ಟೆಂಡರ್‌ ವಿಚಾರದಲ್ಲಿ ಶಾಸಕ ರೇವಣ್ಣ ತಾಪಂ ಇಒ ವಾಗ್ವಾದ

| Published : Mar 07 2025, 11:46 PM IST

ಟೆಂಡರ್‌ ವಿಚಾರದಲ್ಲಿ ಶಾಸಕ ರೇವಣ್ಣ ತಾಪಂ ಇಒ ವಾಗ್ವಾದ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ತಾ.ಪಂ. ತಾಲೂಕು ಕಾರ್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ತಾಲೂಕಿನ ಗ್ರಾಮ ಪಂಚಾಯಿತಿ ಪಿಡಿಒಗಳ ಉಪಸ್ಥಿತಿಯಲ್ಲಿ ನಡೆಸಿದ ಸಭೆಯಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದರು. ತಾಲೂಕು ಪಂಚಾಯಿತಿಯಲ್ಲಿ ಕಂಪ್ಯೂಟರ್ ನಿರ್ವಹಣೆಗಾಗಿ ನಲವತ್ತು ಲಕ್ಷ ರು. ಗಳ ಟೆಂಡರ್ ಕರೆಯಾಗಿದೆ. ಆದರೆ ಟೆಂಡರ್ ಪ್ರಕ್ರಿಯೆ ಮಾಡಿರುವ ಅಧಿಕಾರಿಗಳು ನಲವತ್ತು ಲಕ್ಷದ ಟೆಂಡರ್‌ಗೆ ನಾಲ್ಕು ಕೋಟಿ ವ್ಯವಹಾರದ ವಹಿವಾಟು ತೋರಿಸಬೇಕೆಂದು ಟೆಂಡರ್‌ದಾರರಿಗೆ ತಾಕೀತು ಮಾಡಿ ಅವರ ಟೆಂಡರ್‌ ಅನ್ನು ಮೂಲೆಗುಂಪು ಮಾಡಿದ್ದಾರೆ ಎಂದು ತಾಪಂ ಅಧಿಕಾರಿಯನ್ನು ತೀವ್ರವಾಗಿ ತರಾಟೆ ತಗೆದುಕೊಂಡರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ನೀನು ಇನ್ನೂ ೧೫ಕ್ಕೂ ಹೆಚ್ಚು ವರ್ಷಗಳು ಸರ್ಕಾರಿ ಸೇವೆಯಲ್ಲಿ ಇರಬೇಕು. ಇಲ್ಲಸಲ್ಲದ ಕಾನೂನುಗಳನ್ನು ಹೇರುವ ಮೂಲಕ ತೊಂದರೆಗೆ ಸಿಕ್ಕಿಕೊಳ್ಳಬೇಡ. ಸರ್ಕಾರದ ನಿಯಮದಂತೆ ಟೆಂಡರ್ ಕರೆದು ಅರ್ಹ ವ್ಯಕ್ತಿಗಳಿಗೆ ಗುತ್ತಿಗೆ ನೀಡು. ಕಾನೂನು ಮೀರಿ ನಾ ಹೇಳಿದ ವ್ಯಕ್ತಿಗೆ ಕೊಡು ಎಂದು ಹೇಳುತ್ತಿಲ್ಲ. ಅರ್ಹ ವ್ಯಕ್ತಿಗಳನ್ನು ಗುರುತಿಸಿ ಕೊಡಿ ಎಂದು ಶಾಸಕ ಎಚ್.ಡಿ.ರೇವಣ್ಣ ತಾಲೂಕು ಪಂಚಾಯ್ತಿ ಇಒ ಮುನಿರಾಜು ಅವರಿಗೆ ಸಲಹೆ ನೀಡಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ತಾ.ಪಂ. ತಾಲೂಕು ಕಾರ್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ತಾಲೂಕಿನ ಗ್ರಾಮ ಪಂಚಾಯಿತಿ ಪಿಡಿಒಗಳ ಉಪಸ್ಥಿತಿಯಲ್ಲಿ ನಡೆಸಿದ ಸಭೆಯಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದರು. ತಾಲೂಕು ಪಂಚಾಯಿತಿಯಲ್ಲಿ ಕಂಪ್ಯೂಟರ್ ನಿರ್ವಹಣೆಗಾಗಿ ನಲವತ್ತು ಲಕ್ಷ ರು. ಗಳ ಟೆಂಡರ್ ಕರೆಯಾಗಿದೆ. ಆದರೆ ಟೆಂಡರ್ ಪ್ರಕ್ರಿಯೆ ಮಾಡಿರುವ ಅಧಿಕಾರಿಗಳು ನಲವತ್ತು ಲಕ್ಷದ ಟೆಂಡರ್‌ಗೆ ನಾಲ್ಕು ಕೋಟಿ ವ್ಯವಹಾರದ ವಹಿವಾಟು ತೋರಿಸಬೇಕೆಂದು ಟೆಂಡರ್‌ದಾರರಿಗೆ ತಾಕೀತು ಮಾಡಿ ಅವರ ಟೆಂಡರ್‌ ಅನ್ನು ಮೂಲೆಗುಂಪು ಮಾಡಿದ್ದಾರೆ ಎಂದು ತಾಪಂ ಅಧಿಕಾರಿಯನ್ನು ತೀವ್ರವಾಗಿ ತರಾಟೆ ತಗೆದುಕೊಂಡರು.

ಸರ್ಕಾರದ ನೀತಿ ನಿಯಮಗಳನ್ನು ಸರಿಯಾಗಿ ಅನುಷ್ಠಾನ ಮಾಡುತ್ತಿಲ್ಲ. ಅಧಿಕಾರಿಗಳಾದ ತಾವುಗಳು ಕರೆದಿರುವ ಟೆಂಡರ್‌ಗೆ ನಾಲ್ಕು ಕೋಟಿ ವಹಿವಾಟು ಮಾಹಿತಿ ನೀಡಿದವರಿಗೆ ಮಾತ್ರ ಟೆಂಡರ್ ಪ್ರಕ್ರಿಯೆಲ್ಲಿ ಭಾಗವಹಿಸುವುದಕ್ಕೆ ಅವಕಾಶ ಇದೆ ಎಂಬುದನ್ನು ತಾಪಂ ಮುನಿರಾಜು ಮತ್ತೇ ಮತ್ತೇ ಹೇಳಿದ್ದರಿಂದ ಬೇಸರಗೊಂಡ ಶಾಸಕ ರೇವಣ್ಣ, ಅಲ್ರೀ 40 ಲಕ್ಷದ ಟೆಂಡರ್ ಕಾಮಗಾರಿಗೆ ಟೆಂಡರ್ ಹಾಕುವ ಗುತ್ತಿಗೆದಾರ ಕನಿಷ್ಠ ೨೦ ಲಕ್ಷದ ವಹಿವಾಟಿನ ಮಾಹಿತಿ ನೀಡಬೇಕು. ಆದರೆ ತಾವು ನಾಲ್ಕು ಕೋಟಿ ಎಂದು ಹೇಳುತ್ತಿರುವುದಕ್ಕೆ ಲಿಖಿತದಲ್ಲಿ ಬರೆದುಕೊಡಿ, ಅಥವಾ ದಾಖಲೆ ನೀಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಶಾಸಕರ ಈ ಮಾತಿಗೆ ಉತ್ತರಿಸಿದ ತಾಪಂ ಇಒ ಮುನಿರಾಜು, ಸರ್ಕಾರ ನಮಗೆ ನೀಡಿರುವ ಮಾಹಿತಿ ಪ್ರಕಾರ ಟೆಂಡರ್ ಕರೆಯಲಾಗಿದೆ. ನಾವು ಯಾವ ನೀತಿ ನಿಯಮಾವಳಿಯನ್ನು ಗಾಳಿಗೆ ತೂರಿಲ್ಲ ಎಂದು ತಮ್ಮ ಮೊದಲಿನ ಮಾತಿಗೆ ಸಮರ್ಥನೆ ನೀಡಿದರು. ಈ ಮಾತಿಗೆ ಶಾಸಕ ರೇವಣ್ಣ ನಾನು ಲೋಕೋಪಯೋಗಿ ಮಂತ್ರಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಆದರೆ ನೀವು ನೀಡುತ್ತಿರುವ ಮಾಹಿತಿಯಾಗಲಿ, ಕಾನೂನಾಗಲಿ ಇಲ್ಲ ಎಂದು ತಿಳಿಸಿ ನೀವು ಹೇಳುತ್ತಿರುವ ಟೆಂಡರ್ ಪ್ರಕ್ರಿಯೆಯನ್ನು ಕ್ಯಾನ್ಸ್‌ಲ್ ಮಾಡಿ ರೀ ಟೆಂಡರ್ ಕರೆಯಿರಿ ಎಂದು ತಿಳಿಸಿದರು. ಈ ಬಗ್ಗೆ ತಾವು ಜಿಲ್ಲಾ ಪಂಚಾಯಿತಿ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿ ಸಭಾಂಗಣದಿಂದ ಮೇಲೆದ್ದು ತಹಸೀಲ್ದಾರ್ ಕೊಠಡಿಗೆ ತೆರಳಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರತ್ಯೇಕವಾಗಿ ಮಾತನಾಡಲು ತೆರಳಿದರು.

ನರೇಗಾ ಕಾಮಗಾರಿಗಳು ನಡೆಯಬೇಕಾದ ಪರಿಶಿಷ್ಟ ಜಾತಿ ವರ್ಗದ ಬಡಾವಣೆಗಳಲ್ಲಿ ನಡೆಸದೆ ಬಹುಸಂಖ್ಯಾತರು ವಾಸಿಸುವ ಬಡಾವಣೆಗಳಲ್ಲಿ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಜೊತೆಗೆ ನರೇಗಾ ಕಾಮಗಾರಿಗಳು ಒಂದೊಂದು ಗ್ರಾಮದಲ್ಲಿ ಸುಮಾರು ಐವತ್ತು ಲಕ್ಷದಷ್ಟು ಕಾಮಗಾರಿಯನ್ನು ನಡೆಸುತ್ತಾ ಇರುವುದು ಸರಿಯಲ್ಲ, ಗ್ರಾಮಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ತಂದಿರುವ ನರೇಗಾ ಕಾಮಗಾರಿಗಳು ಮನಬಂದಂತೆ ನಡೆಸುತ್ತಾ ಬಂದಿರುವುದರಿಂದ ನೈಜವಾಗಿ ಉಪಯೋಗ ಆಗಬೇಕಿರುವ ಬಡಾವಣೆಗಳಲ್ಲಿ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.