ೪೦ ಮಂಜೂರು ಹುದ್ದೆಗಳಿದ್ದು ಇಲ್ಲಿ ಸಿಬ್ಬಂದಿ ಕೊರತೆ ಇದೆ. ಹುದ್ದೆ ಭರ್ತಿಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಹೈಮಾಸ್ಟ್ ವಿದ್ಯುತ್ ದೀಪಗಳ ದುರಸ್ತಿ, ಹಳೇ ಪಪಂ ಕಚೇರಿಯ ನವೀಕರಣ, ಸಂತೆಮಾಳದಲ್ಲಿರುವ ಅಂಗಡಿ ಮಳಿಗೆಗಳ ದುರಸ್ತಿಗೆ ಮನವಿ ಮಾಡಿದ್ದು ಇದನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದರು.

ಸತ್ತವರ ಹೆಸರಲ್ಲಿ ಇ-ಸ್ವತ್ತು: ಪಟ್ಟಣ ಪಂಚಾಯಿತಿಯ ೨ ನೇ ವಾರ್ಡಿನ ಸದಸ್ಯ ವೈ.ಜಿ. ರಂಗನಾಥ ಈ ವಾರ್ಡಿನ ಕಮ್ಮನಕೇರಿ ವ್ಯಾಪ್ತಿಯಲ್ಲಿ ಬಿಳಿಗಿರಿರಂಗನಾಯಕ ಎಂಬವರಿಗೆ ಇ-ಸ್ವತ್ತು ನೀಡಲಾಗಿದೆ. ಆದರೆ ಇವರು ಸತ್ತು ೧೦ ವರ್ಷಗಳ ಮೇಲಾಗಿದೆ. ಅಲ್ಲದೆ ನಾಡ ಹಂಚಿನ ಆರ್‌ಸಿಸಿ ಕಟ್ಟಡವೆಂದು ಪರಿಗಣಿಸಿ ಇ-ಸ್ವತ್ತು ನೀಡಲಾಗಿದ್ದು ಇದಕ್ಕೆ ಕಾರಣವಾಗಿರುವ ನೌಕರರ ವಿರುದ್ಧ ಕಾನೂನು ಕ್ರಮ ವಹಿಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಶಾಸಕರು ಕೆಲ ಕಾಲ ನೌಕರರು, ಮುಖ್ಯಾಧಿಕಾರಿಗಳ ವಿರುದ್ಧ ಗರಂ ಆದ ಪ್ರಸಂಗವೂ ಜರುಗಿತು. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ವಹಿಸಿ ಎಂದು ಮುಖ್ಯಾಧಿಕಾರಿಗೆ ಸೂಚನೆ ನೀಡಿದ ಪ್ರಸಂಗವೂ ನಡೆಯಿತು.ದೇಗುಲ, ಅಂಗನವಾಡಿಗೆ ಜಾಗ ನೀಡಿ: ಪಪಂನ ಒಂದನೇ ವಾರ್ಡಿನ ಸದಸ್ಯ ಮಹೇಶ್, ಈ ವಾರ್ಡ್ ವ್ಯಾಪ್ತಿಯಲ್ಲಿ ದೇಗುಲ ಹಾಗೂ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸ್ಥಳ ಮಂಜೂರು ಮಾಡಿ ಎಂದು ೨೦೨೦ ರಲ್ಲೇ ತೀರ್ಮಾನ ಮಾಡಲಾಗಿದೆ. ಆದರೂ ಜಾಗ ಗುರುತಿಸಿಲ್ಲ ಎಂದು ಸಭೆಯಲ್ಲಿ ದೂರಿದರು. ಈ ಬಗ್ಗೆ ಶೀಘ್ರದಲ್ಲೇ ಕ್ರಮ ವಹಿಸುವಂತೆ ಶಾಸಕರು ಸೂಚನೆ ನೀಡಿದರು.

ಕಟ್ಟಡ ತೆರವಿಗೆ ಕ್ರಮ: ಬಸ್ ನಿಲ್ದಾಣದಲ್ಲಿ ವಾಣಿಜ್ಯ ಕಟ್ಟಡವನ್ನು ರಾಷ್ಟ್ರೀಯ ಹೆದ್ದಾರಿ ೨೦೯ರ ಅಗಲೀಕರಣದ ಸಮಯದಲ್ಲಿ ಹಾಗೆ ಬಿಡಲಾಗಿದೆ. ಆದರೆ ಈ ಬಗ್ಗೆ ಪಂಚಾಯಿತಿ ಬಳಿ ಸೂಕ್ತ ದಾಖಲೆಗಳೇ ಇಲ್ಲ. ಹೈಕೋರ್ಟ್‌ನ ಆದೇಶವಿದೆ ಇದನ್ನು ತೆರವುಗೊಳಿಸಬಾರದು ಎಂಬ ಸಬೂಬು ನೀಡಿ ಈ ಕಟ್ಟಡ ಹಾಗೇ ಉಳಿಸಿಕೊಳ್ಳಲಾಗಿದೆ. ಅಲ್ಲದೆ ಇದನ್ನು ನವೀಕರಿಸಿ ಇಲ್ಲಿ ಅಂಗಡಿ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದ್ದು ಇದನ್ನು ತೆರವುಗೊಳಿಸುವಂತೆ ಶಾಸಕರಿಗೆ ಸದಸ್ಯರು ಮನವಿ ಮಾಡಿದರು. ಈ ಬಗ್ಗೆ ಡಿಸಿಗೆ ಕರೆ ಮಾಡಿ ತನಿಖೆ ನಡೆಸಿ ಕ್ರಮ ವಹಿಸುವಂತೆ ಶಾಸಕರು ಮನವಿ ಮಾಡಿದರು. ಆದಷ್ಟು ಬೇಗ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಗೌತಮ್ ಬಡಾವಣೆಯ ೧೦ ಜನರಿಗೆ ಸೇರಿದ ಇ-ಆಸ್ತಿ, ಕೆಇಬಿ ಕ್ವಾಟ್ರಸ್ ಇ-ಆಸ್ತಿ, ಎಲ್ಲಾ ನಿಧಿಗಳ ಜಮಾ ಖರ್ಚುಗಳನ್ನು ಓದಿ ಒಪ್ಪಿ ರೆಕಾರ್ಡ್ ಮಾಡುವುದೂ ಸೇರಿದಂತೆ ವಿವಿಧ ವಿಷಯಗಳು ಚರ್ಚೆಯಾದವು.

ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು ಉಪಾಧ್ಯಕ್ಷೆ ಶಾಂತಮ್ಮ ನಿಂಗರಾಜು, ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಮಹದೇವನಾಯಕ, ಸವಿತಾ ಬಸವರಾಜು, ಮಂಜು, ಪ್ರಭಾವತಿ, ಬಿ. ರವಿ, ಸುಶೀಲಾ ಪ್ರಕಾಶ್ ನಾಮ ನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಶ್ರೀಕಂಠಸ್ವಾಮಿ ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಜೆಇ ನಾಗೇಂದ್ರ, ಜಯಲಕ್ಷ್ಮಿ, ಲಕ್ಷ್ಮಿ, ರೇಖಾ, ಬಸವಣ್ಣ, ಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ಅನೇಕರು ಇದ್ದರು.