ವಿದ್ಯುತ್ ಪರಿವರ್ತಕ(ಟಿಸಿ) ವಿತರಣೆಯಲ್ಲಿ ವಿಳಂಬ, ಕರೆ ಸ್ವೀಕರಿಸದ ಅಧಿಕಾರಿಗಳ ನಡೆ ಹಾಗೂ ಸೂಚಿಸದ ಕೆಲಸಗಳನ್ನು ಮಾಡದ ಸಿಬ್ಬಂದಿ ಸೇವೆಯಿಂದ ಬೇಸತ್ತ ಶಾಸಕಿ ಕರೆಮ್ಮ ಜಿ.ನಾಯಕ, ಪಟ್ಟಣದ ಜೆಸ್ಕಾಂ ಕಚೇರಿಗೆ ಶುಕ್ರವಾರ ದಿಢೀರ್‌ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿದೆ.

ಕನ್ನಡಪ್ರಭ ವಾರ್ತೆ ದೇವದುರ್ಗ

ವಿದ್ಯುತ್ ಪರಿವರ್ತಕ(ಟಿಸಿ) ವಿತರಣೆಯಲ್ಲಿ ವಿಳಂಬ, ಕರೆ ಸ್ವೀಕರಿಸದ ಅಧಿಕಾರಿಗಳ ನಡೆ ಹಾಗೂ ಸೂಚಿಸದ ಕೆಲಸಗಳನ್ನು ಮಾಡದ ಸಿಬ್ಬಂದಿ ಸೇವೆಯಿಂದ ಬೇಸತ್ತ ಶಾಸಕಿ ಕರೆಮ್ಮ ಜಿ.ನಾಯಕ, ಪಟ್ಟಣದ ಜೆಸ್ಕಾಂ ಕಚೇರಿಗೆ ಶುಕ್ರವಾರ ದಿಢೀರ್‌ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿದೆ.

ಟಿಸಿಗಳಿಗಾಗಿ ನಿತ್ಯ ರೈತರು ನಮ್ಮ ಮನೆಗೆ ಬರುತ್ತದ್ದಾರೆ. ಇವತ್ತು, ನಾಳೆ ಎನ್ನುತಾ ಟಿಸಿಗಳ ವಿತರಣೆಗೆ ರೈತರನ್ನು ಗೋಳಾಡಿಸುತ್ತಿರುವಿರಿ ,ಕನಿಷ್ಟ ಸೌಜನ್ಯದ ವರ್ತನೆಯೇ ನಿಮ್ಮಲ್ಲಿ ಕಾಣುತ್ತಿಲ್ಲ. ಅನೇಕ ಬಾರಿ ಸಭೆಗಳಲ್ಲಿ ನೀಡಿರುವ ಸೂಚನೆಗಳನ್ನು ಕೂಡ ಪಾಲಿಸುತ್ತಿಲ್ಲ. ಕೆಲಸ ಮಾಡುವ ಇಚ್ಛೆ ಇದ್ದರೆ ಇಲ್ಲದಿದ್ದಲ್ಲಿ ಸೂಕ್ತ ಕ್ರಮಕ್ಕಾಗಿ ಇಂಧನ ಇಲಾಖೆ ಸಚಿವರಿಗೆ ಪತ್ರ ಬರೆಯವುದಾಗಿ ಶಾಸಕರು ಎಚ್ಚರಿಸಿದರು.

ತಾಲೂಕಿನಲ್ಲಿ ಕುಡಿವ ನೀರು,ರೈತರ ಪಂಪಸೆಟ್ ಹಾಗೂ ವಿದ್ಯುತ್ ಪೂರೈಕೆ ಸೇರಿದಂತೆ 5500 ಟಿಸಿಗಳಿವೆ. ನಿತ್ಯ 50ರಿಂದ 55 ಟಿಸಿಗಳು ದುರಸ್ತಿಗೆ ಬರುತ್ತವೆ. ದುರಸ್ತಿಗಾಗಿ ವಿಭಾಗೀಯ ಕಚೇರಿಗೆ ಕಳುಹಿಸಿ, ಪುನಃ ಅಲ್ಲಿಂದ ಟಿಸಿಗಳನ್ನು ತರಬೇಕು. ಇತ್ತೀಚಿಗೆ ರೈತರು ವಿದ್ಯುತ್ ಪೂರೈಕೆ ಮತ್ತು ಕುಡಿವ ನೀರಿನ ಸರಬರಾಜು ಮಾಡುವ ಟಿಸಿಗಳಿಂದ ಜಮೀನುಗಳಿಗೆ ನೀರು ಪಡೆಯುತ್ತಿರುವದರಿಂದ ಹೆಚ್ಚಿನ ಪ್ರಮಾಣದಲ್ಲಿ ಟಿಸಿಗಳು ಸುಟ್ಟುಹೋಗುತ್ತಿವೆ ಎಂದು ಎಇಇ ಶ್ರೀನಿವಾಸ, ಜೆಇ ವೆಂಕಟೇಶ ಶಾಸಕರ ಗಮನಕ್ಕೆ ತಂದರು.

ದೇವದುರ್ಗಕ್ಕೆ ಟಿಸಿಗಳ ದುರಸ್ತಿ ಕೇಂದ್ರ ಮಂಜೂರು ಮಾಡಲಾಗಿದ್ದರೂ, ಟಿಸಿಗಳ ಕೊರತೆ ಏಕೆ ಆಗುತ್ತದೆ ಎಂಬುದು ಅರ್ಥವಾಗುತ್ತಿಲ್ಲ. ಮುಂಗಾರು ಮಳೆ ಬಾರದೇ ರೈತರು ಸಂಕಷ್ಟದಲ್ಲಿದ್ದಾರೆ. ಈಗಾಗಲೇ ಬರಗಾಲ ಪ್ರದೇಶ ಎಂದು ಘೋಷಣೆಯಾಗಿದೆ. ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ, ದಯವಿಟ್ಟು ರೈತರೊಂದಿಗೆ ಸಹಕರಿಸಿ.

ಮೊದಲು ರೈತರ, ಗ್ರಾಹಕರ ಕರೆಗಳನ್ನು ಸ್ವೀಕರಿಸುವ ಪರಿಪಾಠ ಬೆಳಸಿಕೊಳ್ಳಿ. ಲೈನ್ಮನ್‌ಗಳ ಸೇವೆ ಕುರಿತು ಅನೇಕ ದೂರುಗಳು ಕೇಳಿಬರುತ್ತಿವೆ. ಮೊದಲ ನಿಮ್ಮ ಕಚೇರಿಯನ್ನು ಸುಧಾರಿಸಿಕೊಳ್ಳಿ. ಕಡ್ಡಾಯವಾಗಿ ಪ್ರಜಾಸೇವಾ ಅಂದೋಲನ ಸಭೆಗಳಿಗೆ ಪಾಲ್ಗೊಳ್ಳಿ. ಪ್ರತ್ಯೇಕವಾಗಿ ಹೋಬಳಿವಾರು ಗ್ರಾಹಕರ ಸಭೆ ಕರೆದು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಎಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಬಸನಗೌಡ ದೇಸಾಯಿ,ಮುಖಂಡರಾದ ಗೋವಿಂದರಾಜ್ ನಾಯಕ,ರಾಮಣ್ಣ ನಾಯಕ ಮದರಕಲ್,ಬಸವರಾಜ ಯರಮಸಾಳ,ರಮೇಶ ರಾಮನಾಳ,ಗೋವಿಂದನಾಯಕ ಜಾಲಹಳ್ಳಿ,ರಂಗಮ್ಮ ಕೆ.ಇರಬಗೇರಾ ಹಾಗೂ ಇತರರು ಇದ್ದರು.