ಹಗರಿಬೊಮ್ಮನಹಳ್ಳಿ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ ನಂತರದ ಶಿಕ್ಷಣ ಮೊಟಕಾಗುತ್ತಿರುವುದನ್ನು ಪರಿಗಣಿಸಿ ನಾನು ಶಾಸಕನಾಗಿದ್ದ ೧೦ ವರ್ಷಗಳ ಅವಧಿಯಲ್ಲಿ ಶೈಕ್ಷಣಿಕ ವಲಯದ ಅಭ್ಯುದಯಕ್ಕೆ ₹೮೦೦ ಕೋಟಿಗೂ ಹೆಚ್ಚು ಅನುದಾನ ಒದಗಿಸಿದ್ದೇನೆ ಎಂದು ಮಾಜಿ ಶಾಸಕ ಭೀಮಾನಾಯ್ಕ ತಿಳಿಸಿದರು.ತಾಲೂಕಿಗೆ ಅತಿಹೆಚ್ಚು ಅಂಕ ಗಳಿಸಿದ ವರಲಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿಯುತ ಪ್ರೌಢಶಾಲೆಯ ವಿದ್ಯಾರ್ಥಿನಿ ಸಹನಾ ಅವರ ನಿವಾಸಕ್ಕೆ ಶುಕ್ರವಾರ ಸಂಜೆ ತೆರಳಿ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಬಳಿಕ “ಕನ್ನಡಪ್ರಭ”ದೊಂದಿಗೆ ಮಾತನಾಡಿದರು.

ವಿದ್ಯಾರ್ಥಿನಿಲಯಗಳ ನಿರ್ಮಾಣ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಬಲೀಕರಣಕ್ಕೆ ಒತ್ತು ನೀಡಿದ್ದೆ. ಶಿಕ್ಷಣವೇ ಶಕ್ತಿ ಎಂಬ ಅಂಬೇಡ್ಕರ್ ಅವರ ಆಶಯವನ್ನು ಸಾಕಾರಗೊಳಿಸಲು ನನ್ನ ಆವಧಿಯಲ್ಲಿ ಪಟ್ಟಣ ಸಹಿತ ಪ್ರತಿ ಹೋಬಳಿ ಕೇಂದ್ರಗಳಲ್ಲಿ ೨೦ ವಿದ್ಯಾರ್ಥಿ ನಿಲಯಗಳನ್ನು ನಿರ್ಮಾಣ ಮಾಡಿದ್ದೇನೆ. ಜೊತೆಗೆ ಸರ್ಕಾರಿ ಪ್ರೌಢಶಾಲೆಗಳ ಶೈಕ್ಷಣಿಕ ಗುಣಮಟ್ಟ ಉನ್ನತೀಕರಿಸಲು ಸಾಕಷ್ಟು ಶ್ರಮಿಸಿದ್ದೇನೆ ಎಂದು ಪ್ರತಿಪಾದಿಸಿದರು.

ಇದಕ್ಕೂ ಮುನ್ನ ತೆಲುಗೋಳು ಗ್ರಾಮಕ್ಕೆ ತೆರಳಿದ್ದ ಅವರು, ವಿದ್ಯುತ್ ಅಪಘಾತದಲ್ಲಿ ಮೃತರಾದ ಗ್ರಾಮದ ರೈತ ರಾಜಪ್ಪ ಅವರ ಕುಟುಂಬಕ್ಕೆ ಗೆಸ್ಕಾಂ ವತಿಯಿಂದ ₹೫ ಲಕ್ಷ ಪರಿಹಾರ ನೀಡುವಂತೆ ದೂರವಾಣಿಯ ಮೂಲಕ ಸಂಬಂಧಿಸಿದ ಅಧಿಕಾರಿಗೆ ಕಟ್ಟುನಿಟ್ಟಾಗಿ ಸೂಚಿಸಿದರು. ನಂತರ ಕಿತ್ತನೂರು ಗ್ರಾಮಕ್ಕೆ ಭೇಟಿ ನೀಡಿ ಇತ್ತೀಚಿಗೆ ಹೊಸಪೇಟೆಯ ಬಳಿ ರಸ್ತೆ ಅಪಘಾತದಲ್ಲಿ ಮಡಿದ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕ ಧನಸಹಾಯ ಒದಗಿಸಿದರು.

ಇದೇ ವೇಳೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ತಂಬ್ರಹಳ್ಳಿಯ ಅಮಿತ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ವೈಯಕ್ತಿಕ ಪರಿಹಾರ ನೀಡಿ ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹಮದ್ ಸಮೇತ ಆಗಮಿಸಿ ಈ ಭಾಗದಲ್ಲಿ ರಸ್ತೆ ಅಪಘಾತದಲ್ಲಿ ಮಡಿದ ಕುಟುಂಬಗಳಿಗೆ ಶಾಶ್ವತ ಪರಿಹಾರ ವಿತರಿಸಲಾಗುತ್ತದೆ ಎಂಬ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಡಾ.ಸಾಹಿರಾ ಬಾನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ಮಹಿಳಾ ಘಟಕದ ಯಶೋಧಾ ಮಂಜುನಾಥ್, ಪುರಸಭೆಯ ಮಾಜಿ ಅಧ್ಯಕ್ಷ ಎಂ.ಮರಿ ರಾಮಣ್ಣ, ಸದಸ್ಯರಾದ ಪವಾಡಿ ಹನಮಂತಪ್ಪ, ಗಣೇಶ್, ಮುಖಂಡರಾದ ಹೆಗ್ಡಾಳು ರಾಮಣ್ಣ, ಗ್ಯಾರಂಟಿ ಸಮಿತಿಯ ಸೊನ್ನದ ಗುರುಬಸವರಾಜ್, ಚಿಂತ್ರಪಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಗುಂಡ್ರು ಹನಮಂತಪ್ಪ ಹಾಗೂ ಉಪ್ಪಾರ ಬಾಳಪ್ಪ ಮತ್ತಿತರರು ಇದ್ದರು.